ತಾಂಬೂಲ ಪ್ರಶ್ನೆ; ಮಳಲಿ ದರ್ಗಾದದಲ್ಲಿ ಗುರುಸಾನಿಧ್ಯ ಗೋಚರ
ಮಂಗಳೂರು, ಮೇ 25: ಮಳಲಿ ದರ್ಗಾದಲ್ಲಿ ದೇವಸ್ಥಾನ ಶೈಲಿಯ ಕಟ್ಟಡ ವಿಚಾರದಲ್ಲಿ ಬುಧವಾರ ಕೇರಳದ ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಗುರುಸಾನಿಧ್ಯ ಗೋಚರವಾಗಿದೆ ಎಂದು ತಿಳಿಸಿದ್ದಾರೆ.
ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಇದೆಯೋ ಎಂಬುದನ್ನು ತಿಳಿದುಕೊಳ್ಳಲು ತಾಂಬೂಲ ಪ್ರಶ್ನೆ ನಡೆಸಲು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ನಿರ್ಧರಿಸಿತ್ತು. ಹಾಗಾಗಿ ಜ್ಯೋತಿಷದಲ್ಲಿ ಅತೀ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲ ಇಡಲು ನಿರ್ಧರಿಸಲಾಗಿದ್ದು, ಇದರ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯನ್ನಿಡಲಾಗಿತ್ತು.
ಶಿವನ ಆರಾಧನೆ ಆಗಿರಬಹುದು
ಮೊದಲಾಗಿ ಕುಂಭ ರಾಶಿಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯನ್ನು ಇರಿಸಲಾಗಿತ್ತು. ಆ ಬಳಿಕ ಪ್ರಶ್ನಾ ಚಿಂತನೆಯಲ್ಲಿ ಆ ಸ್ಥಳದಲ್ಲಿ ಹಿಂದೆ ಗುರುಮಠವಿತ್ತು ಎಂದು ಗೋಚರವಾಗಿದೆ. ಅಲ್ಲಿ ಶಿವನ ಆರಾಧನೆ ಆಗಿರಬಹುದು, ಹಿಂದಿನ ಕಾಲದ ವ್ಯಾಜ್ಯವೊಂದರ ಪರಿಣಾಮ ಇಲ್ಲಿ ಹಿಂದೆ ಇದ್ದ ದೈವ ಸಾನಿಧ್ಯವು ನಾಶವಾಗಿದೆ. ಹಾಗಾಗಿ ಹಿಂದೆ ಇದ್ದವರು ಸ್ಥಳಾಂತರಗೊಂಡಿದ್ದಾರೆ. ಆದರೆ ದೈವ ಸಾನಿಧ್ಯವು ಅಲ್ಲಿಂದ ಪೂರ್ತಿಯಾಗಿ ಹೋಗಿಲ್ಲ. ಆದರೆ ಯಾವ ಸ್ಥಳದಲ್ಲಿ ದೈವ ಸಾನಿಧ್ಯವಿದೆ ಎಂದು ಶೋಧಿಸಬೇಕು. ಆ ಸಾನಿಧ್ಯದಲ್ಲಿ ಜೀವ ಕಳೆಯಿದೆ. ಆದ್ದರಿಂದ ಹೇಗಾದರೂ ಅದು ಪತ್ತೆಯಾಗುತ್ತದೆ ಎಂದು ಜ್ಯೋತಿಷಿ ಗೋಪಾಲಕೃಷ್ಣ ಹೇಳಿದ್ದಾರೆ.
