ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಸಂದರ್ಶನ
ಮಂಗಳೂರು, ಸೆಪ್ಟೆಂಬರ್ 07: ಮಂಗಳೂರಿನಲ್ಲಿ ಅಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಾ 'ದೇಶದ್ರೋಹಿಗಳ ಮಹಾತಾಯಿ ಗೌರಿ ಲಂಕೇಶ್' ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಚೈತ್ರಾ ಕುಂದಾಪುರ ಈಗ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ತಿಳಿಸಿದ್ದಾರೆ .
ಕರಾವಳಿಯ ಫೈರ್ ಬ್ರಾಂಡ್ ಹಿಂದೂ ನಾಯಕಿ ಎಂದೇ ಗುರುತಿಸಲಾಗುವ ಚೈತ್ರಾ ಕುಂದಾಪುರ ಸೆಪ್ಟೆಂಬರ್ 4ರಂದು ಮಂಗಳೂರಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ದೇಶದ್ರೋಹಿಗಳ ಮಹಾತಾಯಿ ಎಂದು ಹೇಳಿಕೆ ನೀಡಿದ್ದರು.
ದೇಶ ದ್ರೋಹಿಗಳ ಮಹಾತಾಯಿ ಗೌರಿ ಲಂಕೇಶ್: ಚೈತ್ರಾ ಕುಂದಾಪುರ ವಿವಾದಾತ್ಮಕ ಹೇಳಿಕೆ
ಈ ಕುರಿತು ಚೈತ್ರಾ ವಿರುದ್ಧ ಗೌರಿ ಲಂಕೇಶ್ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕೂಡ ಚೈತ್ರಾ ಕುಂದಾಪುರ ಅವರ ಈ ಹೇಳಿಕೆ ಕುರಿತು ಭಾರೀ ಚರ್ಚೆ ಕೂಡ ನಡೆದಿತ್ತು. ತಮ್ಮ ಹೇಳಿಕೆ ಕುರಿತು ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಚೈತ್ರಾ ಕುಂದಾಪುರ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಆ ಹೇಳಿಕೆಯನ್ನು ತಾರ್ಕಿಕ ಅರ್ಥದಲ್ಲಿ ಹೇಳಿದ್ದಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಗೌರಿ ಅವರ ಚಾರಿತ್ರ್ಯದ ಬಗ್ಗೆ ಹೇಳಿದ್ದಲ್ಲ
ಗೌರಿ ಲಂಕೇಶ್ ಅವರು ಈ ಹಿಂದೆ ಹಿಂದೂ ಧರ್ಮಕ್ಕೆ ಅಪ್ಪ- ಅಮ್ಮ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆವತ್ತು ಅದನ್ನು ಅವರು ತಾರ್ಕಿಕ ಅರ್ಥದಲ್ಲಿ ಹೇಳಿರುವುದಲ್ಲ. ಅದೇ ರೀತಿ ನಾನು ಕೂಡ 'ದೇಶ ದ್ರೋಹಿಗಳ ಮಹಾತಾಯಿ' ಎಂದು ಗೌರಿ ಅವರ ಅಂದಿನ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆ. ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ನನ್ನ ಮಕ್ಕಳು ಎಂದು ಗೌರಿ ಲಂಕೇಶ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು ಮತ್ತು ಹೇಳಿಕೆ ಕೂಡ ನೀಡಿದ್ದರು. ಆ ಸಂದರ್ಭದಲ್ಲಿ ಅವರ ಹೇಳಿಕೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಅದೇ ರೀತಿ ಹಿಂದೂಗಳ ತಾಯಿ ಗೋವು ಆದರೆ ತಂದೆ ಯಾರು ಹೋರೀನಾ ಎಂದು ಪ್ರಶ್ನಿಸಿದ್ದರು. ಅವರು ಹೇಳಿದ್ದಂತೆ ನಾನು ಕೂಡ ಹೇಳಿದ್ದೇನೆ ಅಷ್ಟೆ. ನಾನೊಬ್ಬಳು ಯುವತಿಯಾಗಿ ಗೌರಿ ಅವರ ಚಾರಿತ್ರ್ಯದ ಬಗ್ಗೆ ಹೇಳಿದ್ದಲ್ಲ ಎಂದಿದ್ದಾರೆ.
