ನಾನು ಕೆಸರಿನ ಓಟಗಾರ, ಟ್ರ್ಯಾಕ್ನಲ್ಲಿ ಓಡುವುದಿಲ್ಲ: ಕಂಬಳ ವೀರ ಶ್ರೀನಿವಾಸ್ ಗೌಡ
Recommended Video
ಮಂಗಳೂರು, ಫೆಬ್ರವರಿ 17: ಕಂಬಳದಲ್ಲಿ 145 ಮೀಟರ್ ದೂರವನ್ನು ಕೇವಲ 13.61 ಸೆಕೆಂಡ್ ನಲ್ಲಿ ಓಡಿ ಕರ್ನಾಟಕದ ಉಸೇನ್ ಬೋಲ್ಟ್ ಎನಿಸಿಕೊಂಡಿರುವ ಶ್ರೀನಿವಾಸ್ ಗೌಡ ಅವರು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡಲು ನಿರಾಕರಿಸಿದ್ದಾರೆ.
ಶ್ರೀನಿವಾಸ್ ಗೌಡ ಅವರ ಕಂಬಳದ ಓಟ ರಾಷ್ಟ್ರದಾದ್ಯಂತ ಸುದ್ದಿ ಮಾಡಿತ್ತು. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರೇ ಟ್ವೀಟ್ ಮಾಡಿ, 'ಶ್ರೀನಿವಾಸ್ ಗೌಡ ಅವರಿಗೆ ಸೂಕ್ತ ತರಬೇತಿ ನೀಡಿ, ಅವರನ್ನು ಓಟದ ಪರೀಕ್ಷೆಗೆ ಒಳಪಡಿಸಿ' ಎಂದು ಸೂಚನೆ ನೀಡಿದ್ದರು. ಕೇಂದ್ರ ಮಾಜಿ ಸಚಿವ ಶಶಿ ತರೂರ್ ಸಹ ಶ್ರೀನಿವಾಸ್ ಗೌಡ ಅವರ ಬಗ್ಗೆ ಟ್ವೀಟ್ ಮಾಡಿ ಅವರನ್ನು ಉಸೇನ್ ಬೋಲ್ಟ್ ಗೆ ಹೋಲಿಸಿದ್ದರು. ಆನಂದ್ ಮಹೀಂದ್ರಾ, ಶ್ರೀನಿವಾಸ್ ಗೌಡ ಅವರ ಪ್ರತಿಭೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು.
ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದರೇ 'ಕಂಬಳ ವೀರ'? ಸತ್ಯವೇನು?
ಆದರೆ ಶ್ರೀನಿವಾಸ್ ಗೌಡ ಅವರು ತಾವು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುವುದಿಲ್ಲ, ಬದಲಿಗೆ ಕಂಬಳದಲ್ಲಿಯೇ ಓಡುತ್ತೇನೆ' ಎಂದು ಹೇಳಿದ್ದಾರೆ. 'ನಾನು ರನ್ನಿಂಗ್ ಟ್ರ್ಯಾಕ್ ಓಟಗಾರನಲ್ಲ, ಅದಕ್ಕೆ ಬೇಕಾಗಿರುವ ಕೌಶಲ್ಯ ಬೇರೆ ಕಂಬಳಕ್ಕೆ ಬೇಕಾಗಿರುವ ಕೌಶಲ್ಯ ಬೇರೆ' ಎಂದು ಹೇಳಿದ್ದಾರೆ.
'ಟ್ರ್ಯಾಕ್ ನಲ್ಲಿ ಓಡುವವರು ಕಂಬಳ ಓಡಲಾರರು'
'ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುವವರು ಕಂಬಳ ಓಡಲಾರರು, ಅಂತೆಯೇ ಕಂಬಳ ಓಟಗಾರರು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡಲಾರರು. ಟ್ರ್ಯಾಕ್ನಲ್ಲಿ ಮುಂಗಾಲು ಬಳಸಿ ಓಡಬೇಕು, ಕಂಬಳದಲ್ಲಿ ಹಿಮ್ಮಡಿ ಬಳಸಿ ಓಡಬೇಕು, ಎರಡೂ ಬೇರೆ, ಬೇರೆ, ನಾನು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುವುದಿಲ್ಲ, ಬದಲಿಗೆ ಕಂಬಳದಲ್ಲಿಯೇ ಸಾಧನೆ ಮಾಡುತ್ತೇನೆ' ಎಂದು ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿರುವ ಗೌಡ
'ಕಂಬಳ ವೀರ' ಶ್ರೀನಿವಾಸ್ ಗೌಡ ಅವರ ಸಾಧನೆ ಯಡಿಯೂರಪ್ಪ ಅವರನ್ನೂ ತಲುಪಿದ್ದು, ಮುಖ್ಯಮಂತ್ರಿಗಳ ಕಚೇರಿಯಿಂದ ಕಂಬಳ ವೀರನಿಗೆ ಬುಲಾವ್ ಬಂದಿದೆ. ಶ್ರೀನಿವಾಸ್ ಗೌಡ ಅವರು ಇಂದು ಅಥವಾ ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಗೌಡ ಅವರಿಗೆ ಸರ್ಕಾರಿ ಕೆಲಸದ ಭರವಸೆ ಸಿಗುವ ಸಾಧ್ಯತೆಯೂ ಇದೆ.
ಉಸೇನ್ ಬೋಲ್ಟ್ ಅನ್ನು ಮೀರಿಸಿದ ಕಂಬಳ ವೀರ ಶ್ರೀನಿವಾಸ್ ಗೌಡ
ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಗೌಡ ಭೇಟಿ
ನಿನ್ನೆ ಕಾರ್ಮಿಕ ಇಲಾಖೆಯ ಕೆಲವು ಅಧಿಕಾರಿಗಳು ಶ್ರೀನಿವಾಸ್ ಗೌಡ ಅವರನ್ನು ಭೇಟಿ ಆಗಿದ್ದರು. ಕಾರ್ಮಿಕನೂ ಆಗಿರುವ ಶ್ರೀನಿವಾಸ್ ಗೌಡ ಅವರಿಗೆ ಇಲಾಖೆವತಿಯಿಂದ ಸೌಲಭ್ಯಗಳ ಮಾಹಿತಿ ನೀಡಿದರು. ಹಾಗೂ ಸೌಲಭ್ಯಗಳ ಬರವಸೆ ನೀಡಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಮಿಕರಾಗಿರುವ ಶ್ರೀನಿವಾಸ್ ಗೌಡ
ಕಂಬಳದ ಸಮಯದಲ್ಲಿ ಕಂಬಳ ಓಡುವ ಶ್ರೀನಿವಾಸ್ ಗೌಡ ಸಾಮಾನ್ಯ ದಿನಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಾರೆ. ಕಂಬಳ ಅಕಾಡೆಮಿಯಲ್ಲಿ ತರಬೇತಿಯನ್ನೂ ಶ್ರೀನಿವಾಸ್ ಗೌಡ ಪಡೆದಿದ್ದಾರೆ. ಕರಾವಳಿಯ ಸ್ಟಾರ್ ಕಂಬಳ ಓಟಗಾರರಾಗಿರುವ ಅವರು ಈಗ ದೇಶದ ಸ್ಟಾರ್ ಜನಪದ ಕ್ರೀಡಾ ಸ್ಟಾರ್.