ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ ಹಚ್ಚಿದ ಸಾರ್ವಜನಿಕರು
ಮಂಗಳೂರು, ಜುಲೈ 6: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಸಾರ್ವಜನಿಕರೇ ಪತ್ತೆ ಹಚ್ಚಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಇಂದು ಬೆಳ್ಳಂಬೆಳಿಗ್ಗೆ ಮಂಗಳೂರು ಹೊರವಲಯದ ಕುಲಶೇಖರ ಎಂಬಲ್ಲಿ ಈ ಘಟನೆ ನಡೆದಿದೆ. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಸ್ಥಳೀಯರು ಲಾರಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ, ಲಕ್ಷಾಂತರ ರೂಪಾಯಿ ಸ್ವತ್ತು ವಶಕ್ಕೆ
ಮಂಗಳೂರು ನಗರದ ಕುಲಶೇಖರ ಬಳಿ ತಡರಾತ್ರಿ ಲಾರಿಯಲ್ಲಿ ಪಶು ಆಹಾರದ ಜೊತೆ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಅನುಮಾನದಿಂದ ಸ್ಥಳೀಯರು ಲಾರಿಯನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಈ ಜಾಲ ಪತ್ತೆಯಾಗಿದೆ.
ಸ್ಥಳೀಯರು ಲಾರಿಯನ್ನು ಅಡ್ಡಗಟ್ಟಿದ ಸಂದರ್ಭ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿಯಲ್ಲಿ ಪಶು ಆಹಾರದ ಮೂಟೆಗಳ ಅಡಿಯಲ್ಲಿ ಸುಮಾರು 50 ಕ್ವಿಂಟಲ್ ನಷ್ಟು ಅಕ್ಕಿ ಪತ್ತೆಯಾಗಿದೆ. ಅದನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.