ಯಾವತ್ತೂ ಮೋದಿಯನ್ನು ಟೀಕಿಸಿಲ್ಲ, ಅದೆಲ್ಲಾ ಊಹಾಪೋಹ:ಪ್ರಹ್ಲಾದ್ ಮೋದಿ
ಉಡುಪಿ, ಫೆಬ್ರವರಿ 14 : ಕರಾವಳಿಯ ತೀರ್ಥ ಕ್ಷೇತ್ರಗಳ ಯಾತ್ರೆ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಬುಧವಾರ (ಫೆ.12) ಮುಂಜಾನೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನೆರವೇರಿಸಿದ ಬಳಿಕ ಸಂಜೆ ಉಡುಪಿಗೆ ಆಗಮಿಸಿ ಕೃಷ್ಣಮಠಕ್ಕೆ ಭೇಟಿ ನೀಡಿದರು.
ಶ್ರೀ ಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಪ್ರಹ್ಲಾದ್ ಮೋದಿ, ಮಠದ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನೆರವೇರಿಸಿದ ಮೋದಿ ಸಹೋದರ ಪ್ರಹ್ಲಾದ್
ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಡುತ್ತಿದ್ದು, ಇದೊಂದು ಧಾರ್ಮಿಕ ಉದ್ದೇಶದ ಭೇಟಿ ಎಂದು ಹೇಳಿದರು. ಕಳೆದ ಐದು ವರ್ಷಗಳಿಂದ ಸಹೋದರ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ಉತ್ತಮ ಕೆಲಸ ಮಾಡಿದೆ. ಜನರು ಎನ್ ಡಿಎ ಕಾರ್ಯವೈಖರಿ ಬಗ್ಗೆ ಖುಷಿಯಾಗಿದ್ದು, ದೇಶದ ಜನತೆಗೆ ಸಂತುಷ್ಟವಾಗಿದೆ ಎಂದು ಹೇಳಿದರು.
ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದು ಎನ್ ಡಿಎ ಸರಕಾರದ ಸಾಧನೆ. ಸ್ವಾತಂತ್ರ್ಯಾನಂತರ ಇದು ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ ಎಂದು ಪ್ರಹ್ಲಾದ್ ಮೋದಿ ತಿಳಿಸಿದರು.
ಅದೆಲ್ಲಾ ಕೇವಲ ಊಹಾಪೋಹ
ನಾನು ಯಾವತ್ತೂ ಸಹೋದರ ಮೋದಿಯನ್ನು ಟೀಕಿಸಿರಲಿಲ್ಲ. ಅದೆಲ್ಲಾ ಕೇವಲ ಊಹಾಪೋಹ. ತಿರುಚಿದ ವರದಿಗಳು ಎಂದು ಪ್ರಹ್ಲಾದ್ ಮೋದಿ ಅಸಮಾಧಾನ ವ್ಯಕ್ತಪಡಿಸಿದರು.
ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿಲ್ಲ
ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಜನರು ಖುಷಿಯಿಂದ ಸ್ವೀಕರಿಸುತ್ತಿದ್ದಾರೆ. ನಾನು ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದೆ ಅನ್ನೋದು ಸುಳ್ಳು. ನನ್ನ ಸಹೋದರ ನರೇಂದ್ರ ಮೋದಿಯನ್ನು ಬಿಟ್ಟು ನಾನ್ಯಾಕೆ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಲಿ? ಮಮತಾ ಬ್ಯಾನರ್ಜಿಯಲ್ಲಿ ಅಂತಾದ್ದೇನಿದೆ ಎಂದು ಅವರು ಪ್ರಶ್ನಿಸಿದರು.
ನಾನೆಂದೂ ಮಮತಾ ಬ್ಯಾನರ್ಜಿಗೆ ಬೆಂಬಲ ಕೊಟ್ಟಿಲ್ಲ: ಮೋದಿ ಸಹೋದರ ಪ್ರಹ್ಲಾದ್
ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ?
ದೇಶದಲ್ಲಿ ಬಹಳಷ್ಟು ಪ್ರಿಯಾಂಕಾಗಳಿದ್ದಾರೆ ಎಂದ ಪ್ರಹ್ಲಾದ್ ಮೋದಿ, ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ? ಎಂದು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆ ಅವರು ಲೇವಡಿ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿರುವ ತೀನ್ ದೇವಿಯಾ!
ಬಜೆಟ್ ನಲ್ಲಿ ಅನೇಕ ಕೊಡುಗೆ ನೀಡಿದೆ
ರೈತರಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅನೇಕ ಕೊಡುಗೆ ನೀಡಿದೆ. ದಿನಕ್ಕೆ ಹದಿನೇಳು ರೂಪಾಯಿಯಷ್ಟೇ ನೀಡಿದೆ ಅಂತಾ ಆರೋಪಿಸುತ್ತಿದ್ದಾರೆ. ಅಷ್ಟಾದ್ರೂ ಕೊಡ್ತಲ್ಲ ಈ ಕೇಂದ್ರ ಸರ್ಕಾರ. ಅಧಿಕಾರ ನಡೆಸುವಾಗ ಕಾಂಗ್ರೆಸ್ಸಿಗರಿಗೆ ರೈತರ ನೆನಪಾಗಿಲ್ಲ. ಕೃಷ್ಣನಿಗೆ ಸುಧಾಮ ಅವಲಕ್ಕಿ ಕೊಟ್ಟಂತೆ ರೈತರಿಗೆ ಈ ಸರ್ಕಾರ ಅಲ್ಪವಾದರೂ ಕೊಟ್ಟಿತಲ್ಲ, ಅದೇ ಖುಷಿ ಎಂದು ಪ್ರಹ್ಲಾದ್ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ಲೇಷಣೆ : ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ?