ಕೇಂದ್ರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ
ಮಂಗಳೂರು ಮೇ 24: ಮೂರನೇ ಬಾರಿಗೆ ಸಂಸದನಾಗಿ ಆಯ್ಕೆಯಾಗಿರುವುದು ಖುಷಿತಂದಿದೆ. ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವು. ಕೇಂದ್ರದಲ್ಲಿ ನನಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ಆಸೆ-ಆಕಾಂಕ್ಷೆ ಇಲ್ಲ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿರುವ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹ್ಯಾಟ್ರಿಕ್ ಗೆಲುವು ಬಿಜೆಪಿ ಕಾರ್ಯಕರ್ತರ ಹಾಗೂ ಮತದಾರರ ಗೆಲುವು. ಕಳೆದ 5 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ನೀಡಿರುವ ಮಹತ್ವದ ಯೋಜನೆ ಹಾಗೂ ಕಾರ್ಯಗಳಿಗೆ, ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆಗೆ ಮತದಾರರು ನೀಡಿದ ಆಶೀರ್ವಾದದ ಗೆಲುವು ಇದಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟ
ನಾನು ನನ್ನ ಕ್ಷೇತ್ರದಲ್ಲಿ ಮಾಡಿರುವ ಒಂದಷ್ಟು ಕೆಲಸ ಕಾರ್ಯಗಳನ್ನು ನೋಡಿಕೊಂಡು ಮತದಾರರು ಮೆಚ್ಚಿ ಆಶೀರ್ವಾದ ಮಾಡಿದ್ದಾರೆ. ಜತೆಗೆ ದೇಶದಲ್ಲಿ ಮೋದಿ ಕುರಿತಾಗಿ ಇರುವ ವಿಶ್ವಾಸದ ಕಾರಣದಿಂದ ಗೆಲುವಿನ ಅಂತರದಲ್ಲಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇರುವುದು ಮೋದಿ ಸುನಾಮಿ ಎಂಬುದು ಸ್ಪಷ್ಟವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ನಂ.1 ಸ್ಥಾನಕ್ಕೇರಿಸುವುದಷ್ಟೇ ನನ್ನ ಆಸೆ. ಜಿಲ್ಲೆಯ ಅಭಿವೃದ್ಧಿಗಾಗಿ ನನಗೆ ಅನುದಾನ ಬೇಕಿದೆ. ಸಚಿವ ಸ್ಥಾನ-ಹುದ್ದೆಯ ಆಕಾಂಕ್ಷೆ ನನಗಿಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಕ್ಷೇತ್ರದಲ್ಲಿ ಯಾವೆಲ್ಲ ಯೋಜನೆಗಳು ಅನುಷ್ಠಾನ ಹಂತದಲ್ಲಿ ಇವೆಯೋ ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದ ಅವರು, ಸ್ಮಾರ್ಟ್ ಸಿಟಿ ಕೇಂದ್ರದ ಯೋಜನೆಯಾದರೂ ಅದನ್ನು ಅನುಷ್ಠಾನ ಮಾಡಬೇಕಾದದ್ದು ರಾಜ್ಯ ಸರ್ಕಾರ ಮತ್ತು ಪಾಲಿಕೆ. ಹೀಗಾಗಿ ಇದು ನನ್ನ ಹಿನ್ನಡೆಯಲ್ಲ. ಪಂಪ್ ವೆಲ್ ಪ್ಲೈಓವರ್ ತಡೆಗೆ ಕಾಂಗ್ರೆಸ್ ಕಾರಣವೇ ಹೊರತು ನನ್ನ ಹಿನ್ನಡೆಯಲ್ಲ ಎಂದರು.