2023ರ ಚುನಾವಣಾ ಭವಿಷ್ಯ, ರಾಜ್ಯಸಭೆಗೆ ಆಯ್ಕೆಯಾದ ರಹಸ್ಯ ಬಿಚ್ಚಿಟ್ಟ ದೇವೇಗೌಡ
ಮಂಗಳೂರು, ಫೆ 13: ರಾಜಕೀಯವನ್ನು ಅರಿದು ಕುಡಿದಿರುವ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರೂ ಆಗಿರುವ ಎಚ್.ಡಿ.ದೇವೇಗೌಡ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಏನು ತೀರ್ಪನ್ನು ನೀಡಲಿದ್ದಾನೆ ಎನ್ನುವುದರ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮದವವರೊಂದಿಗೆ ಮಾತನಾಡುತ್ತಿದ್ದ ದೇವೇಗೌಡ್ರು, "ನನ್ನ ಹತ್ತಿರ ಯಾರು ಬೇಕಾದರೂ ಬರಬಹುದು, ಆದರೆ ನನ್ನ ನಿರ್ಧಾರವನ್ನು ಈಗ ಹೇಳುವುದಿಲ್ಲ"ಎಂದು ಹೇಳಿದ್ದಾರೆ. ಆ ಮೂಲಕ, ಬಿಜೆಪಿಯವರು ಬಂದರೂ ತಿರಸ್ಕರಿಸುವುದಿಲ್ಲ ಎನ್ನುವ ಮುನ್ಸೂಚನೆಯನ್ನು ಗೌಡ್ರು ನೀಡಿದ್ದಾರೆ.
ಮುಂದಿನ ಚುನಾವಣೆಗೆ ಎಲ್ಲಿಂದ ಸ್ಪರ್ಧೆ? ಕುಮಾರಸ್ವಾಮಿ ಅಚ್ಚರಿಯ ನಿರ್ಧಾರ
ಹಿಜಾಬ್, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆ, ಮುಂಬರುವ ಚುನಾವಣೆಯ ವಿಚಾರದ ಬಗ್ಗೆ ಮಾತನಾಡಿದ ದೇವೇಗೌಡ್ರು, ಪ್ರಧಾನಿ ಮೋದಿಯವರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಗೋಷ್ಠಿಯಲ್ಲಿ ವ್ಯಕ್ತ ಪಡಿಸಲಿಲ್ಲ.
ಇದರ ಜೊತೆಗೆ, ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜ್ ವಿರುದ್ದ ಪರಾಭವಗೊಂಡ ನಂತರ, ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಹೇಗೆ ಎನ್ನುವುದರ ಬಗ್ಗೆಯೂ ದೇವೇಗೌಡ್ರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಹಿಜಾಬ್: ಹಿಂದೂ ಮೈಂಡ್ ರೀಡಿಂಗ್ ಗೆದ್ದ ಬಿಜೆಪಿ, ಬೆಳ್ಳಿತಟ್ಟೆಯಲ್ಲಿ ಗರಿಗರಿ ವೋಟ್ ಬ್ಯಾಂಕ್?
ಮೋದಿಯವರನ್ನು ಹಲವಾರು ಬಾರಿ ಅವರ ನಿವಾಸ/ಕಚೇರಿಯಲ್ಲಿ ಭೇಟಿಯಾಗಿದ್ದೇನೆ
"ನಾನು ಪ್ರಧಾನಿ ಮೋದಿಯವರನ್ನು ಹಲವಾರು ಬಾರಿ ಅವರ ನಿವಾಸ/ಕಚೇರಿಯಲ್ಲಿ ಭೇಟಿಯಾಗಿದ್ದೇನೆ. ತುಂಬಾ ವಿಶ್ವಾಸದಿಂದ ನನ್ನನ್ನು ಬರ ಮಾಡಿಕೊಳ್ಳುತ್ತಾರೆ, ಜೊತೆಗೆ, ನನ್ನ ಎಲ್ಲಾ ಮಾತನ್ನು ಅವರು ಕಿವಿಗೊಟ್ಟು ಆಲಿಸುತ್ತಾರೆ. ಆದರೆ, ಏನು ಪ್ರಯೋಜನ? ವಿನಯತೆಯಿಂದ ಮಾತನಾಡುತ್ತಾರೆ ಅಷ್ಟೇ.. ಯಾವುದೇ ಉತ್ತರವನ್ನು ಅವರು ನೀಡುವುದಿಲ್ಲ, ಕೆಲಸವನ್ನೂ ಮಾಡಿಕೊಡುವುದಿಲ್ಲ. ಹಾಸನದಲ್ಲಿ ಐಐಟಿ ಸ್ಥಾಪನೆ ಸೇರಿದಂತೆ, ಅವರ ಮುಂದಿಟ್ಟ ಯಾವ ಅಹವಾಲು ಕೂಡಾ ಕಾರ್ಯರೂಪಕ್ಕೆ ಬಂದಿಲ್ಲ"ಎಂದು ದೇವೇಗೌಡ್ರು, ಪ್ರಧಾನಿಯ ಬಗ್ಗೆ ಬೇಸರವನ್ನು ವ್ಯಕ್ತ ಪಡಿಸಿದರು.
ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ದೇವೇಗೌಡ್ರು, "ಕುಮಾರಸ್ವಾಮಿಯವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು, ಅವರು ಅದಕ್ಕೆ ಸ್ವತಂತ್ರರು. ಆದರೆ, ಅವರು ರಾಮನಗರ ಬಿಟ್ಟು ಬೇರೆಲ್ಲೂ ಕಣಕ್ಕೆ ಇಳಿಯುವುದಿಲ್ಲ. ಕಳೆದ ಬಾರಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿದರು. ಇದರಿಂದ, ಹಾಸನ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಸೋಲುವಂತಾಯಿತು"ಎಂದು ಗೌಡ್ರು ಅಸಮಾಧಾನ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿಯ ಬೆಂಬಲವೇ ಕಾರಣ
"ನಾನು ಯಾವುದೇ ರಾಷ್ಟ್ರೀಯ ಪಕ್ಷಗಳ ಜೊತೆಗೆ ದ್ವೇಷಕ್ಕೆ ಹೋಗುವುದಿಲ್ಲ. ನಾನು ರಾಜ್ಯಸಭೆಗೆ ಆಯ್ಕೆಯಾಗಲು ಕಾಂಗ್ರೆಸ್ ಮತ್ತು ಬಿಜೆಪಿಯ ಬೆಂಬಲವೇ ಕಾರಣ. ಬಿಜೆಪಿಯವರು ಗೌಡ್ರು ನಿಂತರೆ ಕ್ಯಾಂಡಿಡೇಟ್ ಹಾಕುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದರು, ಸೋನಿಯಾ ಗಾಂಧಿಯವರೂ ವೈಯಕ್ತಿಕವಾಗಿ ಕರೆ ಮಾಡಿ ನಿಮಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದರು. ನಮ್ಮ ಪಕ್ಷಕ್ಕೆ ಇರುವ ಸಂಖ್ಯಾಬಲದ ಆಧಾರದ ಮೇಲೆ ಕೇವಲ ಮೂರು ನಿಮಿಷ ಮಾತನಾಡಲು ಅವಕಾಶ ನೀಡಲಾಯಿತು, ಇದು ನನಗೆ ಬಹಳ ನೋವನ್ನು ತಂದಿತು"ಎಂದು ದೇವೇಗೌಡ್ರು ಹೇಳಿದರು.
ಮುಂದಿನ ಅಸೆಂಬ್ಲಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ
"ಪಂಚ ರಾಜ್ಯದ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ದೇಶದ ರಾಜಕೀಯದಲ್ಲಿ ಕೆಲವು ಬದಲಾವಣೆಯಾಗಲಿದೆ. ಮುಂದಿನ ಕರ್ನಾಟಕ ಅಸೆಂಬ್ಲಿ ಚುನಾವಣೆಯನ್ನು ನಾವೇ ಗೆಲ್ಲುತ್ತೇವೆ ಎನ್ನುವವರ ಬಂಡವಾಳ ನಮಗೆ ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಬೆಂಬಲ ಬೇಕೇ ಬೇಕು"ಎಂದು ದೇವೇಗೌಡ್ರು ಹೇಳುವ ಮೂಲಕ, ಮುಂದಿನ ಅಸೆಂಬ್ಲಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಭವಿಷ್ಯವನ್ನು ಎಚ್.ಡಿ.ದೇವೇಗೌಡ ನುಡಿದಿದ್ದಾರೆ.
Recommended Video