ಹಿಜಾಬ್ ವಿವಾದ; ವಿದ್ಯಾರ್ಥಿನಿಯರಿಗೆ ಡಿಸಿ ಕಾನೂನು ಪಾಠ
ಮಂಗಳೂರು, ಮೇ 30: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಹಿಜಾಬ್ ಹೈಡ್ರಾಮ ಮುಂದುವರೆದಿದೆ. ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಅವಕಾಶ ಇಲ್ಲ ಎಂದು ಹೇಳಿದರೂ, ವಿದ್ಯಾರ್ಥಿಗಳು ಅದಕ್ಕೆ ಕ್ಯಾರೆ ಅನ್ನದೆ ಕಾಲೇಜಿಗೆ ಬಂದಿದ್ದಾರೆ.
ನಮಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡಿ ಎಂದು ಮತ್ತೆ ಒತ್ತಾಯ ಮಾಡಿದ್ದಾರೆ. ಪ್ರಾಂಶುಪಾಲೆ ಡಾ. ಅನುಸೂಯಾ ರೈ ಅವಕಾಶ ನೀಡದಿದ್ದಾಗ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ದೌಡಾಯಿಸಿದ್ದಾರೆ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಭೆಯಲ್ಲಿದ್ದ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಸುಮಾರು ಒಂದುಗಂಟೆ ವಿದ್ಯಾರ್ಥಿನಿಯರು ಕಾದಿದ್ದಾರೆ.
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು, ವಾಪಸ್ ಕಳುಹಿಸಿದ ಪ್ರಿನ್ಸಿಪಾಲ್
ಮುಖ್ಯಮಂತ್ರಿ ಭೇಟಿ ಕುರಿತು ಹಲವಾರು ಸಭೆಯಲ್ಲಿ ಬ್ಯುಸಿಯಾಗಿದ್ದ ಡಿಸಿ ಕಚೇರಿಗೆ ಬಂದು ವಿದ್ಯಾರ್ಥಿನಿಯರ ಜೊತೆ ಮಾತುಕತೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿಜಾಬ್ ಕುರಿತಾಗಿ ಒಂದು ಗಂಟೆಗಳ ಕಾಲ ಸಭೆ ನಡೆದಿದೆ. ಕಾಲೇಜಿನ ಪ್ರಾಂಶುಪಾಲೆ ಅನುಸೂಯ ರೈಯನ್ನು ಕರೆಸಿದ ಡಿಸಿ, ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.
ಮಳಲಿ ದರ್ಗಾ ವಿವಾದ; ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ನಿರ್ಧಾರ
ವಿದ್ಯಾರ್ಥಿಗಳು ಹಿಜಾಬ್ ನಮ್ಮ ಹಕ್ಕು ಹಿಜಾಬ್ ಇಲ್ಲದೆ ನಾವು ತರಗತಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಸಭೆಯಲ್ಲಿ ಯಾವುದೇ ಒಮ್ಮತದ ತೀರ್ಮಾನ ಆಗಿಲ್ಲ. ಸಭೆಯಲ್ಲಿ ಮೊನ್ನೆ ನಡೆದ ಸಿಂಡಿಕೇಟ್ ಸಭೆಯ ತೀರ್ಮಾನದ ಕಡತಗಳನ್ನು ವಿದ್ಯಾರ್ಥಿನಿಯರು ಕೇಳಿದ್ದಾರೆ. ಡಿಗ್ರಿ ಕಾಲೇಜಿಗೆ ಯೂನಿಫಾರ್ಮ್ ಇಲ್ವಲ್ಲಾ? ಎಂದು ಕೇಳಿದ ವಿದ್ಯಾರ್ಥಿನಿಯರಿಗೆ ಡಿಸಿ ಖಡಕ್ಕಾಗಿ ಕಾನೂನಿನ ಪಾಠ ಮಾಡಿದರು.
