ಈಗಲೂ ಹೇಳ್ತೇನೆ, ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ: ಪೂಜಾರಿ
Recommended Video
ಮಂಗಳೂರು, ಮೇ 9: ಪತ್ರಿಕಾಗೋಷ್ಠಿಗಳಿಂದ ದೂರ ಉಳಿದಿದ್ದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೆಪಿಸಿಸಿ ಅಧ್ಯಕ್ಷ ಬಿ ಜನಾರ್ದನ ಪೂಜಾರಿ ಮತ್ತೆ ಮೈಕ್ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಕಚೇರಿಗಳಿಂದ ದೂರ ಉಳಿದಿದ್ದ ಪೂಜಾರಿ ಇಂದು ಕಾಂಗ್ರೆಸ್ ಕಚೇರಿಯಲ್ಲೇ ಮಾಧ್ಯಮಗೋಷ್ಠಿ ನಡೆಸಿದರು.
ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಜನಾರ್ದನ ಪೂಜಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿವಿಮಾತು ಹೇಳಿದರು. "ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಸಲಹೆಗಳನ್ನು ಕೊಟ್ಟಿದ್ದು ನಿಜ. ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸೋಲುತ್ತಾರೆ ಎಂದು ಹೇಳಿದ್ದೆ. ಪಕ್ಷಕ್ಕಿಂತ ತಾನೇ ದೊಡ್ಡವನೆಂದು ನಡೆದುಕೊಂಡರೆ ಉಳಿಗಾಲವಿಲ್ಲ ಎಂದಿದ್ದೆ. ಈಗಲೂ ಹೇಳುತ್ತೇನೆ, ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೂಜಾರಿ ಅವರನ್ನು ಕಾಂಗ್ರೆಸ್ ಮತ್ತೆ ಅವಮಾನಿಸಿದೆ: ಹರಿಕೃಷ್ಣ ಬಂಟ್ವಾಳ್
"ದುರಹಂಕಾರ ಬಿಡದಿದ್ದರೆ ಸೋಲುತ್ತಾರೆ. ನಾನು ಸಲಹೆ ಕೊಟ್ಟಿದ್ದು ಕಾಂಗ್ರೆಸ್ ನ ಉಳಿವಿಗೆ ಮಾತ್ರ," ಎಂದು ಹೇಳಿದ ಪೂಜಾರಿ ಸಿದ್ದರಾಮಯ್ಯ ಆಡಳಿತವನ್ನು ಮನಸಾರೆ ಹೊಗಳಿದ್ದಾರೆ. "ಸಿದ್ದರಾಮಯ್ಯ ಆಡಳಿತವನ್ನು ಒಳ್ಳೆಯದಾಗಿ ನಡೆಸಿದ್ದಾರೆ. ಮುಂದೇ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ," ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಹರೀಶ್ ಕುಮಾರ್ ವಿರುದ್ಧ ಆಕ್ರೋಶ
ಜನಾರ್ದನ ಪೂಜಾರಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಮಧ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಎದ್ದು ಹೊರ ನಡೆದರು. ಕಾಂಗ್ರೆಸ್ ನಾಯಕ ಪಿ ಚಿದಂಬರಂನ್ನು ಸ್ವಾಗತಿಸಲು ಅವರು ಹೊರಟು ಹೋಗಿದ್ದು ಪೂಜಾರಿ ಕಣ್ಣು ಕೆಂಪಗಾಗಿಸಿತು.
"ಹರೀಶ್ ಕುಮಾರ್ ಯಾಕೆ ಎದ್ದು ಹೋದ್ರು? ನನಗಿಂತ ಚಿದಂಬರಂ ಮುಖ್ಯ ಆಯ್ತಾ? ಚಿದಂಬರಂ ಚುನಾವಣಾ ಸಮಯದಲ್ಲಿ ಮಾತ್ರಾ ಬರ್ತಾರೆ. ಚಿದಂಬರಂ ಬಗ್ಗೆ ಬಿಜೆಪಿಯವರು ಹೇಳಿದ್ರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ. ಹರೀಶ್ ಕುಮಾರ್ ಯಾಕೆ ಇಲ್ಲಿ ಆಟ ಆಡೋಕೆ ಬಂದಿದ್ದಾ," ಎಂದು ತುಳುವಿನಲ್ಲೇ ಕಾಂಗ್ರೆಸ್ ಮುಖಂಡರ ಬಳಿ ಆಕ್ರೋಶ ಹೊರಹಾಕಿದರು.