ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯದ್ದೇ ಹತ್ಯೆಯಾಗಿದೆ ಇನ್ನು ನೀವು ಯಾವ ಲೆಕ್ಕ?
ಮಂಗಳೂರು, ಸೆಪ್ಟೆಂಬರ್ 18: ಮೈಸೂರು ಜಿಲ್ಲೆ ನಂಜನಗೂಡಿನ ಹುಚ್ಚುಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಹಿಂದೂ ಮಹಾಸಭಾದ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, "ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡೋಕೆ ಆಗುತ್ತೆ, ಇನ್ನು ನಿಮ್ಮ ಬಗ್ಗೆ ಆಲೋಚನೆ ಮಾಡುವುದಕ್ಕೆ ಸಾಧ್ಯ ಇಲ್ವಾ," ಅಂತಾ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗವಾಗಿ ಬೆದರಿಕೆಯನ್ನು ಹಾಕಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, "ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಮತ ಓಲೈಕೆಗೆ ಮುಂದಾಗಿದೆ. ದೇವಾಲಯದ ಧ್ವಂಸದ ಮೂಲಕ ಅಲ್ಪಸಂಖ್ಯಾತ ಮತಗಳಿಕೆಗೆ ಬಿಜೆಪಿ ಸರ್ಕಾರ ಮುಂದಾಗಿದೆ. ಹಿಂದೂಗಳ ಮೇಲೆ ದಾಳಿಯಾದಾಗ ಅಖಿಲ ಭಾರತೀಯ ಹಿಂದೂ ಮಹಾಸಭಾ ಸುಮ್ಮನೆ ಕೂರುವುದಿಲ್ಲ. ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಬಿಟ್ಟಿಲ್ಲ. ಹಿಂದೂಗಳ ಮೇಲೆ ದಬ್ಬಾಳಿಕೆಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡುವುದಕ್ಕೆ ಆಗುತ್ತೆ, ಇನ್ನು ನಿಮ್ಮ ಬಗ್ಗೆ ಆಲೋಚನೆ ಮಾಡುವುದಕ್ಕೆ ಸಾಧ್ಯವಿಲ್ಲವಾ?," ಎಂದು ಧರ್ಮೇಂದ್ರ ಬಹಿರಂಗ ಬೆದರಿಕೆ ಹಾಕಿದ್ದಾರೆ.
"ಸುಪ್ರೀಂ ಕೋರ್ಟ್ ಆದೇಶ ಎಂದು ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿಯಾಗುತ್ತಿದೆ. ರಾಜ್ಯ ಸರ್ಕಾರ ಕೇವಲ ಹಿಂದೂ ದೇಗುಲಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ. ರಾಜ್ಯದಲ್ಲಿ ಈವರೆಗೆ ಅನಧಿಕೃತ ಪ್ರಾರ್ಥನಾ ಮಂದಿರದ ಹೆಸರಲ್ಲಿ ಒಂದೇ ಒಂದು ಮಸೀದಿ, ಚರ್ಚ್ಗಳನ್ನು ಧ್ವಂಸ ಮಾಡಲಾಗಿದ್ಯಾ?," ಎಂದು ಧರ್ಮೇಂದ್ರ ಕಿಡಿಕಾರಿದ್ದಾರೆ.
"ರಾಜ್ಯ ಸರ್ಕಾರದ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗ ಇವರೇ ಪ್ರತಿಭಟನೆ ಮಾಡುತ್ತಾರೆ. ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡುವುದು ಬಿಟ್ಟು ಬಿಜೆಪಿಯನ್ನು ಬಹಿಷ್ಕಾರ ಮಾಡಲಿ," ಎಂದು ಧರ್ಮೇಂದ್ರ ಸವಾಲೆಸಿದಿದ್ದಾರೆ.
"ರಾಜ್ಯ ಬಿಜೆಪಿ ಸರ್ಕಾರದ ನಾಯಕರು ದೇಗುಲ ಧ್ವಂಸ ಮಾಡಿರುವುದು ಸಣ್ಣ ತಪ್ಪು ಅಂತಾ ಹೇಳುತ್ತಾರೆ. ದೇಗುಲ ಧ್ವಂಸ ಮಾಡಿರುವುದು ಸಣ್ಣ ತಪ್ಪಾ? ಹಾಗಾದರೆ ದೊಡ್ಡ ತಪ್ಪು ಯಾವುದು? ದೇವಸ್ಥಾನವನ್ನು ಮರು ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಯಾರ ಹಣದಲ್ಲಿ ದೇಗುಲ ನಿರ್ಮಾಣ ಮಾಡುತ್ತೀರಿ? ಜನರ ತೆರಿಗೆ ಹಣದಲ್ಲಿ ದೇವಸ್ಥಾನ ಮರುನಿರ್ಮಾಣ ಮಾಡುತ್ತೀರಾ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಗುಲ ಧ್ವಂಸ ಮಾಡಿರುವುದು ಒಂದು ಕೊಲೆಗೆ ಸಮಾನ. ಆಗಮ ಶಾಸ್ತ್ರದ ಪ್ರಕಾರ ದೇವಸ್ಥಾನವನ್ನು ಮರು ನಿರ್ಮಾಣ ಮಾಡಬೇಕು," ಅಂತಾ ಆಗ್ರಹಿಸಿದ್ದಾರೆ.
ಧರ್ಮೇಂದ್ರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗೆ ಬಹಿರಂಗ ಕೊಲೆ ಬೆದರಿಕೆ ಹಾಕಿದ ಹಿಂದೂ ಮಹಾಸಭಾದ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಗಳೂ ಕೇಳಿ ಬಂದಿದೆ.