'ಕೇಂದ್ರದ ನೂತನ ಮಸೂದೆಯಿಂದ ಕೈಗಾರಿಕೆಗಳಿಗೆ ತೊಂದರೆ'
ಮಂಗಳೂರು, ಡಿಸೆಂಬರ್ 11: ಕೇಂದ್ರ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಖ್ಯಾನ ಬದಲಾವಣೆ ಮಾಡಿ ಮಸೂದೆ ಜಾರಿಗೊಳಿಸಲು ಹೊರಟಿದ್ದು, ಇದರಿಂದ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಭಾರಿ ಹೊಡೆತ ಬೀಳಲಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ದ ಅಧ್ಯಕ್ಷ ಬಸವರಾಜ ಎಸ್. ಜವಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿ ವ್ಯಾಖ್ಯಾನವನ್ನು ಸಂಪೂರ್ಣ ಬದಲು ಮಾಡುವುದರಿಂದ ದೊಡ್ಡ ಕೈಗಾರಿಕೆಗಳು ಬಹುದೊಡ್ಡ ಸಂಖ್ಯೆಯಲ್ಲಿ ಈ ಕಾಯ್ದೆಯ ಅಡಿಗೆ ಬಂದು ಸಣ್ಣ ಕೈಗಾರಿಕೆಗಳಿಗೆ ಸಿಗುವ ಸವಲತ್ತುಗಳನ್ನು ಕಸಿದುಕೊಳ್ಳಲಿವೆ. ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಅಳಿವಿನಂಚಿಗೆ ಸಾಗಲಿವೆ.
ಬಳ್ಳಾರಿಯಲ್ಲಿ 30 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಆರ್ಸೆಲರ್ ಮಿತ್ತಲ್
ಇಂತಹ ಹೊಸ ಕರಡು ಮಸೂದೆ ಡಿಸೆಂಬರ್ 11 ರಿಂದ ನಡೆಯುವ ಲೋಕಸಭಾ ಅಧಿವೇಶನದಲ್ಲಿ ಚರ್ಚೆಗೆ ಬರಲಿದ್ದು, ಅದಕ್ಕಿಂತ ಮೊದಲೇ ಕೇಂದ್ರ ಎಂಎಸ್ಎಂಇ ಸಚಿವರನ್ನು ಭೇಟಿಯಾಗಿ ಹೊಸ ವ್ಯಾಖ್ಯಾನವನ್ನು ಕೈಬಿಡುವಂತೆ ಮನವಿ ಸಲ್ಲಿಸಲಿದ್ದೇವೆ ಎಂದು ಜವಳಿ ಹೇಳಿದರು.
ದೇಶದಲ್ಲಿ ಇದುವರೆಗೆ ಘಟಕ ಮತ್ತು ಯಂತ್ರೋಪಕರಣಗಳಲ್ಲಿ ಬಂಡವಾಳ ಹೂಡಿಕೆಯ ಆಧಾರದ ಮೇಲೆ ಎಂಎಸ್ಎಂಇಗಳನ್ನು ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ ಈಗ ಹೊಸ ವ್ಯಾಖ್ಯಾನ ನಡೆದಿರುವುದು ಕೈಗಾರಿಕೆಗಳ ವಹಿವಾಟು ಆಧಾರದ ಮೇಲೆ. ಹೀಗೆ ಮಾಡುವುದರಿಂದ ಶೇ.70ರಷ್ಟು ಉದ್ಯೋಗ ಸೃಷ್ಟಿ ಮಾಡುತ್ತಿರುವ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಮಸ್ಯೆಯಾಗಲಿದೆ. ಉದ್ಯೋಗ ಸೃಷ್ಟಿಗೂ ದೊಡ್ಡ ಹೊಡೆತ ಬೀಳಲಿದೆ ಎಂದು ಹೇಳಿದರು.
ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ: ಜಿ ಪರಮೇಶ್ವರ
ಇದು ನಿಜಕ್ಕೂ ತೀವ್ರ ಆತಂಕಕಾರಿ ಬದಲಾವಣೆ ಹಾಗೂ ಅನೇಕ ಸಣ್ಣ ತಯಾರಿಕಾ ಘಟಕಗಳ ಅನಿರೀಕ್ಷಿತ ಗಂಭೀರ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು. ಹೊಸ ಅರ್ಥ ವಿವರಣೆಯು ದೊಡ್ಡ ಸಂಖ್ಯೆಯ ಘಟಕಗಳು ಮತ್ತು ವ್ಯಾಪಾರಿ ಸಂಸ್ಥೆಗಳು ಎಂಎಸ್ಎಂಇ ವ್ಯಾಪ್ತಿಯೊಳಗೆ ಸೇರಲು ಅವಕಾಶ ದೊರೆಯುತ್ತದೆ. ಇದರಿಂದ ಎಂಎಸ್ಎಂಇಗಳಿಗೆ ದೊರೆಯಬೇಕಾದ ಸೌಲಭ್ಯಗಳು ನಷ್ಟವಾಗುತ್ತವೆ ಎಂದು ಬಸವರಾಜ ಎಸ್. ಜವಳಿ ತಿಳಿಸಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾಯ್ದೆ 2006 ರ ಪ್ರಕಾರ, 25ಲಕ್ಷ ರೂಪಾಯಿವರೆಗಿನ ಕೈಗಾರಿಕೆಗಳನ್ನು ಸೂಕ್ಷ್ಮ ಕೈಗಾರಿಕೆಗಳನ್ನಾಗಿಯೂ, 25 ಲಕ್ಷ ರೂ .ಗಿಂತ 5 ಕೋಟಿ ರೂ.ವರೆಗೆ ಸಣ್ಣ ಕೈಗಾರಿಕೆಗಳೆಂದೂ, 5 ಕೋಟಿ ರೂಪಾಯಿಗಳಿಂದ 10 ಕೋಟಿ ರೂಪಾಯಿ ವರೆಗೆ ಮಧ್ಯಮ ಕೈಗಾರಿಕೆಯೆಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಸೂಕ್ಷ್ಮ ಕೈಗಾರಿಕೆಗಳ ಮಿತಿಯನ್ನು5 ಕೋಟಿ ರೂಪಾಯಿವರೆಗೆ, ಸಣ್ಣ ಕೈಗಾರಿಕೆಗಳ ಮಿತಿಯನ್ನು5 ರಿಂದ 75 ಕೋಟಿ ರೂಪಾಯಿವರೆಗೆ, ಮಧ್ಯಮ ಕೈಗಾರಿಕೆಗಳ ಮಿತಿಯನ್ನು 75ರಿಂದ 250 ಕೋಟಿ ರೂಪಾಯಿವರೆಗೆ ಹೆಚ್ಚಿಸಿ ಹೊಸ ವ್ಯಾಖ್ಯಾನ ಮಾಡಿ ಕರಡು ಮಸೂದೆ ಜಾರಿಗೆ ಮುಂದಾಗಿದೆ.
ತೆಂಗು ಬೆಳೆ-ನಾರಿನ ಉದ್ಯಮ ಪುನಶ್ಚೇತನಕ್ಕೆ ಕ್ರಿಯಾ ಯೋಜನೆ
ಹೀಗೆ ಮಾಡುವುದರಿಂದ ಶೇ.70ರಷ್ಟು ಉದ್ಯೋಗ ಸೃಷ್ಟಿ ಮಾಡುತ್ತಿರುವ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಸೂಕ್ಷ್ಮ ಕೈಗಾರಿಕೆಗಳಿಗೆ 2 ಕೋಟಿ ರೂ. ವರೆಗಿನ ಮಿತಿಯನ್ನೂ, ಸಣ್ಣ ಕೈಗಾರಿಕೆಗಳಿಗೆ 25ಕೋಟಿ ರೂಪಾಯಿ ಮಧ್ಯಮ ಕೈಗಾರಿಕೆಗಳಿಗೆ 50ಕೋಟಿ ರೂಪಾಯಿ ಮಿತಿಯನ್ನು ನಿಗದಿಗೊಳಿಸಬೇಕು ಎಂದು ಜವಳಿ ಆಗ್ರಹಿಸಿದರು.