ಹಿಜಾಬ್ ಹೋರಾಟಗಾರ್ತಿಯ ಯೂಟರ್ನ್; ಕ್ಷಮೆ ಕೇಳಿ ಕಾಲೇಜಿಗೆ ಮರಳಿದ ವಿದ್ಯಾರ್ಥಿನಿ
ಮಂಗಳೂರು, ಜೂನ್, 23: ಹಿಜಾಬ್ ವಿವಾದದಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಶ್ಚರ್ಯಕರ ಬೆಳವಣಿಗೆ ನಡೆದಿದೆ. ಹಿಜಾಬ್ ಬೇಕು ಅಂತ ಪಟ್ಟು ಹಿಡಿದು ಕಾಲೇಜಿನ ವಿರುದ್ಧವೇ ಹೋರಾಟಕ್ಕೆ ಇಳಿದಿದ್ದ 15 ಮಂದಿ ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ಪ್ರಾಂಶುಪಾಲರ ಬಳಿ ಕ್ಷಮೆಯಾಚಿಸಿ ಕಾಲೇಜಿನ ನಿಯಮವನ್ನು ಅನುಸರಿಸಿ ಕಾಲೇಜಿಗೆ ಬರಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮಂಗಳೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೂವರು ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ಧಾರ್ಮಿಕ ಕಟ್ಟುಪಾಡುಗಳನ್ನು ಕಾಲೇಜಿನ ಒಳಗೆ ಅನುಸರಿಸದೇ, ಕಾಲೇಜಿನ ನಿಯಮಗಳನ್ನು ಪಾಲಿಸಿ ತರಗತಿಗೆ ಬರುವುದಾಗಿ ಪ್ರಾಂಶುಪಾಲರ ಬಳಿ ತನ್ನ ಹೆತ್ತವರ ಸಮ್ಮುಖದಲ್ಲಿ ಕ್ಷಮೆಯಾಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಮತ್ತೆ ಕಾಲೇಜಿನಲ್ಲಿ ಮುಂದುವರಿಯಲು ಪ್ರಾಂಶುಪಾಲರು ಅನುಮತಿಯನ್ನು ನೀಡಿದ್ದಾರೆ.
ಮುಚ್ಚಳಿಕೆ ಬರೆದು, ಹಿಜಾಬ್ ಕಳಚಿಟ್ಟು ತರಗತಿಗೆ ಬಂದ 46 ವಿದ್ಯಾರ್ಥಿನಿಯರು
ಒಟ್ಟು 15 ಮಂದಿ ಹಿಜಾಬ್ಗಾಗಿ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿವಿ ಕಾಲೇಜನ್ನು ತೊರೆದು ಬೇರೆ ಕಾಲೇಜಿಗೆ ವರ್ಗಾವಣೆಯಾಗಲು ಕಾಲೇಜಿನಿಂದ ಎನ್ಒಸಿ ಪಡೆದುಕೊಂಡಿದ್ದಾರೆ. ಮತ್ತೊಬ್ಬಾಕೆ ಕಾಲೇಜಿನಿಂದ ವರ್ಗಾವಣೆ ಪತ್ರವನ್ನು ಕಾಲೇಜಿನಿಂದ ಪಡೆದಿದ್ದಾರೆ.
ಪತಿಕಾ ಗೋಷ್ಠಿ ನಡೆಸಿದವರಲ್ಲಿ ಒಬ್ಬಾಕೆ ಮಾತ್ರ ವಾಪಸ್
15 ಮಂದಿ ಹಿಜಬ್ ವಿದ್ಯಾರ್ಥಿನಿಯರ ಪೈಕಿ ಮೂರು ಮಂದಿ ಪತ್ರಿಕಾಗೋಷ್ಠಿಯನ್ನು ನಡೆಸಿ ಹಿಜಾಬ್ ಕುರಿತಾಗಿ ಮಂಗಳೂರು ವಿವಿ ಕಾಲೇಜಿನ ನಿರ್ಧಾರವನ್ನು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ್ದರು. ಪತ್ರಿಕಾಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ಮತ್ತೆ ಕಾಲೇಜಿಗೆ ಮರಳಲು ಮುಂದಾಗಿದ್ದಾರೆ. ಮತ್ತೊಬ್ಬಳು ಆರೋಗ್ಯ ಸಮಸ್ಯೆ ದಿಂದ ಇತ್ತೀಚೆಗೆ ಟಿಸಿ ಪಡೆದುಕೊಂಡಿದ್ದಾರೆ. ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ನೀಡದ ಹಿನ್ನೆಲೆಯಲ್ಲಿ 15 ಮಂದಿ ವಿದ್ಯಾರ್ಥಿಯರು ಪ್ರತಿಭಟನೆ ನಡೆಸಿ ಕಾಲೇಜಿನ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದರು.
