ಮಂಗಳೂರು ದಸರಾ ವೇಳೆ ಹುಲಿವೇಷ ಕುಣಿತಕ್ಕೆ ಅನುಮತಿ
ಮಂಗಳೂರು, ಅಕ್ಟೋಬರ್ 12 : " ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪ್ರದಾಯದ ಪ್ರಕಾರ ಹುಲಿ ವೇಷ ಕುಣಿತಕ್ಕೆ ಈ ಬಾರಿಯ ಮಂಗಳೂರು ದಸರಾದಲ್ಲಿ ಅವಕಾಶ ನೀಡುವ ವಿಶ್ವಾಸವಿದೆ" ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.
ಸೋಮವಾರ ಫೇಸ್ ಬುಕ್ ಪೋಸ್ಟ್ ಹಾಕಿರುವ ಶಾಸಕರು, "ದಸರಾ ಅಚರಣೆಯ ವೇಳೆ ದೇವಾಲಯದ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡುವ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.
ಮಂಗಳೂರು ಮೇಯರ್ ಕವಿತಾ ಹುಲಿವೇಷ ತೊಟ್ಟು ಸಖತ್ ಡ್ಯಾನ್ಸ್
"ಕೋವಿಡ್ ಕಾರಣದಿಂದಾಗಿ ದಸರಾ ಸಂದರ್ಭದಲ್ಲಿ ಹುಲಿ ವೇಷ ಕುಣಿತಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೆ, ವಿವಿಧ ದೇವಾಲಯ ಹಾಗೂ ಶಾರದೋತ್ಸವ ಸಮಿತಿಯ ಪ್ರಮುಖರು ಅವಕಾಶ ನೀಡುವಂತೆ ತಮಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು" ಎಂದು ಶಾಸಕರು ಪೋಸ್ಟ್ ಹಾಕಿದ್ದಾರೆ.
ಹುಲಿವೇಷ ತಂಡದೊಂದಿಗೆ ಹೆಜ್ಜೆ ಹಾಕಿದ ಆಸ್ಕರ್ ವಿಡಿಯೋ ವೈರಲ್
"ಕರಾವಳಿಯ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಹಾಗೂ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಎದುರಾಗಬಾರದು ಎಂಬ ಕಾರಣದಿಂದ ನಾನು ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಈ ವಿಷಯ ಪ್ರಸ್ತಾಪಿಸಿದ್ದೇನೆ" ಎಂದು ಶಾಸಕರು ಹೇಳಿದ್ದಾರೆ.
ಮೈಸೂರು ದಸರಾ; ಈ ಬಾರಿ ಜಟ್ಟಿಗಳ ವಜ್ರಮುಷ್ಟಿ ಕಾಳಗವೂ ರದ್ದು
"ಸಂಪ್ರದಾಯ ಪ್ರಕಾರವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ. ಸರ್ಕಾರದ ಉನ್ನತ ಅಧಿಕಾರಿಗಳ ಜತೆಗೂ ಚರ್ಚಿಸಿದ್ದೇನೆ. ದೇವಾಲಯದ ಉತ್ಸವ ಹಾಗೂ ಶಾರದೋತ್ಸವ ಸಮಿತಿ ಕಾರ್ಯಕ್ರಮದ ವೇಳೆ ಕನಿಷ್ಠ ಸಂಖ್ಯೆಯಲ್ಲಿ ಹುಲಿ ವೇಷ ಕುಣಿತಕ್ಕೆ ಸಂಪ್ರದಾಯ ಪ್ರಕಾರ ಅವಕಾಶ ಕಲ್ಪಿಸುವಂತೆ ಕೋರಿದ್ದೇನೆ" ಎಂದು ಬರೆದಿದ್ದಾರೆ.
"ಸಂಪ್ರದಾಯದಂತೆ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿದ್ದು, ಯಾರೂ ಕೂಡ ಆತಂಕ ಪಡುವ ಆವಶ್ಯಕತೆ ಇಲ್ಲ" ಎಂದು ಶಾಸಕರು ಭರವಸೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆಯುವ ದಸರಾದಂತೆ ಮಂಗಳೂರು ದಸರಾ ಸಹ ಭಾರಿ ವಿಜೃಂಭಣೆಯಿಂದ ನಡೆಯುತ್ತದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಬಾರಿಯ ಮಂಗಳೂರು ದಸರಾ ಸರಳವಾಗಿ ನಡೆಯಲಿದೆ.