ವ್ಯಾಲೆಂಟೈನ್ಸ್ ಡೇ ಬದಲು ಮಾತೃ-ಪಿತೃ ಪೂಜನೀಯ ದಿನ ಆಚರಿಸಲು ಕರೆ
ಮಂಗಳೂರು, ಫೆಬ್ರವರಿ 13: ನಾಳೆ ಫೆಬ್ರವರಿ 14. ವ್ಯಾಲೆಂಟೈನ್ಸ್ ಡೇ; ಪ್ರೇಮಿಗಳ ಹಬ್ಬ. ವ್ಯಾಲೆಂಟೈನ್ಸ್ ಡೇಗಾಗಿ ಯುವ ಮನಸ್ಸುಗಳು ಮಿಡಿಯಲಾರಂಭಿಸಿವೆ. ಹಿಂದೂ ಪರ ಸಂಘಟನೆಗಳ ವಿರೋಧದ ನಡುವೆಯೂ ಪ್ರೇಮ ನಿವೇದನೆಗಾಗಿ ಕಾತರದಿಂದ ಕಾಯುತ್ತಿವೆ.
ಆದರೆ, ಹಿಂದೂ ಜನ ಜಾಗೃತಿ ಸಮಿತಿಯು ವ್ಯಾಲೆಂಟೈನ್ಸ್ ಡೇಯನ್ನು 'ಮಾತೃ-ಪಿತೃ ಪೂಜನೀಯ ದಿನ'ವಾಗಿ ಆಚರಿಸಲು ಕರೆ ನೀಡಿದೆ.
ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ನಡೆಯುವ ಅನೈತಿಕ ಕೃತ್ಯಗಳನ್ನು ತಡೆಯಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಮಾತೃ-ಪಿತೃ ಪೂಜನೀಯ ದಿನವಾಗಿ ಆಚರಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡಿದೆ.
ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವೀಕಾಂತೇ ಗೌಡ ಹಾಗೂ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ಹಿಂದೂ ಜನ ಜಾಗೃತಿ ಸಮಿತಿಯ ಮುಖಂಡರು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪಾಶ್ಚಾತ್ಯರ ಸಂಸ್ಕೃತಿಯ ಭಾಗವಾಗಿರುವ ವ್ಯಾಲೆಂಟೈನ್ಸ್ ಡೇ ಆಚರಣೆ ಪೀಡನೆ, ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿರುವ ಹಿಂದೂ ಜನಜಾಗೃತಿ ಸಮಿತಿ, ಪಾರ್ಟಿ ಹೆಸರಿನಲ್ಲಿ ಮಾದಕ ದ್ರವ್ಯ ವ್ಯಸನಗಳು ಯುವಜನಾಂಗದಲ್ಲಿ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಿಂದೂ ಜನಜಾಗೃತಿ ಸಮಿತಿ ಮನವಿಯಲ್ಲಿ ವಿನಂತಿಸಿದೆ.