ಮಂಗಳೂರಿನಲ್ಲಿ ಏನಾಗ್ತಿದೆ?, ಹಿಂಜಾವೇ ಕಾರ್ಯಕರ್ತನ ಹತ್ಯೆಗೆ ಯತ್ನ
ಮಂಗಳೂರು, ಜನವರಿ 09: ಇತ್ತೀಚೆಗಷ್ಟೇ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಿಂದ ಪ್ರಕ್ಷುಬ್ಧವಾಗಿದ್ದ ಕರಾವಳಿ, ಮತ್ತೊಮ್ಮೆ ಅಶಾಂತಿಯಲ್ಲಿ ಬೇಯುತ್ತಿದೆ.
ದಾಳಿಗೆ ಪ್ರತಿ ದಾಳಿಗಳು ಮುಂದುವರೆದಿವೆ. ದೀಪಕ್ ರಾವ್ ಮತ್ತು ಬಶೀರ್ ಹತ್ಯೆಯ ಕಹಿ ನೆನಪುಗಳು ಮಾಸುವ ಮುನ್ನವೇ ಮತ್ತೊಂದು ಕೊಲೆ ಯತ್ನ ನಡೆದಿದೆ. ಸೂರತ್ಕಲ್ ನಲ್ಲಿ ಸೋಮವಾರ ರಾತ್ರಿ (ಜನವರಿ 8) ಹಿಂದೂ ಜಾಗರಣ ವೇದಿಕೆಯ ಮುಖಂಡ ಭರತ್ ಅಗರಮೇಲು ಎನ್ನುವರ ಕೊಲೆ ಯತ್ನ ನಡೆದಿದೆ.
ಪ್ರತೀಕಾರ ದಾಳಿಯ ಭಯ, ಸಂಜೆಯಾಗುತ್ತಿದ್ದಂತೆ ಮಂಗಳೂರು ಸ್ತಬ್ಧ
ಭರತ್ ಸೋಮವಾರ ರಾತ್ರಿ ತಮ್ಮ ಮನೆಯತ್ತ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ. ತಲ್ವಾರ್ ಹಿಡಿದುಕೊಂಡು ಬರುತ್ತಿದ್ದಂತೆಯೇ ಭರತ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಮ್ಮೆ ಹೋದ ಜೀವ ಮರಳಿ ಬಾರದು. ಹಾಗಾಗಿ ಪ್ರತೀಕಾರ ಮತ್ತು ಸೇಡನ್ನು ಬದಿಗಿರಿಸಿ ಎಲ್ಲರೂ ಶಾಂತಿ- ಸಾಮರಸ್ಯದಿಂದ ಬಾಳೋದು ಉತ್ತಮ ಎನ್ನುವುದು ನಮ್ಮ ಅಭಿಪ್ರಾಯ.