ಭಾರತ-ಪಾಕ್ ಕ್ರಿಕೆಟ್ ಪಂದ್ಯ ರದ್ದು ಮಾಡಿ: ಯುಟಿ ಖಾದರ್
ಮಂಗಳೂರು, ಆಗಸ್ಟ್ 9: "ರಾಷ್ಟ್ರಧ್ವಜಕ್ಕೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಟ್ಟೆ ಉಪಯೋಗ ಮಾಡಬಹುದೆಂಬ ಕೇಂದ್ರ ಸರ್ಕಾರದ ತೀರ್ಮಾನವು ಸ್ವಾತಂತ್ರ್ಯ ಚಳುವಳಿಗೆ ಮಾಡಿದ ಅವಮಾನ" ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಯು. ಟಿ. ಖಾದರ್, "ರಾಷ್ಟ್ರಧ್ವಜ ಕೇವಲ ಬಟ್ಟೆ ಅಲ್ಲ, ಭಾರತದ ಸ್ವಾತಂತ್ರ್ಯದ ತಾಯಿ ಬೇರು ಖಾದಿ. ವಿದೇಶದಿಂದ ತಂದ ಪಾಲಿಸ್ಟರ್ ಬಟ್ಟೆಗಳನ್ನು ಗುಡ್ಡೆ ಹಾಕಿದ ಸಂಧರ್ಭದಲ್ಲಿ ಗಾಂಧೀಜಿ ಖಾದಿ ಚಳುವಳಿಯನ್ನು ಮಾಡಿದ್ದರು. ಖಾದಿ ನೇಯುವ ಚರಕ ಕೇವಲ ವಸ್ತು ಅಲ್ಲ, ಬ್ರಿಟಿಷರಿಂದ ಬಂಧ ಮುಕ್ತವಾದ ಸಂಕೇತ" ಎಂದರು.
ವ್ಯಾಪಾರವಾದ ದೇಶಪ್ರೇಮ; ರಾಷ್ಟ್ರಧ್ವಜದಲ್ಲಿ ಧ್ವಜ ನಿಯಮವೇ ನಾಪತ್ತೆ!
"ಯಾವುದೇ ಸರಕಾರ ಬಂದರೂ ಖಾದಿಗೆ ವಿಶೇಷ ಪ್ರೋತ್ಸಾಹ ಗೌರವ ನೀಡಿದೆ. ವಿಶ್ವದಲ್ಲೇ ಈ ಗೌರವ ಇದೆ. ಖಾದಿಯ ಮಹತ್ವ ವಿಶ್ವದಲ್ಲೇ ತಿಳಿದಿದ್ದರೂ ಅಮೃತ ಮಹೋತ್ಸವದ ಸಂದರ್ಭದಲ್ಲಿ ಖಾದಿಗೆ ಹೆಚ್ಚಿನ ಮಹತ್ವ ನೀಡಬೇಕಿತ್ತು. ಆದರೆ ಕೇಂದ್ರ ಸರಕಾರ ಅವಮಾನ ಮಾಡಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
"ಕೇಂದ್ರ ಸರಕಾರ ಸ್ಪಷ್ಟತೆ ಇಲ್ಲದ ತೀರ್ಮಾನ ದೇಶಕ್ಕೆ ಮಾಡಿದ ಅವಮಾನ. ಖಾದಿ ಉತ್ಪಾದನೆ ಮಾಡುವ ಸಂಸ್ಥೆಗಳನ್ನು ಪ್ರತಿ ರಾಜ್ಯದಲ್ಲಿ ತೆರೆಯಬೇಕು. ಆಗ ನಿಜವಾದ ಗೌರವ ಸಿಗುತ್ತದೆ. ಕೇಂದ್ರ ಸರಕಾರ ತನ್ನ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಬೇಕು. ಹರ್ ಘರ್ ತಿರಂಗಾ ಅಭಿಯಾನಕ್ಕೆ ಸ್ಪಷ್ಟತೆ ಕೊಡಬೇಕು" ಎಂದು ಖಾದರ್ ಒತ್ತಾಯಿಸಿದರು.
ಬಿಜೆಪಿ ಚೀನಾಗೆ ವ್ಯವಹಾರಿಕ ಲಾಭಮಾಡಿಕೊಡುತ್ತಿದೆ
"ಭಾರತದ ರಾಷ್ಟ್ರಧ್ವಜ ಕೇವಲ ಬಟ್ಟೆ ಅಲ್ಲ, ಜನ ಭಾವನೆ, ಶ್ರಮದ ಸಂಕೇತ ಇದೆ. ಇದರ ಪಾವಿತ್ರ್ಯತೆಯನ್ನು ಕಾಪಾಡೋದು ಸರಕಾರದ ಜವಾಬ್ದಾರಿಯಾಗಿದೆ. ಕೇಂದ್ರ ಸರಕಾರ ಮಾತನಾಡುವಾಗ ಸ್ವದೇಶಿ, ಕೆಲಸ ಅನುಷ್ಠಾನ ಮಾಡೋವಾಗ ವಿದೇಶಿ ತಂತ್ರ ಅನುಸರಿಸುತ್ತಿದೆ. ಪಾಲಿಸ್ಟರ್ ಬಟ್ಟೆಯನ್ನು ವಿದೇಶದಿಂದ ಆಮದು ಮಾಡುವುದರಿಂದ ಚೀನಾಗೆ ಲಾಭವಾಗುತ್ತದೆ. ಒಂದೆಡೆ ಚೀನಾದವರಿಂದ ತೊಂದರೆ ಅಂತಾ ಹೇಳಿ ಅವರ ಆ್ಯಪ್ಗಳನ್ನು ಬಂದ್ ಮಾಡುತ್ತಾರೆ. ಇನ್ನೊಂದೆಡೆ ಅವರಿಗೆ ವ್ಯವಹಾರಿಕ ಲಾಭ ಮಾಡುತ್ತಾರೆ" ಎಂದು ಯು. ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಧ್ವಜ ನೇಯುವುದೇ ದೊಡ್ಡ ಗೌರವ, ಆದರೆ ಸಂಬಳ ಕೇಳಂಗಿಲ್ಲ!
ಆಸಕ್ತರಿಗೆ ಉಚಿತ ತಿರಂಗಾ ನೀಡಬೇಕು
"ನಮ್ಮ ಕ್ಷೇತ್ರದ ಎಲ್ಲಾ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಸೂಚನೆ ನೀಡಿದ್ದೇನೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಸಕ್ತರಿಗೆ ಉಚಿತ ತಿರಂಗಾ ನೀಡಬೇಕು ಎಂದು ಹೇಳಿದ್ದೇನೆ. ಗ್ರಾಮಗಳಿಗೆ ಸರಿಯಾಗಿ ಧ್ವಜ ರವಾನೆ ಆಗುತ್ತಿಲ್ಲ. ಗ್ರಾಮಕ್ಕೆ ಕೇವಲ ಮುನ್ನೂರು ಧ್ವಜ ಕಳುಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟವಾದ ನಿರ್ದೇಶವನ್ನು ಕೊಟ್ಟಿಲ್ಲ. ಒಂದೊಂದು ಕಡೆ ಒಂದೊಂಡು ದರ ನಿಗದಿ ಮಾಡಲಾಗಿದೆ. ಕಾರ್ಯಕ್ರಮ ಅನುಷ್ಠಾನ ಮಾಡುವಾಗ ಘೋಷಣೆ ಮತ್ತು ಪ್ರಚಾರಕ್ಕಿಂತಲೂ ಸರಿಯಾಗಿ ಅನುಷ್ಠಾನ ಮಾಡುವ ಕಡೆ ಗಮನ ಹರಿಸಬೇಕಿತ್ತು" ಎಂದು ಯು. ಟಿ. ಖಾದರ್ ಟೀಕಿಸಿದ್ದಾರೆ.