ಶೈವ-ವೈಷ್ಣವ ವಿವಾದದಲ್ಲಿ ದೈವ ಸಾನಿಧ್ಯ ನಾಶ
ಈ ಸ್ಥಳದಲ್ಲಿದ್ದ ದೈವ ಸಾನಿಧ್ಯ ವ್ಯಾಜ್ಯದಲ್ಲಿ ನಾಶವಾಗಿರಬಹುದು. ಬಹುಶಃ ಶೈವ - ವೈಷ್ಣವ ವಿವಾದದಲ್ಲಿ ಇಲ್ಲಿನ ಹಿಂದಿನ ದೈವ ಸಾನಿಧ್ಯ ನಾಶವಾಗಿದೆ. ಈ ಸಂದರ್ಭದಲ್ಲಿ ಮರಣವೊಂದು ಘಟಿಸಿದೆ. ಆ ಬಳಿಕ ಹಿಂದೆ ಅಲ್ಲಿದ್ದವರು ಈ ದೈವ ಸಾನಿಧ್ಯವನ್ನು ಬೇರೆಲ್ಲಿಯೋ ಆರಾಧನೆ ಮಾಡುತ್ತಿದ್ದಾರೆ. ಅದರ ಫಲವಾಗಿ ಈಗಲೂ ಆ ಮಸೀದಿಯ ಸ್ಥಳದಲ್ಲಿರುವ ದೈವಸಾನಿಧ್ಯಕ್ಕೆ ಚೈತನ್ಯ ಶಕ್ತಿ ಇದೆ. ಆದ್ದರಿಂದಲೇ ಈಗ ಅದು ಗೋಚರವಾಗಿದೆ ಎಂದು ಜ್ಯೋತಿಷಿ ತಿಳಿಸಿದ್ದಾರೆ.
ಊರಿಗೆ ಗಂಡಾಂತರ
ಮಸೀದಿಯ ಸ್ಥಳದಲ್ಲಿರುವ ದೈವಸಾನಿಧ್ಯಕ್ಕೆ ಚೈತನ್ಯ ಶಕ್ತಿ ಇದೆ. ಆದ್ದರಿಂದಲೇ ಈಗ ಅದು ಗೋಚರವಾಗಿದೆ. ಆದರೆ ಎಲ್ಲರೂ ಒಗ್ಗಟ್ಟಾಗಿ ಸಮ್ಮತದಿಂದ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಇಡೀ ಊರಿಗೆ ಗಂಡಾಂತರ ಉಂಟಾಗುತ್ತದೆ. ಈ ದೈವ ಸಾನಿಧ್ಯ ಅಭಿವೃದ್ಧಿ ಹೊಂದಿದರೆ ಈಗ ಅಲ್ಲಿ ಇದ್ದವರಿಗೂ ಉತ್ತಮ. ಆದ್ದರಿಂದ ಎಲ್ಲರೂ ಒಟ್ಟಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದರು.
ತಾಂಬೂಲ ಪ್ರಶ್ನೆ ಎಂದರೆ
ತಾಂಬೂಲ ಪ್ರಶ್ನೆ ಇಡುವ ತಂಡ ಮೊದಲಿಗೆ ಪ್ರಖ್ಯಾತ ಜ್ಯೋತಿಷ್ಯರನ್ನು ಹುಡುಕಬೇಕು. ಮಳಲಿ ಮಸೀದಿ ವಿವಾದ ಸಂಬಂಧ ವಿಶ್ವಹಿಂದೂ ಪರಿಷತ್ ಕೇರಳದ ಪೊದುವಾಳ್ ಮೂಲಕ ತಾಂಬೂಲ ಪ್ರಶ್ನೆ ನಡೆಯಲಿದೆ. ಅದರಂತೆ ತಾಂಬೂಲ ಪ್ರಶ್ನೆ ಇಡುವವರು ವೀಳ್ಯದೆಳೆಗಳನ್ನ ತೆಗೆದುಕೊಂಡು ಹೋಗಿ ಜ್ಯೋತಿಷ್ಯರಿಗೆ ನೀಡಬೇಕು. ಆ ವೀಳ್ಯದೆಳೆಗಳ ಲೆಕ್ಕಾಚಾರದ ಆಧಾರದಲ್ಲಿ ಅವರು ಮೊದಲಿಗೆ ಶುಭ ಮತ್ತು ಅಶುಭ ಫಲಗಳನ್ನು ಸ್ಥಳದಲ್ಲೇ ನಿರ್ಧರಿಸುತ್ತಾರೆ. ಅದರಂತೆ ತಾಂಬೂಲ ಪ್ರಶ್ನೆ ಇಡಬೇಕಾದ ಜಾಗಕ್ಕೆ ಬಂದು ಒಂದು ದಿನದ ತಾಂಬೂಲ ಪ್ರಶ್ನೆ ಇಡಲಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ತಾಂಬೂಲ ಪ್ರಶ್ನೆ ಇಡಲಾಗುತ್ತದೆ.