ಹೈಕೋರ್ಟ್ ತೀರ್ಪಿನ ನಂತರ ಹಿಜಾಬ್ ನಿಷೇಧ
ಹೈಕೋರ್ಟ್ ತರಗತಿಗಳಲ್ಲಿ ಧಾರ್ಮಿಕ ಗುರುತುಗಳನ್ನು ಗುರುತಿಸುವ ಯಾವುದೇ ಚಿಹ್ನೆಗಳನ್ನು ಧರಿಸುವುದನ್ನು ನಿಷೇಧಿಸಿ ತೀರ್ಪು ನೀಡಿತ್ತು. ತೀರ್ಪಿನ ನಂತರ ಮಂಗಳೂರು ವಿವಿ ಸಿಂಡಿಕೇಟ್ ವಿವಿ ಕಾಲೇಜಿನಲ್ಲಿಯೂ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿ ನಿಯಮಾವಳಿಗಳನ್ನು ಮಾಡಲಾಗಿತ್ತು. ಆ ಬಳಿಕ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿದ್ದವು. ಕಾಲೇಜಿನಲ್ಲಿದ್ದ 44 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಇವರಲ್ಲಿ 15 ಮಂದಿ ಹಿಜಾಬ್ ತೆಗೆದು ಕಾಲೇಜಿಗೆ ಬರಲು ನಿರಾಕರಿಸಿದ್ದರು. ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ತೆರಳುವುದಿದ್ದರೆ ಅವರಿಗೆ ಟಿಸಿ ನೀಡಲು ವ್ಯವಸ್ಥೆ ಮಾಡಲಾಗುವುದೆಂದು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದರು.
ಕಾಲೇಜಿನ ವಿರುದ್ಧವೇ ಪತ್ರಿಕಾಗೋಷ್ಠಿ: ಹಿಜಾಬ್ ವಿದ್ಯಾರ್ಥಿನಿಯರಿಗೆ ನೋಟೀಸ್
ಟಿಸಿ ಪಡೆದ 5 ವಿದ್ಯಾರ್ಥಿನಿಯರು
ಹಿಜಾಬ್ ಹೋರಾಟದ ಸಂದರ್ಭದಲ್ಲೇ ಕಾಲೇಜುನ್ನು ತೊರೆಯಲು ವಿದ್ಯಾರ್ಥಿನಯರು ಬಯಸಿದ್ದೇ ಆದರೆ ಅವರಿಗೆ ಟಿಸಿ ನೀಡುವುದಾಗಿ ಕುಲಪತಿ ತಿಳಿಸಿದ್ದರು. ಇದೀಗ ಮಂಗಳೂರು ವಿವಿ ವ್ಯಾಪ್ತಿಯ ಹಂಪನಕಟ್ಟೆ ಕಾಲೇಜಿನ ಒಟ್ಟು ಐದು ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ(ಟಿಸಿ) ಪಡೆದು ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.
ನಿಯಮ ಮೀರಿದ್ದ ವಿದ್ಯಾರ್ಥಿನಿಯರಿಗೆ ನೋಟಿಸ್
ಹಿಜಾಬ್ ಬೇಕೆಂದು ಹಠ ಹಿಡಿದ್ದಿದ್ದ ಕೆಲವು ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿದ ಹಿನ್ನೆಲೆಯಲ್ಲಿ, ಕಾಲೇಜಿನ ಶಿಸ್ತು ಮತ್ತು ಘನತೆಗೆ ಧಕ್ಕೆ ಬಂದಿದೆ ಎಂದು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಎಲ್ಲಾ ವಿದ್ಯಾರ್ಥಿನಿಯರಿಗೆ ನೋಟಿಸ್ ನೀಡಲಾಗಿತ್ತು. ವಿದ್ಯಾರ್ಥಿನಿಯರು ಕಾಲೇಜಿನ ಘನತೆಗೆ ಧಕ್ಕೆ ಮಾತ್ರವಲ್ಲದೆ ಬಾಹ್ಯ ಶಕ್ತಿಗಳ ಜೊತೆ ಸೇರಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಕಾಲೇಜಿನ ವಿರುದ್ಧವಾಗಿ, ಪ್ರಾಂಶುಪಾಲರ ವಿರುದ್ಧವಾಗಿ ಹೇಳಿಕೆ ನೀಡಿ ಕಾಲೇಜಿನ ಘನತೆಗೆ ಉಂಟುಮಾಡಲಾಗಿದೆ. ಈ ರೀತಿಯ ವರ್ತನೆಯ ಬಗ್ಗೆ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎನ್ನುವ ಬಗ್ಗೆ ಸಮಜಾಯಿಷಿಕೆಯನ್ನು ಮೂರು ದಿನಗಳ ಒಳಗಾಗಿ ಉತ್ತರಿಸಬೇಕೆಂದು ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ ಬೆನ್ನಲ್ಲೇ ಕೆಲವರು ವಾಪಸ್ ಆದರೆ, ಕೆಲವರು ಟಿಸಿ ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಗೈರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.