ಮಂಗಳೂರು ಪತ್ರಕರ್ತರು ಪ್ರದರ್ಶಿಸುತ್ತಿದ್ದ ಯಕ್ಷಗಾನಕ್ಕೆ ಅವಮಾನ
ಮಂಗಳೂರು ಪತ್ರಕರ್ತರು ಪ್ರದರ್ಶಿಸುತ್ತಿದ್ದ ಯಕ್ಷಗಾನಕ್ಕೆ ಅವಮಾನ
ಮಂಗಳೂರು ಜನವರಿ 05: ಪತ್ರಕರ್ತರ ಯಕ್ಷಗಾನ ಪ್ರದರ್ಶನದ ವೇಳೆ ಸಭಾಂಗಣದ ಸಿಬ್ಬಂದಿ ದುರ್ವರ್ತನೆ ತೋರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲೇ ಮೈಕ್, ಲೈಟ್ ತೆಗೆದು ಅವಮಾನ ಮಾಡಿದವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಮಂಗಳೂರಿನ ಉರ್ವ ಲೇಡಿಹಿಲ್ ಚರ್ಚ್ ಹಾಲ್ನಲ್ಲಿ ಪ್ರೆಸ್ಕ್ಲಬ್ ಡೇ ಇಂದು ಆಚರಿಸಲಾಗುತ್ತಿತ್ತು. ಕಾರ್ಯಕ್ರಮದ ಅಂಗವಾಗಿ ಪತ್ರಕರ್ತರಿಂದ ಯಕ್ಷಗಾನ ನರಕಾಸುರ ಮೋಕ್ಷ, ಮೈಂದ -ದ್ವಿವಿದ ಕಾಳಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪತ್ರಕರ್ತರ ಯಕ್ಷಗಾನ ನಡೆಯುತ್ತಿದ್ದ ವೇಳೆ ಚರ್ಚ್ ಹಾಲ್ ನ ಮ್ಯಾನೇಜರ್ ಧ್ವನಿವರ್ಧಕ ಮತ್ತು ರಂಗಸ್ಥಳದ ಲೈಟ್ ಆಫ್ ಮಾಡಿ, ಯಕ್ಷಗಾನಕ್ಕೆ ಅವಮಾನ ಮಾಡಿದ ಪ್ರಸಂಗ ನಡೆದಿದೆ.
ಸುದ್ದಿಗಳ ಹಿಂದೆ ಓಡಿ ಬ್ರೇಕಿಂಗ್ ನ್ಯೂಸ್ ನೀಡುವ ದಿನನಿತ್ಯದ ಜಂಜಾಟ ನಡುವೆಯೂ ಪತ್ರಕರ್ತರೆಲ್ಲ ಬಿಡುವು ಮಾಡಿಕೊಂಡು ಯಕ್ಷಗುರು ರಾಮಚಂದ್ರ ರಾವ್ ಎಲ್ಲೂರು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ನರಕಾಸುರ ವಧೆ, ಮೈಂದ ದ್ವಿವಿಧ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದರು. 1.45 ಗಂಟೆಯ ಯಕ್ಷಗಾನ ಅವಧಿ.
ಆದರೆ ಸಭಾ ಕಾರ್ಯಕ್ರಮಗಳು ವಿಳಂಬವಾದ ಕಾರಣ ಮಧ್ಯಾಹ್ನ 1.30ರ ಬಳಿಕ ಯಕ್ಷಗಾನ ಆರಂಭವಾಗಿತ್ತು. 3 ಗಂಟೆಯಾಗುತ್ತಿದ್ದಂತೆಯೇ ಸಭಾಂಗಣದ ಅವಧಿ ಮುಗಿಯಿತು ಎಂದು ಮ್ಯಾನೇಜರ್ ಧ್ವನಿವರ್ಧಕ ಬಂದ್ ಮಾಡಿಸಿದರು. ಸಿಬ್ಬಂದಿ ವೇದಿಕೆಯಿಂದ ಮೈಕ್ ಗಳನ್ನು ಎಳೆದುಕೊಂಡು ಹೋದರು.
ಈನಡುವೆಯೂ ಮಹಿಳಾ ಭಾಗವತರು ಮೈಕ್ ಇಲ್ಲದಿದ್ದರೂ ಎದೆಗುಂದದೆ ಭಾಗವತಿಕೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಲೈಟ್ ಕೂಡಾ ಆಫ್ ಮಾಡಿದರು. ನೋವಾದರೂ ತೋರಿಸದ ಪತ್ರಕರ್ತರು ಧ್ವನಿವರ್ಧಕ, ಲೈಟ್ ಇಲ್ಲದೆಯೂ 20 ನಿಮಿಷಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಿ, ಮಂಗಲ ಹಾಡಿದರು.
ಹಾಲ್ ನ ಸಿಬ್ಬಂದಿ ತೋರಿದ ದುರ್ವತನೆ ಬಗ್ಗೆ ಯಕ್ಷ ಗುರು ರಾಮಚಂದ್ರ ಭಟ್ ವಿಷಾದಿಸಿದ್ದಾರೆ. ಸಂಘಟಕರಿಗೆ ಅವಮಾನ ಅಥವಾ ಪತ್ರಕರ್ತರಿಗೆ ಆದ ಅವಮಾನ ಅಲ್ಲ. ಯಕ್ಷಗಾನ ನಡೆಯುತ್ತಿದ್ದಾಗಲೇ ಮೈಕ್, ಲೈಟ್ ಕಿತ್ತು ಹಾಕುವುದು ಕಲೆಗೆ ಮಾಡುವ ಘೋರ ಅವಮಾನ. ನನ್ನ ಇಡೀ ಯಕ್ಷಗಾನ ಬದುಕಿನಲ್ಲಿ ಈ ರೀತಿ ಆಗಿಲ್ಲ. ಚರ್ಚ್ ಮಾಲೀಕರು, ಸಿಬ್ಬಂದಿ ಕ್ಷಮೆ ಯಾಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.