ಅಸ್ತಿತ್ವಕ್ಕೆ ಬಂದ ಹಿಂದೂ ಟಾಸ್ಕ್ ಫೋರ್ಸ್, ಹಿಂದೂ ಲಾ ಬೋರ್ಡಿಗೆ ಒತ್ತಾಯ
ಮಂಗಳೂರು, ಜೂನ್ 28: ರಾಜ್ಯದ ಕಡಲತಡಿಯಲ್ಲಿ ಸದ್ದಿಲ್ಲದೇ 'ಹಿಂದೂ ಟಾಸ್ಕ್ ಫೋರ್ಸ್' ಸಿದ್ದಗೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮೊದಲು ಕರಾವಳಿಯ ಫೈರ್ ಬ್ರಾಂಡ್ ಸ್ವಾಮೀಜಿ ಎಂದೇ ಗುರುತಿಸಿಕೊಂಡಿರುವ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಈ ಟಾಸ್ಕ್ ಫೋರ್ಸ್ ರಚನೆಗೆ ಚಾಲನೆ ನೀಡಲಾಗಿತ್ತು. ಹಿಂದೂ ಯುವತಿಯರ ರಕ್ಷಣೆ, ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಟಾಸ್ಕ್ ಫೋರ್ಸ್ ಗೆ ಚಾಲನೆ ನೀಡಲಾಗಿತ್ತು.
ಆದರೆ ಚುನಾವಣೆ ಹಿನ್ನೆಲೆಯಲ್ಲಿ ತಣ್ಣಗಾಗಿದ್ದ ಟಾಸ್ಕ್ ಫೋರ್ಸ್ ರಚನೆ ಪ್ರಕ್ರಿಯೆ ಈಗ ಚುರುಕಾಗಿದ್ದು ಅಂತಿಮ ಹಂತಕ್ಕೆ ಬಂದು ನಿಂತಿದೆ.
ಜಿಲ್ಲೆಯಲ್ಲಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ ಎನ್ನಲಾದ ಲವ್ ಜಿಹಾದ್ ಪ್ರಕರಣಗಳನ್ನು ತಡೆಯಲು ಹಿಂದೂ ಟಾಸ್ಕ್ ಫೋರ್ಸ್ ನ್ನು ಹಿಂದೂ ಸಂಘಟನೆಗಳು ರಚಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಹಿಂದೂ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಆರಂಭಿಸಲಿದೆ.
ದಕ್ಷಿಣ ಕನ್ನಡ ಮೊದಲ ಟಾರ್ಗೆಟ್
ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತ ವಾಗುವಂತೆ ಮೊದಲು ಈ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಆರಂಭವಾದರೂ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಇದನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ. ದೇಶದಾದ್ಯಂತ ಟಾಸ್ಕ್ ಫೋರ್ಸ್ ವಿಸ್ತರಿಸುವ ಚಿಂತನೆ ಕೂಡ ಮಾಡಲಾಗುತ್ತಿದೆ.
ಲವ್ ಜಿಹಾದ್ ಪ್ರಕರಣ ಗಳನ್ನು ಬೆಳಕಿಗೆ ಬರುವ ಮೊದಲೇ ಪತ್ತೆ ಹಚ್ಚಿ ಪ್ರಕರಣ ಬಗೆಹರಿಸುವುದು ಈ ಟಾಸ್ಕ್ ಫೋರ್ಸ್ ನ ಮೂಲ ಉದ್ದೇಶ ಹಾಗು ಜವಾಬ್ದಾರಿಯಾಗಿರುತ್ತದೆ ಎಂದು ಹೇಳಲಾಗಿದೆ.
ಹಲವಾರು ಹಿಂದೂಪರ ಸಂಘಟನೆಗಳ ಜೊತೆ ಚರ್ಚೆ
ಈ ಕುರಿತು ಮಾಹಿತಿ ನೀಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, "ಈ ಟಾಸ್ಕ್ ಪೋರ್ಸ್ ರಚನೆ ಕುರಿತು ಈಗಾಗಲೇ ಹಲವಾರು ಹಿಂದೂ ಪರ ಸಂಘಟನೆಗಳೊಂದಿಗೆ ಹಲವು ಸುತ್ತಿನ ಬೈಠಕ್ ನಡೆಸಲಾಗಿದ್ದು, ಅತೀ ಶೀಘ್ರದಲ್ಲೇ ಈ ಹಿಂದೂ ಟಾಸ್ಕ್ ಫೋರ್ಸ್ ಕಾರ್ಯಾಚರಣೆಗೆ ಇಳಿಯಲಿದೆ," ಎಂದು ತಿಳಿಸಿದ್ದಾರೆ.
