ಆಡಿಯೋ ಸುಳ್ಳಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ: ಕುಮಾರಸ್ವಾಮಿ ಸವಾಲು
ಮಂಗಳೂರು, ಫೆಬ್ರವರಿ 09: ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನಡುವೆ ಪರಸ್ಪರ ರಾಜೀನಾಮೆ ಸವಾಲು ಶುರುವಾಗಿದೆ. ಕುಮಾರಸ್ವಾಮಿ ಅವರು ನಿನ್ನೆ ಬಿಡುಗಡೆ ಮಾಡಿದ ಆಡಿಯೋ ನಿಜವಾದರೆ ರಾಜಕೀಯದಿಂದ ನಿವೃತ್ತಿ ಪಡೆವುದಾಗಿ ಯಡಿಯೂರಪ್ಪ ಹೇಳಿದ್ದರು. ಅದಕ್ಕೆ ಇಂದು ಕುಮಾರಸ್ವಾಮಿ ಪ್ರತಿಸವಾಲು ಹಾಕಿದ್ದಾರೆ.
ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ಭಾಗಿಯಾಗಿದ್ದ ಅವರು ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ಆಡಿಯೋ ಸುಳ್ಳಾದರೆ ನಾನು ರಾಜಕೀಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ ಎಂದಿದ್ದಾರೆ.
ಧರ್ಮಸ್ಥಳದ ಬಗ್ಗೆ ಹಿಂದೊಮ್ಮೆ ಅಪಚಾರ ಮಾಡಿದ್ದೇನೆ: ಕುಮಾರಸ್ವಾಮಿ
'ಕುಮಾರಸ್ವಾಮಿ ಅವರು ದುರುದ್ದೇಶಪೂರ್ವಕವಾಗಿ ಮಾಡಿಸಿರುವ ಸುಳ್ಳು ಆಡಿಯೋ ಕ್ಲಿಪ್ ಅದು' ಎಂದು ಯಡಿಯೂರಪ್ಪ ಆರೋಪಿಸಿದ್ದು, ಅವರ ಆರೋಪ ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಕುಮಾರಸ್ವಾಮಿ ಪ್ರತಿಸವಾಲು ಹಾಕಿದ್ದಾರೆ. ಆ ಮೂಲಕ ಆಡಿಯೋ ಕ್ಲಿಪ್ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕುತ್ತಿದೆ.
ಆಡಿಯೋ ಕ್ಲಿಪ್ ಬಗ್ಗೆ ಬೇಕಾದರೆ ಕೇಂದ್ರ ಸರ್ಕಾರದಿಂದ ತನಿಖೆ ಆಗಲಿ, ಆಡಿಯೋ ರೆಕಾರ್ಡ್ ಮಾಡಿದ್ದು ನಮ್ಮ ಪಕ್ಷದ ಕಾರ್ಯಕರ್ತರು. ಅದನ್ನು ನಾನು ಮಾಡಿಸಿದ್ದಲ್ಲ, ಅಂತಹುದಕ್ಕೆ ನನಗೆ ಸಮಯವಿಲ್ಲ, ಅವಶ್ಯಕತೆಯೂ ನನಗಿಲ್ಲ ಎಂದು ಸಿಎಂ ಹೇಳಿದ್ದಾರೆ.
ಆಗೊಮ್ಮೆ ಬಿಜೆಪಿ ಅವರನ್ನು ಜೆಡಿಎಸ್ ಕಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದೇನೆ ಎಂದು ಯಡಿಯೂರಪ್ಪ ಆರೋಪ ಮಾಡಿದ್ದಾರೆ, ಆದರೆ ನಾನು ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ ಹೊರತು ಅವರಿಗೆ ಆಮಿಷ ಒಡ್ಡಿರಲಿಲ್ಲ. ನಾನು ಬಹಿರಂಗವಾಗಿ ಮಾತನಾಡಿದ್ದೆ, ಯಡಿಯೂರಪ್ಪ ಅವರಂತೆ ಬಾಗಿಲು ಹಾಕಿಕೊಂಡು ಮಾತಾಡಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಆಡಿಯೋದಲ್ಲಿನ ಧ್ವನಿ ಯಡಿಯೂರಪ್ಪದೇ ಎಂದು ನಾನು ಹೇಳಿಲ್ಲ:ಎಚ್ಡಿಕೆ
ಯಡಿಯೂರಪ್ಪ ಶಾಸಕರ ಮಗನನ್ನು ಕರೆದು ಮಾತನಾಡಿದ್ದಾರೆ, ಸರ್ಕಿಟ್ ಹೌಸ್ ನ ಲೈಟ್ ಆಫ್ ಮಾಡಿಸಿ ಮಾತನಾಡಿಸಿದ್ದಾರೆ, ಅರ್ಧ ರಾತ್ರಿ ಚರ್ಚೆ ಮಾಡುವ ಅವಶ್ಯಕತೆ ಯಡಿಯೂರಪ್ಪ ಗೆ ಏನಿತ್ತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಿನ್ನೆ ಆಡಿಯೋ ಬಿಡುಗಡೆ ಮಾಡಿದ್ದರೂ ಸಹ ಬಿಜೆಪಿಗೆ ಇನ್ನೂ ಬುದ್ಧಿ ಬಂದಿಲ್ಲ, ಇಂದು ಬೆಳಿಗ್ಗೆ ಸಹ ಮತ್ತೊಬ್ಬ ಶಾಸಕರಿಗೆ ಕರೆ ಮಾಡಿದ್ದಾರೆ. ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಮತ್ತು ಬಿಜೆಪಿಯ ಯೋಗಿಶ್ವರ್ ಇದಕ್ಕೆಲ್ಲಾ ಸೂತ್ರಧಾರರು ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
ಆಡಿಯೋ ಬಗ್ಗೆ ಮಾತನಾಡಿದ ಅವರು, ಆಡಿಯೋದಲ್ಲಿ ಯಾರ ಧ್ವನಿ ಇದೆ ಎಂದು ಯಾರನ್ನು ಕೇಳಿದರೂ ಹೇಳುತ್ತಾರೆ. ಈ ಬಗ್ಗೆ ಸದನದಲ್ಲಿ ನಾನೇ ಪ್ರಸ್ತಾಪ ಮಾಡುತ್ತೇನೆ, ಸ್ಪೀಕರ್ ರಮೇಶ್ ಕುಮಾರ್ ತೀರ್ಪು ಕೊಡುತ್ತಾರೆ, ನನಗೇನೂ ಆತುರವಿಲ್ಲ ಎಂದು ಅವರು ಹೇಳಿದ್ದಾರೆ.