ಕಾಲೇಜಿನಲ್ಲಿ ನಿಯಮ ಉಲ್ಲಂಘನೆ ಮಾಡಬಾರದು
ಸಿಂಡಿಕೇಟ್ ನಿರ್ಧಾರದಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ಕೋರ್ಟ್ ನಿಯಮ ಪಾಲನೆ ಮಾಡಬೇಕು ಎಂದು ಮನವರಿಕೆ ಮಾಡಿಕೊಡಲಾಗಿದೆ. ಕಾಲೇಜು ಒಳಗೆ ಶಾಂತಿ ಭಂಗ ಮಾಡಬಾರದು. ಸಿಂಡಿಕೇಟ್ ನಿರ್ಧಾರ ಜಿಲ್ಲಾ ಮಟ್ಟದಲ್ಲಿ ತೀರ್ಮಾ ಅಸಾಧ್ಯ. ಕಾನೂನು ಮೂಲಕ ಬಗೆಹರಿಸಿ ಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ಕೋರ್ಟ್ ಆದೇಶದ ಬಗ್ಗೆ ಕಾಲೇಜು ತೀರ್ಮಾನಿಸಬೇಕು. ಕ್ಯಾಂಪಸ್ನಲ್ಲಿ ಕಾನೂನು ಕೈಗೆ ತೆಗೆದುಕೊಂಡು, ಕಾಲೇಜಿನಲ್ಲಿ ನಿಯಮ ಉಲ್ಲಂಘನೆ ಮಾಡಬಾರದು. ಕಾಲೇಜಿನಲ್ಲಿ ಕೋರ್ಟ್ ನಿಯಮದ ವಿರುದ್ಧ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು. ಕಾನೂನು ಸುವ್ಯವಸ್ಥೆ ಕೈಗೆ ತೆಗೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಡಿಸಿ ಡಾ. ರಾಜೇಂದ್ರ ಕೆ. ವಿ. ಸೂಚನೆ ಕೊಟ್ಟಿದ್ದಾರೆ.
ಜಿಲ್ಲಾಧಿಕಾರಿ ಅಸಹಾಯಕತೆ ಗೊತ್ತಾಗಿದೆ
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಗೌಸಿಯ ಮಾಧ್ಯಮಗಳ ಜೊತೆಗೆ ಮಾತನಾಡಿ, "ಡಿಸಿಯವರ ಬಳಿ ಹೋಗಿ ಮಾತನಾಡಿದ್ದೇವೆ. ಅವರ ಮಾತಿನಲ್ಲಿ ಅಸಹಾಯಕತೆ ಗೊತ್ತಾಗುತ್ತಿದೆ. ಆದೇಶ ಸಿಂಡಿಕೇಟ್ನಿಂದ ಬಂದಿದೆ. ಜಿಲ್ಲಾಧಿಕಾರಿಯಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾಯಿತು. ದಾಖಲೆ ಇರುವುದರಿಂದ ಕಾನೂನಾತ್ಮಕ ಹೋರಾಟ ಮಾಡಿ ಎಂಬ ಅಭಿಪ್ರಾಯ ನೀಡಿದ್ದಾರೆ. ಕರ್ನಾಟಕದ ಹಿಜಾಬ್ ವಿವಾದಕ್ಕೂ ನಮ್ಮ ಕಾಲೇಜಿನ ಹಿಜಾಬ್ ವಿವಾದಕ್ಕೂ ಸಂಬಂಧ ಇಲ್ಲ. ಎಬಿವಿಪಿ ಒತ್ತಡದಿಂದ ನಮ್ಮ ಸಿಂಡಿಕೇಟ್ ಹಿಜಾಬ್ ನಿಷೇಧದ ಆದೇಶ ಮಾಡಿದೆ. ಈ ಹಿಂದೆ ಹಿಜಾಬ್ ಮುಖ್ಯವೋ ಶಿಕ್ಷಣ ಮುಖ್ಯವೋ ಎಂದು ಪ್ರಶ್ನಿಸುತ್ತಿದ್ದರು. ಆದರೆ ಇವತ್ತು ಎಬಿವಿಪಿಯ ಒತ್ತಡ ಮುಖ್ಯವೋ ನಮ್ಮ ಶಿಕ್ಷಣ ಮುಖ್ಯವೋ ಎಂದು ಪ್ರಶ್ನಿಸುತ್ತೇವೆ" ಎಂದರು.