ಇಂಥವರನ್ನು ಬೆಂಬಲಿಸುವವರು ಕೂಡ ದೇಶದ್ರೋಹಿಗಳು
ದೆಹಲಿಯ ಜೆಎನ್ ಯುದಲ್ಲಿ ದೇಶದ ಜನರ ತೆರಿಗೆ ಹಣದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದರೂ ಕೆಲವರು ಅದನ್ನು ದುರುಪಯೋಗ ಪಡಿಸಿಕೊಂಡು, ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಇದೇ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುತ್ತಾರೆ. ಬಂದೂಕಿನ ಬಲದ ಮೇಲೆ ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇವೆ, ಭಾರತವನ್ನು ವಿಭಜಿಸುತ್ತೇವೆ ಎಂದು ಘೋಷಣೆ ಕೂಗುತ್ತಾರೆ. ಇಂಥವರನ್ನು ದೇಶ ದ್ರೋಹಿಗಳೆಂದು ಕರೆಯಲೇಬೇಕು ಹಾಗೂ ಇವರನ್ನು ಬೆಂಬಲಿಸುವವರು ಕೂಡ ದೇಶ ದ್ರೋಹಿಗಳೇ ಎಂದು ಚೈತ್ರಾ ಅಭಿಪ್ರಾಯ ಪಡುತ್ತಾರೆ.
ತಾತ್ವಿಕ ಅರ್ಥದಲ್ಲಿ ಕೆಲವರು ಬದಲಿಸಿದ್ದಾರೆ
ನಾನು ಹೇಳಿಕೆ ನೀಡಿರುವಂತೆ, ಗೌರಿ ಲಂಕೇಶ್ ದೇಶದ್ರೋಹಿಗಳ ಮಹಾತಾಯಿ ಎಂದು ನನ್ನ ವಿರುದ್ಧ ಮಾತನಾಡುವವರು ಒಪ್ಪುವುದೇ ಆದಲ್ಲಿ, ನಾನು ಗೌರಿ, ನಾನು ಗೌರಿ ಎಂದು ಹೇಳಿಕೊಳ್ಳುತ್ತಿರುವವರು ಕೂಡ ದೇಶದ್ರೋಹಿಗಳ ಮಹಾತಾಯಿ ಆದಂತೆ ಅಲ್ಲವೇ? ಹಾಗಾದರೆ ತಂದೆಯ ಸ್ಥಾನವನ್ನು ಯಾರು ತುಂಬುತ್ತೀರಿ ಎನ್ನುವ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದೇ ಹೊರತು ತಾರ್ಕಿಕ ಅರ್ಥದಲ್ಲಿ ಅಲ್ಲ. ಈ ಕುರಿತು ನಾನು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ವಿವರಿಸಿದ್ದೆ. ನಾನು ತಾರ್ಕಿಕ ಅರ್ಥದಲ್ಲಿ ಹೇಳಿರುವುದನ್ನು ತಾತ್ವಿಕ ಅರ್ಥದಲ್ಲಿ ಕೆಲವರು ಬದಲಾಯಿಸಿದ್ದಾರೆ ಎಂದು ಚೈತ್ರಾ ಸಮರ್ಥನೆ ನೀಡಿದ್ದಾರೆ.
ಅನಂತಮೂರ್ತಿ ಅಂತ್ಯಕ್ರಿಯೆ ವೈದಿಕ ಶಾಸ್ತ್ರ ಪದ್ಧತಿಯಲ್ಲಿ ನಡೆದಿತ್ತು
ದೇಶದ ವಿರುದ್ಧ, ದೇಶದ ಕಾನೂನಿನ ವಿರುದ್ಧ ಯಾರೆಲ್ಲ ಮಾತನಾಡುವವರು, ದೇಶದ ಶ್ರೀಮಂತ ಪರಂಪರೆಯ ಮೇಲೆ ನಂಬಿಕೆ ಇಲ್ಲದವರೆಲ್ಲ ದೇಶ ದ್ರೋಹಿಗಳು. ಈ ಹಿಂದೆ ಗೌರಿ ಲಂಕೇಶ್ ಹಿಂದೂ ಧರ್ಮಕ್ಕೆ ಅಪ್ಪ- ಅಮ್ಮ ಇಲ್ಲ ಅಂತ ಹೇಳಿಕೆ ನೀಡಿದ್ದರು. ಆದರೆ ಪಾಪ ಅವರು ಸತ್ತ ನಂತರ ಅವರ ಸಮಾಧಿಯ ಮೇಲೆ ಶಿವಲಿಂಗದ ಚಿತ್ರವನ್ನು ಬಿಡಿಸಲಾಗಿದೆ. ಅನಂತ ಮೂರ್ತಿ ಅವರ ಜೀವನ ಪರ್ಯಂತ ಹಿಂದೂ ಧರ್ಮವೇ ಇಲ್ಲ, ವೈದಿಕ ಶಾಸ್ತ್ರ ಪದ್ಧತಿಯೇ ಇಲ್ಲ ಎಂದು ಹೇಳುತ್ತಿದ್ದರು. ಆದರೆ ಅವರ ಸಾವಿನ ನಂತರ ಕ್ರಿಯಾ ಕರ್ಮಗಳನ್ನು ವೈದಿಕ ಪದ್ಧತಿಯಂತೆ ನೆರವೇರಿಸಲಾಯಿತು. ಸುಖಾಸುಮ್ಮನೆ ನಮ್ಮ ಸಂಸ್ಕೃತಿ, ಪರಂಪರೆಯ ಮೇಲೆ ಆಕ್ರಮಣ ಮಾಡುವವರು ನಿಜವಾಗಿಯೂ ದೇಶ ದ್ರೋಹಿಗಳು ಎಂದು ಅವರು ಕಿಡಿಕಾರಿದರು.
