ಮಂಗಳೂರಿನಲ್ಲಿ ಪ್ರಕಾಶ್ ರೈ ವಿರುದ್ಧ ಕೆಂಡ ಕಾರಿದ ಹುಚ್ಚ ವೆಂಕಟ್
ಮಂಗಳೂರು ಮೇ 05: ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಪ್ರಧಾನಿ ಮೋದಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕಾಶ ರೈ ನೀಡಿರುವ ಹೇಳಿಕೆಗಳಿಗೆ ಕೆಂಡಾಮಂಡಲರಾಗಿರು ಹುಚ್ಚ ವೆಂಕಟ್, ಪ್ರಕಾಶ್ ರೈ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕಾಶ್ ರೈ ವಿರುದ್ಧ ವಾಗ್ದಾಳಿ ನಡೆಸಿದರು. "ಪ್ರಕಾಶ್ ರೈ ಸಿನಿಮಾದಲ್ಲಿ ಬಹಳ ಡೈಲಾಗ್ ಹೊಡಿಯುತ್ತಾನೆ. ಸಮಾಜಕ್ಕೆ ಏನು ಸಹಾಯ ಮಾಡಿದ್ದಿಯಾ? ಎಷ್ಟು ಹಣ ಕೊಟ್ಟಿದ್ದಿಯಾ?," ಎಂದು ಅವರು ಕಿಡಿಕಾರಿದರು.
ರಾಜ್ಯದಲ್ಲಿ ಮೋದಿ ಪರ ಅಲೆ ಎಂಬುದು ಸುಳ್ಳು: ಪ್ರಕಾಶ್ ರೈ
ಪ್ರಕಾಶ್ ರೈ ಅವರನ್ನು ಪ್ರತಿಕಾಗೋಷ್ಠಿಯುದ್ದಕ್ಕೂ ಏಕ ವಚನದಲ್ಲೇ ಸಂಬೋಧಿಸಿದ ಹುಚ್ಚ ವೆಂಕಟ್ , "ನೀನು ನೀಡೋದು ದರಿದ್ರ ಸ್ಟೇಟ್ ಮೆಂಟ್. ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ. ನಿನ್ನ ಮಾತಿನಿಂದ ಮೋದಿ ಅವರಿಗೆ ಏನು ಆಗಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಸಮಾಜಕ್ಕೆ ಪ್ರಕಾಶ ರೈ ಕೊಡುಗೆ ಏನು? ಜನರಿಗೆ ಎಷ್ಟು ದುಡ್ಡು ಕೊಟ್ಟಿದ್ದಿ? ಎಷ್ಟು ಜನಕ್ಕೆ ಊಟ ಹಾಕಿದ್ದಿ? ಮೋದಿ ಹೆಸರು ಹೇಳಿಕೊಂಡು ಪ್ರಸಿದ್ದಿ ಪಡೆಯುತ್ತಿದ್ದಿ ಎಂದು ದೂರಿದರು.
ಕೇವಲ ಪ್ರಚಾರಕ್ಕೆ ಮೋದಿ ವಿರುದ್ದ ಪ್ರಕಾಶ್ ರೈ ಮಾತನಾಡುತ್ತಾನೆ. ಪ್ರಕಾಶ್ ರೈ ಮಾತ್ರನಾ ನಾಯಿನು ಕೂಡ ಡೈಲಾಗ್ ಹೊಡೆಯುತ್ತೆ . ಪ್ರಕಾಶ್ ರೈ ನನ್ನ ಎಕ್ಕಡಕ್ಕೆ ಸಮಾನ ಎಂದು ಹರಿಹಾಯ್ದರು. ನೀನು ಸಿನಿಮಾದಲ್ಲಿ ವಿಲನ್. ನಿಜ ಜೀವನದಲ್ಲೂ ಜನರ ಪಾಲಿಗೆ ವಿಲನ್. ಇನ್ಮೇಲೆ ಮಾತನಾಡುವಾಗ ಯೋಚನೆ ಮಾಡು ಎಂದು ಪ್ರಕಾಶ್ ರೈ ಅವರನ್ನು ಎಚ್ಚರಿಸಿದರು.