ಘೋಷಣೆ ಮಾಡಿದ ಯಾವುದನ್ನೂ ಈಡೇರಿಸಿಲ್ಲ
"ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದನ್ನು ಯಾವುದನ್ನೂ ಈಡೇರಿಸಿಲ್ಲ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಹೆಡೆಮುರಿ ಕಟ್ಟುವುದಾಗಿ ಹೇಳಿದರು. ಸ್ವಿಸ್ ಬ್ಯಾಂಕ್ ನಿಂದ ಹಣ ತಂದು ಪ್ರತಿ ಒಬ್ಬರಿಗೂ 15 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದರು. ಈಗ ಹದಿನೈದು ರೂಪಾಯಿಯೂ ಬಂದಿಲ್ಲ. ಚೌಕಿ ದಾರ್ ತಿನ್ನೋದಿಲ್ಲ ,ತಿನ್ನಲೂ ಬಿಡೋದಿಲ್ಲ ಅಂತಾ ಹೇಳಿದ್ದರು. ಆದರೆ ದೇಶ ಕೊಳ್ಳೆ ಹೊಡೆದ ನೀರವ್ ಮೋದಿ ಸ್ವಚ್ಛಂದವಾಗಿದ್ದಾರೆ" ಎಂದು ಯು. ಟಿ. ಖಾದರ್ ಹೇಳಿದ್ದಾರೆ.
ಭಾರತ-ಪಾಕ್ ಕ್ರಿಕೆಟ್ ನಿಲ್ಲಿಸಿ
"ಪಾಕಿಸ್ಥಾನದ ಜೊತೆ ಕ್ರಿಕೆಟ್ ಆಟ ಆಡುವುದಿಲ್ಲಎಂದು ಹೇಳಿ ದೇಶದ ಅನೇಕ ಕ್ರಿಕೆಟ್ ಸ್ಟೇಡಿಯಂಗಳ ಪಿಚ್ ಹಾಳು ಮಾಡಿದರು. ಆದರೆ ಬಿಸಿಸಿಐ ಮುಖ್ಯಸ್ಥರು ದುಬೈನಲ್ಲಿ ಭಾರತ-ಪಾಕ್ ಕ್ರಿಕೆಟ್ ಆಯೋಜಿಸಿದ್ದಾರೆ. ದೇಶದ ಮೇಲೆ ಅಷ್ಟು ಪ್ರೀತಿ ಇದ್ದರೆ ಈ ಪಂದ್ಯವನ್ನು ವಿರೋಧಿಸಿ. ಯಾಕೆ ದುಬೈನಲ್ಲಿ ಆಟ ಆಡುತ್ತಿದ್ದಾರೆ, ಜನರನ್ನು ಮೂರ್ಖರನ್ನು ಮಾಡೋದು ಯಾಕೆ. ಮ್ಯಾಚ್ ಆಡೋದನ್ನು ನಿಲ್ಲಿಸಿ. ಯುಪಿಎ ಸರಕಾರ ಪಾಕ್ಗೆ ಬಸ್, ಟ್ರೈನ್ ನಿಲ್ಲಿಸಿದ್ದೆವು. ಆದರೆ ಈಗ ಪಾಕ್ನಲ್ಲಿ ಚಹಾ ಕುಡಿದು ಬರ್ತಾರೆ. ಕೇಂದ್ರ ಸರಕಾರಕ್ಕೆ ನಿಜವಾದ ದೇಶ ಪ್ರೇಮ ಇದ್ದರೆ ದುಬೈನಲ್ಲಿ ಆಟ ಕ್ಯಾನ್ಸಲ್ ಮಾಡಬೇಕು" ಎಂದು ಖಾದರ್ ಸವಾಲು ಹಾಕಿದರು.