ಸ್ತ್ರೀಪರವಾಗಿರುವವರಿಗೆ ಬಹಿರಂಗ ಆಹ್ವಾನ
"ನಮ್ಮ ಕಾಲೇಜಿನ ವಿವಾದವನ್ನು ಹೈಕೋರ್ಟ್ ತನಕ ಹೋಗಿ ಮುಗಿಸಬೇಕಾದಿಲ್ಲ. ವಿಶ್ವವಿದ್ಯಾಲಯದ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಬಹುದು. ನಾವು ಶಾಸಕ ಯು. ಟಿ. ಖಾದರ್ರನ್ನು ಭೇಟಿ ಮಾಡಿದ್ದೆವು. ಅವರಿಂದ ಸರಿಯಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ. ಅವರು ಅಡ್ಯಾರ್ಗೆ ಹೋಗಿ ಕ್ರಿಕೆಟ್ ಆಡುತ್ತಿದ್ದಾರೆ. ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆ, ಸ್ತ್ರೀಪರವಾಗಿರುವವರಿಗೆ ಬಹಿರಂಗ ಆಹ್ವಾನ ನೀಡುತ್ತಿದ್ದೇವೆ. ಈ ಸಮಸ್ಯೆಗೆ ಪರಿಹಾರ ತೆಗೆದುಕೊಡುವಾದರೆ ಅವರ ಜೊತೆ ನಾವು ಸೇರುತ್ತೇವೆ. ಕಾನೂನಾತ್ಮಕವಾಗಿ ಹೋದರೆ ತುಂಬಾ ಸಮಯ ಹೋಗುತ್ತದೆ. ಈಗಾಗಲೇ ಸಾಕಷ್ಟು ಹಾಜರಾತಿ ಹೋಗಿದೆ. ಹಾಜರಾತಿ ಇಲ್ಲದಿದ್ದರೆ ಪರೀಕ್ಷೆ ಬರೆಯುವುದಕ್ಕೂ ಆಗುವುದಿಲ್ಲ. ಕಾಲೇಜಿಗೆ ಹೋಗಬೇಕೆಂದು ಇದೆ. ಆದರೆ ಕಾಲೇಜಿಗೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಮುಂದೆನಾಗುತ್ತದೆ ಎಂದು ನೋಡುತ್ತೇವೆ" ಎಂದು ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.
ಕೋರ್ಟ್ ನಿರ್ಣಯ ಪಾಲನೆಗೆ ಸೂಚನೆ
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯ ಜಾರಿ ಮಾಡಲಾಗಿದೆ. ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಲು ಅವಕಾಶವಿಲ್ಲ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಈಗಾಗಲೇ ತಿಳಿಸಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂಬ ಕೋರ್ಟ್ ನಿರ್ಣಯವನ್ನು ಪಾಲಿಸುವ ಬಗ್ಗೆ ಸೂಚನೆ ಹೊರಡಿಸಲಾಗಿದೆ. ಮಂಗಳೂರು ವಿವಿ ಕಾಲೇಜಿನಲ್ಲಿ ಒಟ್ಟು 43 ಹಿಜಾಬ್ ಧರಿಸುವ ವಿದ್ಯಾರ್ಥಿನಿಯರಿದ್ದು , ಸದ್ಯ 15 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಬೇಕೆಂದು ಹಠ ಮಾಡುತ್ತಿದ್ದಾರೆ. ತರಗತಿಯಲ್ಲಿ ಮತ್ತು ಲೈಬ್ರರಿಯಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.