ಟ್ವಿಟ್ಟರ್ ನಲ್ಲಿ ಮತ್ತೆ ಸುದ್ದಿ ಮಾಡುತ್ತಿದೆ ಪ್ರಕಾಶ್ ರೈ ವಿಡಿಯೋ
ನಾನು ಆರ್ ಆರ್ ನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದೇನೆ. ಚಪ್ಪಲಿ ಚಿಹ್ನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಗಂಡು ಮಕ್ಕಳ ಚಪ್ಪಲಿ ಚಿಹ್ನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಚುನಾವಣೆಗೆ ನಾನು ಹೆಣ್ಣು ಮಕ್ಕಳ ಚಪ್ಪಲಿ ಚಿಹ್ನೆ ಬಯಸಿದ್ದೆ ಆದರೆ ಅದು ಸಿಗಲಿಲ್ಲ ಎಂದು ಹೇಳಿದರು.
"ನನ್ನಲ್ಲಿ ದುಡ್ಡಿಲ್ಲವೆಂದು ಯಾವತ್ತೂ ಬೇಜಾರು ಇಲ್ಲ. ನನ್ನ ಅಪ್ಪನ ಆಸ್ತಿಯನ್ನು ಮಾರಾಟ ಮಾಡಿದ್ದೇನೆ. ನಾನು ಹಣವನ್ನು ಬೇರೆಯವರಿಗೋಸ್ಕರ ಖರ್ಚು ಮಾಡುತ್ತೇನೆ," ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ನಾನು ಮನೆ ಮನೆಗೆ ಹೋಗಿ ಓಟ್ ಮಾಡಿ ಅಂತ ಕೈ ಮುಗಿಯಲ್ಲ. ನಿಮ್ಮ ಮನೆಗೆ ನನ್ನ ಎಕ್ಕಡ ಕೂಡ ಬರಲ್ಲ. ನಾನು ನಿಮಗೆ ಬೇಕಾದರೆ ನನಗೆ ಮತ ನೀಡಿ ಗೆಲ್ಲಿಸಿ. ನಾನು ಜನರ ಪ್ರೀತಿ ಸಂಪಾದಿಸಿದ್ದೇನೆ. ನನಗೆ ಮಾಧ್ಯಮದವರು ಒಳ್ಳೆಯ ಪ್ರಚಾರ ಕೊಡುತ್ತಿದ್ದಾರೆ. ನಾನು ನನ್ನನ್ನು ಯಾವತ್ತು ಮಾರಿಕೊಂಡಿಲ್ಲ. ನಾನು ಚುನಾವಣೆಯಲ್ಲಿ ಸೋತರೆ ಜನ ಸೋತಂತೆ ಎಂದು ಹೇಳಿದರು.
"ಮುಂದೆ ಮಂಡ್ಯದಲ್ಲಿ ಲೋಕಸಭೆಗೆ ಸ್ಪರ್ಧಿಸುತ್ತೇನೆ. ಪ್ರಧಾನಿಯಾಗುತ್ತೇನೆ. ನನ್ನನ್ನು ಸೋಲಿಸಿದರೆ ರಾಜ್ಯವನ್ನು ಮಾರಿದಂತೆ," ಎಂದು ಹೇಳಿದ ಅವರು, ಅತ್ಯಚಾರಿಯನ್ನು ನೇಣಿಗೆ ಏರಿಸಬೇಕು ಎಂದು ಹೇಳಿದ್ದು ನಾನು. ಅದನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ," ಎಂದು ತಿಳಿಸಿದರು.
ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳ ಪರವಾಗಿ ಯಾರು ನಿಂತಿಲ್ಲ. ಹೆಣ್ಣು ಮಕ್ಕಳ ವಿಚಾರಕ್ಕೆ ಯಾರೇ ಬಂದರೂ ಕೈ ಕಾಲು ಮುರಿದು ಹಾಕಿ ಎಂದು ಹೇಳಿದರು.