ಬಂಟ್ವಾಳದಲ್ಲಿ ಸಹೋದ್ಯೋಗಿಯ ಕುಟುಂಬಕ್ಕೆ ಆಧಾರವಾಗಿ ನಿಂತ ಪೊಲೀಸರು!
ಮಂಗಳೂರು, ಫೆಬ್ರವರಿ.01: ಎಲ್ಲವೂ ವ್ಯಾಪಾರೀಕರಣ ಆಗಿರುವ ಈ ಸಂದರ್ಭದಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಲೇ ಇರುತ್ತದೆ.ಅದರಲ್ಲೂ ಪೊಲೀಸರಿಗೆ ಮಾನವೀಯತೆ ಇಲ್ಲದ ಕಠೋರ ಮನಸ್ಸಿನವರು ಎಂದು ಜರಿಯಲಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಗಳು ಮಾನವೀಯತೆ ಮೆರೆದ ಪ್ರಸಂಗ ಬೆಳಕಿಗೆ ಬಂದಿದೆ.
ತಮ್ಮ ಬ್ಯಾಚ್ ನ ಸಹೋದ್ಯೋಗಿ ಕುಟುಂಬಕ್ಕೆ ಪೋಲೀಸ್ ಸಿಬ್ಬಂದಿಗಳು ಆಧಾರವಾಗಿ ನಿಂತು ಆರ್ಥಿಕ ನೆರವು ನೀಡಿ, ಮಾದರಿಯಾದ ಪ್ರಸಂಗ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ. 2002ರಲ್ಲಿ ಹೃದಯಘಾತದಲ್ಲಿ ಪೊಲೀಸ್ ಸಿಬ್ಬಂದಿ ಆನಂದ ಎಂಬವವರು ಮೃತಪಟ್ಟಿದ್ದರು. 2000ನೇ ಇಸವಿಯ ಬ್ಯಾಚ್ ನ ಪೋಲಿಸ್ ಸಿಬ್ಬಂದಿ ಆನಂದ ವಿಧಿಯಾಟಕ್ಕೆ ಬಲಿಯಾಗಿದ್ದರು.
ಮೃತ ಪ್ರಶಿಕ್ಷಣಾರ್ಥಿ ಪಿಎಸ್ಐಗೆ ಸಹೋದ್ಯೋಗಿಗಳ ನೆರವು: ಎಚ್ಡಿಕೆ ಅಭಿನಂದನೆ
ಬೆಳ್ತಂಗಡಿ ತಾಲೂಕಿನ ಪದ್ಮುಂಜ ನಿವಾಸಿಯಾಗಿದ್ದ ಅನಂದರವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದರು. ವಿಧಿಯಾಟದಲ್ಲಿ ಸೋತ ಅನಂದರವರಿಗೆ2002 ರಲ್ಲಿ ಹಠಾತ್ತಾಗಿ ಎದೆ ನೋವು ಕಾಣಿಸಿಕೊಂಡು ಸುಬ್ರಹ್ಮಣ್ಯ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹ್ರದಯಘಾತದಿಂದ ಮರಣಹೊಂದಿದ್ದರು. ಅವಿವಾಹಿತ ಅನಂದ ಅವರು ತೀರ ಬಡಕುಂಟುಂಬದಲ್ಲಿ ಬೆಳೆದು ಬಂದವರು. ತಂದೆಯನ್ನು ಕಳೆದುಕೊಂಡ ಇವರಿಗೆ ಇಳಿ ವಯಸ್ಸಿನ ತಾಯಿ ಮನೆಯಲ್ಲಿ ಇದ್ದಾರೆ.
ದುಡಿಯುವ ಕೈಗಳನ್ನೇ ಕಳೆದು ಕೊಂಡಿದ್ದ ಆನಂದ ಅವರ ತಾಯಿ ಕಳೆದ ಹಲವಾರು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇದನ್ನರಿತ 2000 ನೇ ಬ್ಯಾಚ್ ನ ಕೆಲ ಪೊಲೀಸ್ ಸಿಬ್ಬಂದಿಗಳು ಸಹೋದ್ಯೋಗಿ ಆನಂದ್ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿದರು.
50,000 ರೂಪಾಯಿ ನಗದನ್ನು ಜನವರಿ 30 ರಂದು ಆನಂದ್ ತಾಯಿ ಬೀತುರು ಅವರಿಗೆ ಹಸ್ತಾಂತರಿಸಿದ್ದು, ನಗದು ಹಣವನ್ನು ನೀಡಿ ಔದಾರ್ಯ ಮೆರೆದಿದ್ದಾರೆ.
ಮಂಗಳೂರಲ್ಲಿ ಹಸಿವಿನಿಂದ ನಿತ್ರಾಣಗೊಂಡ ಹಿರಿಯ ಜೀವಕ್ಕೆ ಆರೈಕೆ ಮಾಡಿದ ಮಹಿಳಾ ಪೇದೆ
ಬಡ ಕುಟುಂಬದ ಸಹಾಯಕ್ಕೆ ನಿಂತ ಪೊಲೀಸ್ ಸಿಬ್ಬಂದಿಯ ತಂಡದ ಎಲ್ಲರಿಗೂ ಆನಂದ್ ಅವರ ತಾಯಿ ಬೀತುರು ಕೃತಜ್ಞತೆ ಸಲ್ಲಿಸಿದ್ದಾರೆ. ಪೊಲೀಸರು ಸಮಾಜಮುಖಿಯಾಗಿ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವುದು ಶ್ಲಾಘನೀಯವಾಗಿದೆ. ಮಾನವೀಯತೆ ಮೆರೆಯುತ್ತಿರುವ ಪೊಲೀಸರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿದೆ.