ನಾನೆಂದೂ ಮಮತಾ ಬ್ಯಾನರ್ಜಿಗೆ ಬೆಂಬಲ ಕೊಟ್ಟಿಲ್ಲ: ಮೋದಿ ಸಹೋದರ ಪ್ರಹ್ಲಾದ್
ಮಂಗಳೂರು, ಫೆಬ್ರವರಿ 12:ಒಬ್ಬ ಮೋದಿ ಬಂದೇ ವಿರೋಧಿಗಳ ಸ್ಥಿತಿ ಹೀಗಾಗಿದೆ. ಇನ್ನು ನಾನೂ ಬಂದರೆ ಏನಾಗಬೇಡ. ನಾನು ರಾಜಕೀಯಕ್ಕೆ ಬರುವುದಿಲ್ಲ, ನಮ್ಮ ಪರಿವಾರದಿಂದ ನರೇಂದ್ರ ಭಾಯ್ ಒಬ್ಬರೇ ಸಾಕು, ದೇಶವನ್ನು ಉನ್ನತಿಗೆ ಕೊಂಡೊಯ್ಯುವುದಕ್ಕೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಹಾಘಟ ಬಂಧನ್ ಬಗ್ಗೆ ಕಿಡಿಕಾರಿದ್ದಾರೆ.
ಮೋದಿ ಅನಿಲ್ ಅಂಬಾನಿಯ ಮಿಡ್ಲ್ ಮ್ಯಾನ್! ರಾಹುಲ್ ರಫೇಲ್ ದಾಳಿ!
ಮಮತಾ ಬ್ಯಾನರ್ಜಿಗೆ ನಾನೆಂದೂ ಬೆಂಬಲ ಕೊಟ್ಟಿಲ್ಲ, ಕೊಡುವುದೂ ಇಲ್ಲ, ನಮ್ಮ ಪರಿವಾರದ ನರೇಂದ್ರರನ್ನು ಬಿಡುವ ಪ್ರಶ್ನೆಯೇ ಬರುವುದಿಲ್ಲ, ಯಾರೋ ಮಾಧ್ಯಮದವರು ಹಿಂದೆ ನನ್ನ ಹೇಳಿಕೆ ತಿರುಚಿ ಬರೆದಿದ್ದಾರೆ.
ಘಟಬಂಧನ ಬರಲಿ, ಪ್ರಿಯಾಂಕ ಗಾಂಧಿ ಬರಲಿ, ಪ್ರಿಯದರ್ಶಿನಿಯೇ ಬರಲಿ, 2019ರಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ಯಾರೂ ತಪ್ಪಿಸಲಾಗದು, ಜನರ ಆಶೀರ್ವಾದ ಮೋದಿ ಮೇಲಿದೆ ಎಂದು ಪ್ರಹ್ಲಾದ್ ಮೋದಿ ವಿಶ್ವಾಸವ್ಯಕ್ತಪಡಿಸಿದರು.
ಗಡ್ಕರಿ ಹೇಳಿಕೆಗೂ,ಮೋದಿಗೂ ಸಂಬಂಧ ಕಲ್ಪಿಸಿದ ಕಾಂಗ್ರೆಸ್ಸಿಗೆ ಛೀಮಾರಿ!
ಎನ್ ಡಿಎ ಸರಕಾರ ಕಳೆದ 5 ವರುಷಗಳಲ್ಲಿ ಯಾವ ಅಭಿವೃದ್ಧಿ ಮಾಡಿಲ್ಲ ಹೇಳಿ? ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ, ಜನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ನವರಿಗೆ ಮಾತ್ರ ಏನು ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಯಾಕೆಂದರೆ ಅವರ ಮನೆಗೆ ಏನೂ ಹೋಗಿಲ್ಲ. ದೇಶದ ಜನತೆಯ ಹೃದಯದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಲಿ ಅನ್ನೋದಿದೆ.
ಮುಂದಿನ ಚುನಾವಣೆಯಲ್ಲೂ 300 ಪ್ಲಸ್ ಸೀಟು ಬಿಜೆಪಿ ಪಡೆಯಲಿದೆ. ಮಹಾಘಟ ಬಂಧನ್ ಆಗುತ್ತೆ ಹೋಗುತ್ತೆ. ಈ ಹಿಂದೆಯೂ ಹಲವು ಬಾರಿ ನೋಡಿದ್ದೇವೆ. ಎನ್ ಡಿಎ ಬಂಧನ್ ಯಾವತ್ತೂ ಮುರಿಯದು . ಮೊರಾರ್ಜಿ ದೇಸಾಯಿ, ವಾಜಪೇಯಿ ಕಾಲದಲ್ಲಿ ಮಾತ್ರವಲ್ಲದೇ ಈಗಲೂ ಮಹಾಘಟ ಬಂಧನ್ ಇದೆ.ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಮಹಾಘಟ್ ಬಂಧನ್ ಮುರಿದು ಬೀಳುತ್ತಲೇ ಇದೆ ಎಂದು ಪ್ರಹ್ಲಾದ್ ಮೋದಿ ಟೀಕಿಸಿದರು.