ಓರ್ವ ಪ್ರಮುಖ ಜೋಯಿಷರು ಸೇರಿ ಇಬ್ಬರು ಅಥವಾ ಹೆಚ್ಚು ಸಹಾಯಕ ಜ್ಯೋತಿಷ್ಯರು ಇರುತ್ತಾರೆ. ಪ್ರಶ್ನೆ ಇಡೋರು ಕೊಟ್ಟ ವೀಳ್ಯದೆಲೆಗಳ ಲೆಕ್ಕಾಚಾರದಲ್ಲಿ ಗ್ರಹಗತಿಗಳು ತಿಳಿಯುತ್ತದೆ. ಆ ಶಾಸ್ತ್ರದ ಪ್ರಕಾರ ಯಾವ ಗ್ರಹ ಎಲ್ಲಿದೆ ಅನ್ನೋದರ ಮೇಲೆ ಒಂದು ಗ್ರಹಗತಿ ಗೊತ್ತಾಗುತ್ತದೆ. ವೀಳ್ಯದೆಲೆ ಸಂಖ್ಯೆಯ ಆಧಾರದಲ್ಲಿ ಶುಕ್ರ ಗ್ರಹದ ಬಗ್ಗೆ ಬಂದರೆ ಆ ಜಾಗದಲ್ಲಿ ದೇವಿ ಸಾನಿಧ್ಯ, ರವಿಯ ಬಗ್ಗೆ ಬಂದರೆ ಶಿವನ ಸಾನಿಧ್ಯ ಅಂತ ಹೇಳಲಾಗುತ್ತದೆ. ಆ ಬಳಿಕ ಹೆಚ್ಚಿನ ಪ್ರಶ್ನಾ ಚಿಂತನೆ ನಡೆಸಿ ಯಾವ ದಿಕ್ಕಿನಲ್ಲಿ ದೈವ ಸಾನಿಧ್ಯವಿದೆ ಅಂತ ನಿಖರವಾಗಿ ಹೇಳುವುದೇ ತಾಂಬೂಲ ಪ್ರಶ್ನೆ.
ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾದೊಳಗೆ ನವೀಕರಣ ಕಾಮಗಾರಿ ವೇಳೆ ಹಿಂದೂ ಶೈಲಿಯ ಕೆತ್ತನೆ ಪತ್ತೆಯಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಂಗಳೂರು ತಹಸೀಲ್ದಾರ್ ರವರ ಮೂಲಕ ದರ್ಗಾ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿತ್ತು. ಆ ಬಳಿಕ ಕೋರ್ಟ್ ನಿಂದಲೂ ದರ್ಗಾ ನವೀಕರಣ ಕಾಮಗಾರಿಗೆ ತಡೆಯಾಜ್ಞೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಗಲೂ ದರ್ಗಾದ ಕಾಮಗಾರಿ ಸ್ಥಗಿತಗೊಂಡಿದ್ದು, ದರ್ಗಾ ಇರುವ ಪ್ರದೇಶದ ಮೂಲ ಭೂ ದಾಖಲೆಗಳನ್ನು ಪರಿಶೀಲನೆ ನಡೆಸುವ ಕಾರ್ಯ ನಡೆಯುತ್ತಿದೆ.