ನಕ್ಸಲರನ್ನು ಬೆಂಬಲಿಸುವವರು ದೇಶದ್ರೋಹಿಗಳು
ತ್ರಿವರ್ಣ ಧ್ವಜವನ್ನು ಗೌರವಿಸದ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂತ ಎಂದು ಒಪ್ಪಿಕೊಳ್ಳದವರು, ನಕ್ಸಲರನ್ನು ಬೆಂಬಲಿಸುವವರು, ನಾನು ಅರ್ಬನ್ ನಕ್ಸಲ್ ಎಂದು ಹೇಳುವವರು, ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ಅವರನ್ನು ಬೆಂಬಲಿಸುವವರೆಲ್ಲ ದೇಶ ದ್ರೋಹಿಗಳೇ. ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತೇನೆ ಎಂದು ಹೇಳಿಕೊಂಡೇ ಬಂದರು ಗೌರಿ ಲಂಕೇಶ್. ಕೆಲವರನ್ನು ಕರೆತಂದರು. ಇದರ ಅರ್ಥ ಅವರಿಗೆ ನಕ್ಸಲರ ಸಂಪರ್ಕ ಇತ್ತು ಎಂಬುದು ಸ್ಪಷ್ಟ. ಹಾಗಾಗಿ ಗೌರಿ ಲಂಕೇಶ್ ಕೂಡ ದೇಶ ದ್ರೋಹಿ ಅಲ್ಲವೇ? ದೇಶದ ವಿರುದ್ಧ, ಕಾನೂನಿನ ವಿರುದ್ಧ ಹೋಗುವವರನ್ನು ಬೆಂಬಲಿಸುವವರು ದೇಶದ್ರೋಹಿಗಳೇ. ಅವರನ್ನು ದೇಶದ್ರೋಹಿಗಳೆಂದರೆ ತಪ್ಪೇನು? ಎಂದು ಪ್ರಶ್ನೆ ಮುಂದಿಟ್ಟರು.
ಅಮಿನ್ ಮಟ್ಟು ನೀಡಿದ ಹೇಳಿಕೆ ವಿರುದ್ಧ ಕ್ರಮ ಕೈಗೊಂಡಿಲ್ಲ
ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು. ಮೊದಲು ಇವರ ಬ್ಯಾಂಕ್ ಖಾತೆಗಳ ಬಗ್ಗೆ ನಿಗಾ ಇಡಬೇಕು. ಇಂತಹ ಹೋರಾಟಗಳಿಗೆ ಎಲ್ಲಿಂದ ಹಣ ಹರಿದು ಬರುತ್ತದೆ ಎಂಬುದು ಬಹಳ ಪ್ರಮುಖ. ಈ ದೇಶ ದ್ರೋಹಿಗಳು ನೀಡುತ್ತಿರುವ ಹೇಳಿಕೆಗಳ ವಿರುದ್ಧ ಅಧಿಕಾರದಲ್ಲಿರುವ ಸರಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಎಲ್ಲವನ್ನೂ ಮುಚ್ಚಿ ಹಾಕಲಾಗುತ್ತಿದೆ. ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತರ ಬಗ್ಗೆ ದಿನೇಶ್ ಅಮಿನ್ ಮಟ್ಟು ಅವರು ನೀಡಿದ ಹೇಳಿಕೆ ವಿರುದ್ಧ ಯಾರೂ ಕ್ರಮ ಕೈಗೊಂಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಜನರ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರಂತಾದರೆ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಬೇಕು. ಈ ರೀತಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸರಕಾರವು ಪೊಲೀಸ್ ಗನ್ ಮ್ಯಾನ್ ರಕ್ಷಣೆ ನೀಡುತ್ತದೆ ಎಂದು ಚೈತ್ರಾ ವ್ಯಂಗ್ಯವಾಡಿದರು. ನನ್ನ ಹೇಳಿಕೆಗಳ ವಿರುದ್ಧ ಪ್ರಕರಣ ದಾಖಲಾದರೆ ಕಾನೂನಾತ್ಮಕ ಹೋರಾಟ ನಡೆಸುತ್ತೇನೆ. ನನ್ನ ವಿರುದ್ಧ ಪ್ರಕರಣಗಳು ಹೊಸತೇನೂ ಅಲ್ಲ ಎಂದು ಕೂಡ ಅವರು ಹೇಳಿದರು.