ಈ ಹಿಂದೂ ಟಾಸ್ಕ್ ಫೋರ್ಸ್ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ಹರಿಬಿಡಲಾಗಿದೆ. ಈ ಟಾಸ್ಕ್ ಫೋರ್ಸ್ ಗಾಗಿ ಪ್ರತ್ಯೇಕ ವೆಬ್ ಸೈಟ್ ಕೂಡ ಆರಂಭಿಸಲಾಗಿದೆ. ಹಿಂದುತ್ವದ ಅವಹೇಳದ ವಿರುದ್ಧವೂ ಈ ಟಾಸ್ಕ್ ಫೋರ್ಸ್ ಹೋರಾಟ ನಡೆಸಲಿದೆ. ಧರ್ಮ ಜಾಗೃತಿ ಕಾರ್ಯದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂಈ ಟಾಸ್ಕ್ ಫೋರ್ಸ್ ಮಾಡಲಿದೆ.
ಟಾಸ್ಕ್ ಫೋರ್ಸ್ ನಲ್ಲಿ ತಜ್ಞರು
ಈ ಟಾಸ್ಕ್ ಪೋರ್ಸ್ ನಲ್ಲಿ ವೈದ್ಯರು, ಮನೋಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು ಇರಲಿದ್ದಾರೆ. ಮಹಿಳೆಯರು ಸೇರಿದಂತೆ ಯುವಕ, ಯುವತಿಯರು ಇಲ್ಲಿ ಇರಲಿದ್ದಾರೆ.
ಲವ್ ಜಿಹಾದ್ ಪ್ರಕರಣಗಳಲ್ಲಿ ಸಿಲುಕಿದ ಯುವತಿಯರ ಮನ ಪರಿವರ್ತನೆ ಮಾಡುವುದು ಈ ಟಾಸ್ಕ್ ಫೋರ್ಸ್ ನ ಮೂಲ ಉದ್ದೇಶವಾಗಿರುತ್ತದೆ ಎಂದು ಹೇಳಲಾಗಿದೆ. ಲವ್ ಜಿಹಾದ್ ಬಗ್ಗೆ ಹಿಂದೂ ಯುವತಿಯರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿ ಕೊಳ್ಳಲು ತೀರ್ಮಾನಿಸಲಾಗಿದೆ.
ಹಿಂದೂ ಪರ್ಸನಲ್ ಲಾ ಬೋರ್ಡ್
ಈ ನಡುವೆ ಪ್ರತ್ಯೇಕ 'ಹಿಂದೂ ಪರ್ಸನಲ್ ಲಾ ಬೋರ್ಡ್' ರಚನೆ ಹಿಂದೂ ಟಾಸ್ಕ್ ಫೋರ್ಸ್ ಒತ್ತಾಯಿಸಿದೆ. ಇತ್ತೇಚಿನ ದಿಗಳಲ್ಲಿ ಹಿಂದೂ ಧರ್ಮನನ್ನು ಅವಹೇಳನ ಮಾಡುವ ಪ್ರಕರಣಗಳು ಹೆಚ್ಚಾಗಿದ್ದು ಅದರ ವಿರುದ್ಧ ಕಠಿಣ ಕ್ರಮ ಜರುಗಿಸುವ ದೃಷ್ಠಿಯಿಂದ ಪ್ರತ್ಯೇಕ ಹಿಂದೂ ಲಾ ಬೋರ್ಡ್ ಅಗತ್ಯವಿದೆ ಎಂದು ಟಾಸ್ಕ್ ಫೋರ್ಸ್ ಪ್ರತಿಪಾದಿಸಿದೆ.
ಈ ಹಿನ್ನೆಲೆಯಲ್ಲಿ ಹಿಂದೂ ಪರ್ಸನಲ್ ಲಾ ಬೋರ್ಡ್ ಸಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರದ ಗೃಹ ಸಚಿವರಿಗೆ, ಕೇಂದ್ರ ಕಾನೂನು ಮಂತ್ರಾಲಯಕ್ಕೆ ಟಾಸ್ಕ್ ಫೋರ್ಸ್ ವತಿಯಿಂದ ಪತ್ರ ಕೂಡ ಬರೆಯಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ?
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ , ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ವಜ್ರದೇಹಿ ಮಠಕ್ಕೆ ಭೇಟಿ ನೀಡಿ ಟಾಸ್ಕ್ ಫೋರ್ಸ್ ರಚನೆ, ಉದ್ದೇಶದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹಿಂದೂ ಟಾಸ್ಕ್ ಫೋರ್ಸ್ ಹಾಗೂ ಪ್ರತ್ಯೇಕ ಹಿಂದೂ ಪರ್ಸನಲ್ ಲಾ ಬೋರ್ಡ ಕುರಿತು ರಾಷ್ಟ್ರೀಯ ಪಟ್ಟದಲ್ಲಿ ಭಾರೀ ಚರ್ಚೆ ಆರಂಭವಾಗುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.