ಮಂಗಳೂರು: ಕಾರಿನಲ್ಲಿ ಗೋವುಗಳ ಅಕ್ರಮ ಸಾಗಾಟ, ಪೊಲೀಸರಿಂದ ಗುಂಡು
ಮಂಗಳೂರು, ಅಕ್ಟೋಬರ್ 11: ಕಾರಿನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿ ಹೋದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದರೆಯ ಮೂಡುಕೊಣಾಜೆ ಎಂಬಲ್ಲಿ ನಡೆದಿದೆ.
ಭಾನುವಾರ ಬೆಳಗಿನ ಜಾವ ಗೋಕಳ್ಳರು ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದರೆಯ ಶಿರ್ತಾಡಿಯಿಂದ 6 ಗೋವುಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.
ಜೈಲಿಗೆ ಹೋಗುವ ಭಯದಿಂದ ಆತ್ಮಹತ್ಯೆಗೆ ಶರಣಾದ ಯುವಕ
ಹೀಗಾಗಿ ಮೂಡಬಿದರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಎಸ್ ದಿನೇಶ್ ಕುಮಾರ್ ತಂಡ, ಆರೋಪಿಗಳು ಗೋವುಗಳನ್ನು ಸಾಗಿಸುತ್ತಿದ್ದ ರಿಟ್ಸ್ ಕಾರನ್ನು ಹಿಂಬಾಲಿಸಿಕೊಂಡು ಹೋದರು. ಈ ವೇಳೆ ಆರೋಪಿಗಳು ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದು, ತಕ್ಷಣ ಇನ್ಸ್ಪೆಕ್ಟರ್ ಬಿ.ಎಸ್ ದಿನೇಶ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಇದರಿಂದ ಹೆದರಿದ ಆರೋಪಿಗಳು ಕಾರು ಹಾಗೂ ಹಸುಗಳನ್ನು ಅಲ್ಲೇ ಬಿಟ್ಟು ಓಡಿ ಪರಾರಿಯಾಗಿದ್ದಾರೆ. ಕಾರು ಹಾಗೂ ಹಸುಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.