ಪಿಲಿಕುಳ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ
ಮಂಗಳೂರು ಜನವರಿ 31: ಮಂಗಳೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಪಿಲಿಕುಳ ಉದ್ಯಾನ ವನದಲ್ಲಿ ಎಂಟು ವರ್ಷದ ನೀರಾನೆ ಕವಿತಾ ಏಳು ದಿನಗಳ ಹಿಂದೆ ಮರಿ ಹಾಕಿದ್ದು, ನೀರಾನೆ ತಾಯಿ ಕವಿತಾ ಹಾಗೂ ಅದರ ಮರಿ ಆರೋಗ್ಯವಾಗಿವೆ.
ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಪ್ರಥಮ ಬಾರಿಗೆ ನೀರಾನೆ ಕವಿತಾಳಿಗೆ ಹುಟ್ಟಿದ ಮರಿ ನೀರಾನೆಯನ್ನು ಯಾರು ದತ್ತು ಪಡೆದುಕೊಳ್ಳುತ್ತಾರೋ ಅವರ ಹೆಸರನ್ನು ಇಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಪಿಲಿಕುಳ ಜೈವಿಕ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನ
ಕಳೆದ ಒಂದು ವರ್ಷದ ಹಿಂದೆ ಪಿಲಿಕುಳಕ್ಕೆ ಒಂದು ಗಂಡು ಹಾಗೂ ಎರಡು ಹೆಣ್ಣು ನೀರಾನೆಗಳನ್ನು ತರಲಾಗಿತ್ತು.ಇವುಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ತರಿಸಲಾಗಿತ್ತು. ಪಿಲಿಕುಳದ ವಾತಾವರಣ ನೀರಾನೆಗಳ ಸಂತಾನೋತ್ಪತ್ತಿಗೆ ಪೂರಕವಾಗಿರು ಹಿನ್ನೆಲೆಯಲ್ಲಿ ಕವಿತಾ ಮರಿಗೆ ಜನ್ಮ ನೀಡಿದ್ದಾಳೆ. ಈಗ ಪಿಲಿಕುಳದಲ್ಲಿ ಕಾವೇರಿ, ಕವಿತಾ ಹಾಗೂ ಅಶ್ವಿನ್ ಎನ್ನುವ ನೀರಾನೆ ಜತೆಗೆ ಮರಿ ನೀರಾನೆ ಯನ್ನು ಕೂಡ ನೋಡುವ ಅವಕಾಶ ಪ್ರವಾಸಿಗರಿಗೆ ದೊರೆಯಲಿದೆ.
ಪಿಲಿಕುಳಕ್ಕೆ ಭೇಟಿ ನೀಡುವವರು ಇದೀಗ ಭಾರತೀಯ ನಾಯಿ ಧೋಲೆಯನ್ನು ಕೂಡ ನೋಡ ಬಹುದಾಗಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಇಂದಿರಾ ಗಾಂಧಿ ಜೈವಿಕ ಉದ್ಯಾನದಿಂದ ನಾಲ್ಕು ಧೋಲೆಗಳನ್ನು ತರಿಸಲಾಗಿದೆ. ಭಾರತದಲ್ಲಿ ಅತ್ಯಂತ ವಿರಳವಾಗಿರುವ ಈ ಜಾತಿಯ ನಾಯಿಗಳನ್ನು ಇಲ್ಲಿಯ ತನಕ ಪಿಳಿಕುಳದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು.