ಪುತ್ತೂರಿನ ತೆಂಕಿಲ ದರ್ಖಾಸು ಎಂಬಲ್ಲಿ ಬಿರುಕು ಬಿಟ್ಟ ಭೂಮಿ, ಜನರಲ್ಲಿ ಆತಂಕ
ಮಂಗಳೂರು, ಆಗಸ್ಟ್ 12: ಮಹಾ ಮಳೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭೂಮಿ ಬಿರುಕುಬಿಟ್ಟಿದೆ. ಭೂಮಿಯಲ್ಲಿ ಕಂಡುಬಂದ ಬಿರುಕು ಜನರಲ್ಲಿ ಆತಂಕ ಮೂಡಿಸಿದೆ. ಪುತ್ತೂರಿನ ತೆಂಕಿಲ ದರ್ಖಾಸು ಎಂಬಲ್ಲಿ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗೇರು ತೋಟವಿರುವ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಬಿರುಕು ಬಿಟ್ಟ ಪ್ರದೇಶ ಅಪಾಯಕಾರಿ ಎಂದು ಭೂ ವಿಜ್ಞಾನಿಗಳ ತಂಡ ಸೂಚಿಸಿದೆ. ಭಾರೀ ಮಳೆಯಾದರೆ ಈ ಭಾಗ ಕುಸಿದು ಕೆಳಗೆ ಜಾರುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಂಚಿಕೆರೆಯಲ್ಲಿ ಬಿರುಕು ಬಿಟ್ಟ ಭೂಮಿ; ಜನರ ಆತಂಕ
ಈ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿರುವುದು ನಿನ್ನೆ ಸ್ಥಳೀಯರ ಗಮನಕ್ಕೆ ಬಂದಿತ್ತು. ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ ಸುಮಾರು 200 ಮೀಟರ್ ಉದ್ದದಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಕಂಡುಬಂದಿತ್ತು. ಅಲ್ಲದೆ ಗುಡ್ಡದ ಮೇಲಿನ ಭಾಗದಲ್ಲಿಯೂ ಅಡ್ಡ ಮತ್ತು ನೇರವಾಗಿ ಬಿರುಕು ಬಿಟ್ಟಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ.
ಬಿರುಕು ಬಿಟ್ಟ ಜಾಗದಲ್ಲಿ ಮಣ್ಣಿನ ಅಡಿಭಾಗದಿಂದ ಮಣ್ಣುಮಿಶ್ರಿತ ನೀರು ಮೇಲೆ ಬರುತ್ತಿದೆ. ಗುಡ್ಡದ ಮೇಲಿಂದಲೂ ನೀರು ಹರಿದು ಬರುತ್ತಿದೆ. ಮಳೆಯ ನೀರು ಬಿರುಕು ಬಿಟ್ಟ ಜಾಗದ ಮುಖಾಂತರ ಇಂಗಿ ಒತ್ತಡ ಅಧಿಕವಾಗಿ ಮತ್ತೊಂದು ಜೋಡುಪಾಲ ದುರಂತ ಸಂಭವಿಸುವ ಆತಂಕ ಇಲ್ಲಿಯ ಜನರಲ್ಲಿ ಮನೆ ಮಾಡಿದೆ.