ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ದ : ಪೂಜಾರಿ
ಮಂಗಳೂರು, ಡಿಸೆಂಬರ್ 10 : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ನಡೆದಿರುವ ಹೊತ್ತಿನಲ್ಲಿ 81 ವರ್ಷದ ಹಿರಿಯ ನಾಯಕ, ಮಾಜಿ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಅವರು ನಾನೂ ರೆಡಿಯಾಗಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಬಿಜೆಪಿ ಒಂದೆಡೆ ಚುನಾವಣೆಗೆ ವೇದಿಕೆ ಸಿದ್ದಪಡಿಸುತ್ತಿದ್ದರೆ, ಇನ್ನೊಂದಡೆ ಕಾಂಗ್ರೆಸ್ ನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಾಗಿ ಭಾರೀ ಪೈಪೋಟಿ ಅರಂಭವಾಗಿದೆ.
ಮೌನಕ್ಕೆ ಶರಣಾದ ಜನಾರ್ಧನ ಪೂಜಾರಿ: ಇದು ರಾಜಕೀಯ ನಿವೃತ್ತಿ ಸೂಚನೆಯೇ?
ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಅದೃಷ್ಟ ಪರೀಕ್ಷಿಸಲು ಮಾಜಿ ಸಚಿವ ರಮಾನಾಥ್ ರೈ ಮುಂದಾಗಿದ್ದಾರೆ. ಈ ನಡುವೆ ಸಚಿವ ಡಿ ಕೆ ಶಿವಕುಮಾರ್ ಆಪ್ತ ಹಾಗು ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೂಡ ಟಿಕೆಟ್ ಗಾಗಿ ಸ್ಪರ್ಧೆ ನಡೆಸಿದ್ದಾರೆ.
ಟಿಕೆಟ್ ಗಾಗಿ ನಡೆಯುತ್ತಿರುವ ಈ ಎಲ್ಲಾ ಪೈಪೋಟಿಗಳ ನಡುವೆ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ನನಗೆ ಟಿಕೆಟ್ ಕೊಟ್ಟರೆ ಖಂಡಿತ ಸ್ಪರ್ಧಿಸುತ್ತೇನೆ. ನಾನು ಚುನಾವಣೆಗೆ ಸ್ಪರ್ಧಿಸಲು ತಯಾರಿದ್ದೇನೆ ಎಂದು ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಹೈಕಮಾಂಡ್ಗೆ ತಿಳಿಸಿ ಆಗಿದೆ ಎಂದು ಪೂಜಾರಿ ಸ್ಪಷ್ಟ ಪಡಿಸಿದ್ದಾರೆ.
ರಾಮ ಮಂದಿರ ಪರ ಮಾತನಾಡಿದ ಜನಾರ್ಧನ ಪೂಜಾರಿಗೆ ಬಿಜೆಪಿ ಮುಖಂಡರ ಬೆಂಬಲ
ದಕ್ಷಿಣ ಕನ್ನಡದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬ ಬಗ್ಗೆ ನನಗೆ ರಾತ್ರಿ 12 ಗಂಟೆಗೆ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಯಾರ ದೂರವಾಣಿ ಕರೆ ಅಂತ ಬೇಡ ಎಂದು ಅವರು ಹೇಳಿದರು.
ನನಗೆ ಅಥವಾ ಬೇರೆ ಯಾರಿಗೆ ಬೇಕಾದರೂ ಟಿಕೆಟ್ ನೀಡಲಿ. ಅಭ್ಯರ್ಥಿ ಸಹಿತ ಎಲ್ಲರೂ ಪರಿಶ್ರಮದಿಂದ ಕೆಲಸ ಮಾಡಬೇಕು. ಜನರಲ್ಲಿ ಕೈಜೋಡಿಸಿ ಪ್ರಾರ್ಥಿಸಿ, ಅವರಲ್ಲಿ ನಂಬಿಕೆ ಹುಟ್ಟಿಸಬೇಕು. ನಂಬಿಕೆ ಇಲ್ಲದಿದ್ದರೆ ನಾನ್ನನ್ನೂ ಸೇರಿಸಿಕೊಂಡು ಯಾರು ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು. ನನ್ನ ಬಗ್ಗೆ ನಂಬಿಕೆ ಇದ್ದರೆ ಟಿಕೆಟ್ ಕೊಡಲಿ. ಕಾಂಗ್ರೆಸ್ನಿಂದ ಯಾರೇ ನಿಲ್ಲಲಿ, ಗೆಲ್ಲಬೇಕು ಎಂದು ಅವರು ಹೇಳಿದರು.
ನನ್ನನ್ನು ಕೊಂದರೂ ಪರವಾಗಿಲ್ಲ, ರಾಮಮಂದಿರ ಹೇಳಿಕೆಗೆ ಬದ್ಧ: ಪೂಜಾರಿ
ಜನಾರ್ಧನ ಪೂಜಾರಿ ಅವರ ಈ ಹೇಳಿಕೆ ದಕ್ಷಿಣ ಕನ್ನಡ ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಸೃಷ್ಟಿಸಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಗಾಗಿ ನಡೆಯಲಿರುವ ಜಿದ್ದಾಜಿದ್ದಿಯ ಸ್ಪರ್ಧೆ ಕುತೂಹಲ ಕೆರಳಿಸದೆ.