ಅರಬ್ಬೀ ಸಮುದ್ರ ಟಗ್ ಅವಘಡ; ತನಿಖಾ ತಂಡ ರಚಿಸಿ ವರದಿಗೆ ಸೂಚನೆ
ಮಂಗಳೂರು, ಮೇ 17: ತೌಕ್ತೆ ಚಂಡಮಾರುತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರವಾಸ ಕೈಗೊಂಡು, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಾಹಿತಿ ಪಡೆದುಕೊಂಡ ಸಚಿವ ಆರ್.ಅಶೋಕ್, ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಹತ್ವದ ವಿಚಾರವನ್ನು ಪ್ರಸ್ತಾಪಿಸಿದರು.
ಅರಬ್ಬೀ ಸಮುದ್ರದಲ್ಲಿ ನೇವಿ-ಕೋಸ್ಟ್ ಗಾರ್ಡ್ ರೋಚಕ ಕಾರ್ಯಾಚರಣೆ: 9 ಮಂದಿ ರಕ್ಷಣೆ
ಮಂಗಳೂರಿನಲ್ಲಿ ಒಟ್ಟು 168 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು, 182 ಕುಟುಂಬಗಳಿಗೆ ಚಂಡಮಾರುತ ಸಂಕಷ್ಟ ತಂದಿದೆ. ಈ 182 ಕುಟುಂಬಗಳಿಗೂ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಚಂಡಮಾರುತದ ಪರಿಣಾಮ 87 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 63 ಮನೆಗಳು ಭಾಗಶಃ ಹಾನಿಯಾಗಿದೆ. ಈ ಮನೆಗಳಿಗೆ 1ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. 23 ಮನೆಗಳು ಪೂರ್ತಿ ಹಾನಿಯಾಗಿದ್ದು, ಆ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಆರ್.ಅಶೋಕ್ ಸೂಚಿಸಿದ್ದಾರೆ.
ಅರಬ್ಬೀ ಸಮುದ್ರದ ಟಗ್ ದುರಂತದಲ್ಲಿ 3 ಮಂದಿ ಸಾವನ್ನಪ್ಪಿದ್ದು, 3 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಮೃತ ಕುಟುಂಬಗಳಿಗೆ ಎಂ.ಆರ್.ಪಿ.ಎಲ್ನಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಧನ ನೀಡಲು ಸರ್ಕಾರ ಆದೇಶಿಸಿದೆ. ಅಲ್ಲದೆ ಟಗ್ ದುರಂತದ ಬಗ್ಗೆ ಕಂಪೆನಿಗಳು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತಂಡ ವರದಿ ನೀಡಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರ್.ಅಶೋಕ್ ಹೇಳಿದರು.
ಅಲ್ಲದೆ ಟಗ್ ನಲ್ಲಿ 20 ಸಾವಿರ ಲೀಟರ್ ಡೀಸೆಲ್ ಇದ್ದು, ಅದನ್ನು ತಕ್ಷಣ ತೆಗೆಯುವಂತೆ ಕಂಪೆನಿಗೆ ನೊಟೀಸ್ ನೀಡಲಾಗಿದೆ. ಡೀಸೆಲ್ ತೆರವಿಗೆ ಸಮಯ ನೀಡಲಾಗಿದ್ದು, ಡಿಸೇಲ್ ತೆರವು ಮಾಡದಿದ್ದಲ್ಲಿ ಸಮುದ್ರದ ನೀರು ಮಾಲಿನ್ಯವಾಗುವ ಸಾಧ್ಯತೆಗಳಿವೆ ಎಂದು ಸಚಿವರು ತಿಳಿಸಿದರು.
ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ 22 ತಾಲ್ಲೂಕಗಳ 333 ಕಡೆಗಳಲ್ಲಿ ಹಾನಿಯಾಗಿದ್ದು, ಒಟ್ಟು 6 ಜೀವ ಹಾನಿಯಾಗಿದೆ. 2.87 ಹೆಕ್ಟರ್ ಭೂ ಪ್ರದೇಶದಲ್ಲಿ ಹಾನಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದೇನೆ. ಮೂರು ಜಿಲ್ಲಾಡಳಿತದಲ್ಲಿ 106 ಕೋಟಿ ರೂಪಾಯಿ ಹಣವಿದ್ದು, ಖರ್ಚು ಮಾಡಲು ಸೂಚನೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರ್.ಅಶೋಕ್ ಮಾಹಿತಿ ನೀಡಿದರು.