ಅನಧಿಕೃತ ಧಾರ್ಮಿಕ ಕಟ್ಟಡ ತೆರವು; ಮಂಗಳೂರಿನ 800 ವರ್ಷ ಇತಿಹಾಸದ ದೈವಸ್ಥಾನಕ್ಕೆ ಕುತ್ತು!
ಮಂಗಳೂರು, ಸೆಪ್ಟೆಂಬರ್ 14: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣ ಭಾರೀ ವಿವಾದವನ್ನು ಹುಟ್ಟು ಹಾಕಿದೆ. ಇದರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಪಟ್ಟಿ ತಯಾರಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ತಯಾರು ಮಾಡಿರುವ ಪಟ್ಟಿಯಲ್ಲಿ ಒಟ್ಟು 902 ಅನಧಿಕೃತ ಕಟ್ಟಡಗಳಿದ್ದು, ಇದರಲ್ಲಿ ದೇವಸ್ಥಾನಗಳದ್ದೇ ಅಗ್ರಪಾಲಾಗಿದೆ. ಈ ಪಟ್ಟಿಯಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ನಗರದ ಶಕ್ತಿನಗರದ ಶ್ರೀವೈದ್ಯನಾಥ ದೇವಸ್ಥಾನವೂ ಹೊಂದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.
ಮೈಸೂರಿನ 93 ದೇವಾಲಯ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್
2009ರ ಹಿಂದಿನವರೆಗಿನ ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿದೆ. ಒಟ್ಟು 902 ಅನಧಿಕೃತ ಧಾರ್ಮಿಕ ಕಟ್ಟಡಗಳೆಂದು ಗುರುತು ಮಾಡಲಾಗಿದ್ದು, ಇದರಲ್ಲಿ 667 ದೇವಸ್ಥಾನಗಳು, 186 ಮಸೀದಿಗಳು, 56 ಚರ್ಚ್ ಮತ್ತು 11 ಧಾರ್ಮಿಕ ಕಟ್ಟಡಗಳನ್ನು ಒಳಗೊಂಡಿದೆ.
ಮಂಗಳೂರಿನ ಶಕ್ತಿನಗರದಲ್ಲಿರುವ ವೈದ್ಯನಾಥ ದೈವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದ್ದು, ಅಪಾರ ಭಕ್ತಗಣವನ್ನು ಹೊಂದಿದೆ. ಕ್ಷೇತ್ರದ ಮಹಿಮಾನ್ವಿತ ಕಾರಣಿಕ ಶಕ್ತಿಗಳ ಬಗ್ಗೆ ಜನ ಅಗಾಧ ಶ್ರದ್ಧೆ ಭಕ್ತಿ ಹೊಂದಿದ್ದಾರೆ. ಇದರ ನಡುವೆ ಇದೀಗ ದೈವಸ್ಥಾನ ತೆರವುಗೊಳಿಸುವ ವಿಚಾರ ಭಕ್ತರು ಆತಂಕಕ್ಕೀಡು ಮಾಡಿದೆ.
ಆದರೆ ಈ ಬಗ್ಗೆ ಮಾಹಿತಿ ನೀಡಿರುವ ದೈವಸ್ಥಾನದ ಆಡಳಿತ ಮಂಡಳಿ, ಜಿಲ್ಲಾಡಳಿತದಿಂದ ನಮಗೆ ಯಾವುದೇ ನೋಟೀಸ್ ಬಂದಿಲ್ಲ. ನಮ್ಮ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದ್ದು, ಅನಧಿಕೃತವೂ ಅಲ್ಲ. ಆದರೆ ನಮ್ಮ ದೇವಸ್ಥಾನವೂ ಅನಧಿಕೃತ ಧಾರ್ಮಿಕ ಪಟ್ಟಿಯಲ್ಲಿ ಇರುವ ಬಗ್ಗೆ ಮಾಧ್ಯಮಗಳಿಂದ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಬಗ್ಗೆ ಸೂಚನೆ ನೀಡಿದರೆ ಮುಂದೆ ನಿರ್ಧಾರ ಮಾಡುತ್ತೇವೆ ಅಂತಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ., ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇವಲ ಅನಧಿಕೃತ ಕಟ್ಟಡಗಳ ಪಟ್ಟಿ ಮಾಡಿದ್ದೇವೆ. ಈಗ ಕಟ್ಟಡ ತೆರವಿಗೆ ಸೂಚನೆ ನೀಡಿಲ್ಲ. ರಾಜ್ಯ ಸರ್ಕಾರ ಮುಂದಿನ ಆದೇಶದ ಬಳಿಕ ಮುಂದುವರಿಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ತಯಾರು ಮಾಡಿರುವ ಪಟ್ಟಿಯಲ್ಲಿ 400 ಧಾರ್ಮಿಕ ಕಟ್ಟಡಗಳಿಗೆ ರಿಯಾಯತಿ ನೀಡುವ ಸಾಧ್ಯತೆಗಳು ಇದೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಹೆದ್ದಾರಿಯ ಬದಿಗಳಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ಸರ್ಕಾರ ಸೂಚಿಸಿತ್ತು. ಕೆಲವು ದೇವಸ್ಥಾನಗಳ ಆಡಳಿತ ಮಂಡಳಿ ಸ್ವಪ್ರೇರಿತವಾಗಿ ದೇವಸ್ಥಾನದ ದೇವರನ್ನು ಬೇರೆ ಕಡೆ ಪ್ರತಿಷ್ಠೆ ಮಾಡಿದ್ದವು. ಆದರೆ ಈವರೆಗೂ ಆ ದೇವಸ್ಥಾನಗಳ ತೆರವು ಆಗಿಲ್ಲ. ಇನ್ನು ಕೆಲ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಗಳನ್ನು ತೆರವುಗೊಳಿಸದೇ ಸಡ್ಡು ಹೊಡೆದಿದ್ದವು.
Recommended Video
ಇದೀಗ ದೇವಸ್ಥಾನಗಳ ತೆರವು ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ದೇವಸ್ಥಾನಗಳ ಆಡಳಿತ ಮಂಡಳಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.