ಕರಾವಳಿಯಲ್ಲಿ ಮಳೆ ಅಬ್ಬರ, ರೆಡ್ ಅಲರ್ಟ್ ಘೋಷಣೆ ಬಂಟ್ವಾಳಕ್ಕೆ ಸಚಿವರ ಭೇಟಿ
ಮಂಗಳೂರು, ಜುಲೈ 7: ರಾಜ್ಯದ ಕರಾವಳಿಯಲ್ಲಿ ಆರಿದ್ರಾ ಮಳೆ ಅಬ್ಬರಿಸುತ್ತಿದೆ. ಭಾರೀ ಮಳೆಗೆ ಜನಜೀವನ ತತ್ತರಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಗುಡ್ಡ ಕುಸಿತವಾಗಿ ಮೂವರು ಬಲಿಯಾಗಿದ್ದಾರೆ. ಇನ್ನೂ ಕೆಲವು ಕಡೆ ರಸ್ತೆಗಳು ಕುಸಿದು ಬಿದ್ದು ಸಂಚಾರ ಸ್ಥಗಿತಗೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ರಣಭೀಕರ ಮಳೆಗೆ ಜೀವಹಾನಿ ಸೇರಿದಂತೆ ಅವಘಡಗಳು ಸಂಭವಿಸಿದೆ. ಬಂಟ್ಬಾಳ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿತವಾಗಿ ಮೂವರು ಸಾವನ್ನಪ್ಪಿದ್ದಾರೆ. ಕಾರ್ಲೋ ಎಂಬವರು ತಮ್ಮ ರಬ್ಬರ್ ತೋಟದ ಕಾರ್ಮಿಕರಿಗೆ ತಮ್ಮ ಮನೆಯ ಪಕ್ಕದ ಕಟ್ಟಡವೊಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಕೆಲಸ ಮುಗಿಸಿ ಐವರು ಕಾರ್ಮಿಕರು ತಮ್ಮ ಕೊಠಡಿಯಲ್ಲಿದ್ದಾಗ ಏಕಾಏಕಿ ಗುಡ್ಡ ಕುಸಿತವಾಗಿದೆ.
ಘಟನೆಯಲ್ಲಿ ಒಬ್ಬರು ಹೊರಗಡೆ ಬಂದು ಬಚವಾಗಿದ್ದರೆ, ಒಬ್ಬ ಕಾರ್ಮಿಕ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಮಣ್ಣಿನಡಿ ಸಿಲುಕಿದ್ದ ಉಳಿದ ಮೂವರನ್ನು ರಕ್ಷಣಾ ಕಾರ್ಯಚರಣೆ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಒಬ್ಬರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತಪಟ್ಟವರನ್ನು ಕೇರಳ ಮೂಲದ ಬಾಬು, ಸಂತೋಷ್, ಅಲ್ಫೋನ್ಸಾ ಎಂದು ಗುರುತಿಸಲಾಗಿದೆ.
ದ.ಕದಲ್ಲಿ ರೆಡ್ ಅಲರ್ಟ್, ಬಂಟ್ವಾಳದಲ್ಲಿ ಮನೆ ಮೇಲೆ ಗುಡ್ಡಕುಸಿತ, 3 ಕಾರ್ಮಿಕರು ಸಾವು
ಮೂವರ ಸಾವು
ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸ್ಥಳೀಯರಾದ ರಮೇಶ, ನಾನೂ ಕಾರ್ಲೋ ಅವರ ಮನೆಗೆ ದಿನಗೂಲಿ ನೌಕರನಾಗಿದ್ದೇನೆ. ನಾನು ಸಂಜೆ ಐದು ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗಿದ್ದೆ. ಸಂಜೆ ಏಳು ಗಂಟೆಗೆ ಈ ಅವಘಡ ಸಂಭವಿಸಿದೆ. ಕೂಡಲೇ ನಾನು ಮತ್ತು ಸ್ಥಳೀಯರು ಬಂದು ರಕ್ಷಣೆ ಮಾಡಲು ಪ್ರಯತ್ನ ಮಾಡಿದೆವು. ಒಬ್ಬನನ್ನು ಮಾತ್ರ ಆಗಲೇ ರಕ್ಷಣೆ ಮಾಡೋಕೆ ಸಾಧ್ಯವಾಯಿತು. ಉಳಿದ ನಾಲ್ವರು ಮಣ್ಣಿನ ಅಡಿ ಭಾಗದಲ್ಲಿದ್ದರು. ಮೂವರು ಮೃತರಾಗಿರೋದು ತುಂಬಾ ದುಃಖ ತಂದಿದೆ ಅಂತಾ ರಮೇಶ ಹೇಳಿದ್ದಾರೆ..
ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: 3 ದಿನ ಕಳೆದರೂ ಸಿಗದ ಬಾಲಕಿ
ಕುಸಿತದ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ
ಗುಡ್ಡದ ಮಣ್ಣು ಜಾರಿಕೊಂಡು ಬಂದಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಮಣ್ಣಿನಡಿ ಅವಶೇಷವಾಗಿದೆ. ಗುಡ್ಡ ಕುಸಿತವಾದ ಜಾಗದಲ್ಲಿ ಗುಡ್ಡ ಮತ್ತಷ್ಟು ಬಿರುಕುಗೊಂಡಿದ್ದು ಇನ್ನಷ್ಟು ಕುಸಿತವಾಗುವ ಆತಂಕವಿದೆ. ಹೀಗಾಗಿ ಮನೆಯ ಮಾಲೀಕ ಕಾರ್ಲೋ ಕುಟುಂಬವನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಗುಡ್ಡ ಕುಸಿತವಾದ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜನ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸಾವನ್ನಪ್ಪಿದವರಿಗೆ ಪರಿಹಾರ
ಇನ್ನು ಗುಡ್ಡ ಕುಸಿತ ಅವಘಡ ನಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿದ್ದಾರೆ. ಘಟನೆಯ ಪೂರ್ಣ ವರದಿ ಬಂದ ಬಳಿಕ ಮೃತಪಟ್ಟ ಕೇರಳ ಮೂಲದ ಕಾರ್ಮಿಕರಿಗೆ ಸರಕಾರದಿಂದ ಪರಿಹಾರ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ.
ರೆಡ್ ಅಲರ್ಟ್ ಘೋಷಣೆ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅದ್ಯಪಾಡಿ ಗ್ರಾಮ ಸಂಪರ್ಕಿಸುವ ರಸ್ತೆ ಕುಸಿತವಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿರುವುದರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಗುರುವಾರವೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗಾಗಿ ಮುನ್ನೆಚ್ಚರಿಕೆಯ ಪರಿಣಾಮ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು , ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ರಜೆ ಘೋಷಿಸಲಾಗಿದೆ.