ವಿಶೇಷ ವರದಿ: ರಾಜ್ಯದ ಎಂಡೋ ಸಂತ್ರಸ್ತರ ರಕ್ಷಣೆಗೆ ಬಂದ ನ್ಯಾಯಾಲಯ
ಮಂಗಳೂರು, ಜೂನ್ 25: ಎಂಡೋಸಲ್ಫಾನ್.. ಈ ಹೆಸರು ಕೇಳಿದಾಕ್ಷಣ ಸಂತ್ರಸ್ತರ ಆರ್ತನಾದ ಕಣ್ಣಮುಂದೆ ಬರುತ್ತದೆ. ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರ ಬದುಕು, ಬದುಕಿಗೆ ಬದುಕೂ ಅಲ್ಲ, ಸಾವಿಗೆ ಸಾವೂ ಅಲ್ಲ ಎಂಬಂತಾಗಿದೆ. ಪ್ರತೀ ಉಸಿರು ಎಳೆಯುವಾಗಲೂ ಅಮಾಯಕ ಸಂತ್ರಸ್ತರ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ತಾವು ಮಾಡದ ತಪ್ಪಿಗಾಗಿ ಈ ಕ್ಷಣದವರೆಗೆ ನರಕಯಾತನೆ ಅನುಭವಿಸುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ ಬದುಕಿಗೆ ಆಧಾರವಾಗಿರಬೇಕಾದ ಸರ್ಕಾರ ಕಣ್ಮುಚ್ಚಿ ಕೂತಿದೆ. ಆದರೆ, ಇದೀಗ ಎಂಡೋಸಲ್ಫಾನ್ ಸಂತ್ರಸ್ತರ ರಕ್ಷಣೆಗೆ ಸ್ವತ ನ್ಯಾಯಾಲಯವೇ ಮುಂದೆ ಬಂದಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ನೂರಾರು ಎಂಡೋಸಲ್ಪಾನ್ ಸಂತ್ರಸ್ತರ ರಕ್ಷಣೆಗೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನಿರ್ಧಾರ ಮಾಡಿದ್ದು, ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ನೇತೃತ್ವದಲ್ಲಿ ಎಂಡೋಸಲ್ಪಾನ್ ಸಂತ್ರಸ್ತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರಚಿಸಲಾಗುತ್ತಿದೆ.
ಸೌಲಭ್ಯಗಳನ್ನು ನೀಡಲು ಕ್ರಿಯಾ ವರದಿ ಸಹಕಾರಿ
ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳು, ಸಂತ್ರಸ್ತರಿಗೆ ನೀಡಬೇಕಾದ ಪರಿಹಾರದ ಕುರಿತು ಸಮಗ್ರ ಕ್ರಿಯಾ ಯೋಜನೆಗೆ ಕರಾವಳಿಯ ಮೂರೂ ಜಿಲ್ಲೆಗಳ ಕಾನೂನು ಪ್ರಾಧಿಕಾರದ ಕಾರ್ಯದರ್ಶಿಗಳು ಸಮಗ್ರ ಕ್ರಿಯಾ ವರದಿ ನೀಡುವಂತೆ ಆದೇಶ ನೀಡಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ, ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳನ್ನು ನೀಡಲು ಈ ಕ್ರಿಯಾ ವರದಿ ಸಹಕಾರಿಯಾಗಲಿದೆ.
ವಿಶೇಷ ವರದಿ: ಎಂಡೋ ಸಲ್ಫಾನ್ ಸಂತ್ರಸ್ತರ ಬಾಳಲ್ಲಿ ಹೊಸ ಭರವಸೆಯ ಬೆಳಕು
ಗರ್ಭದಲ್ಲಿರುವ ಶಿಶುಗಳ ಮೇಲೆ ದುಷ್ಪರಿಣಾಮ
1980ರಿಂದ 2000ನೇ ಇಸವಿಯವರೆಗೆ ಎಂಡೋಸಲ್ಫಾನ್ ಎಂಬ ವಿಷಕಾರಿ ರಾಸಾಯನಿಕವನ್ನು ಸರ್ಕಾರ ಜನವಸತಿ ಇರುವ ಪ್ರದೇಶದಲ್ಲಿ ಯಾವುದೇ ಮುನ್ನಚ್ಚರಿಕೆ ನೀಡದೆ ಸಿಂಪಡಣೆ ಮಾಡಿದ್ದು, ಇದರ ಪರಿಣಾಮ, ಕರಾವಳಿಯ 450ಕ್ಕೂ ಹೆಚ್ಚಿನ ಹಳ್ಳಿಗಳ 8600ಕ್ಕಿಂತಲೂ ಅಧಿಕ ಮಂದಿ ಬಾಧಿತರಾಗಿದ್ದರು. ಗರ್ಭದಲ್ಲಿರುವ ಶಿಶುಗಳ ಮೇಲೆ ದುಷ್ಪರಿಣಾಮವಾಗಿ ಸಹಸ್ರಾರು ಮಕ್ಕಳು ಹುಟ್ಟಿನಿಂದಲೇ ವಿಕಲಚೇತನರಾಗಿದ್ದಾರೆ. ಹಿರಿಯರು ಕ್ಯಾನ್ಸರ್, ಅಸ್ತಮಾ, ಎಪಿಲೆಪ್ಸಿ, ಖಿನ್ನತೆ ಹಾಗೂ ಹಾರ್ಮೋನ್ ಸಂಬಂಧಿತ ರೋಗಗಳಿಂದ ನರಳುತ್ತಿದ್ದಾರೆ. ಇದೀಗ ಈ ಮಕ್ಕಳು ಸುಮಾರು 30 ರಿಂದ 40 ವರ್ಷದೊಳಗಿನವರಾಗಿದ್ದು, ಹೆಚ್ಚಿನವರು ಹೆತ್ತವರನ್ನೂ ಕಳೆದುಕೊಂಡಿದ್ದಾರೆ.
ಮಾಸಿಕ 3000 ರೂಪಾಯಿಗಳ ಸಹಾಯಧನ
ಪಾಲನೆಗೆ ಪೋಷಣೆಗೆ ಅವರ ಗುಡಿಸಲುಗಳಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಪಾಲನಾ ಕೇಂದ್ರಗಳನ್ನು ಸ್ಥಾಪಿಸಲು 2013ರಲ್ಲೇ ಸರಕಾರ ಆದೇಶ ಹೊರಡಿಸಿದ್ದರೂ, ಇಂದಿಗೂ ಈ ಆದೇಶದ ಅನುಷ್ಠಾನವಾಗಿಲ್ಲ. ಹೈಕೋರ್ಟ್ 2014ರಲ್ಲಿ ನೀಡಿದ್ದ ತೀರ್ಪಿನಲ್ಲಿ ಶೇಕಡಾ 25 ರಿಂದ ಶೇ. 60ರವರೆಗಿನ ಅಂಗವಿಕಲತೆಯನ್ನು ಹೊಂದಿದ್ದವರಿಗೆ ಮಾಸಿಕ 1500 ರೂಪಾಯಿ ಹಾಗೂ ಶೇಕಡಾ 60ಕ್ಕಿಂತಲೂ ಹೆಚ್ಚಿನ ಅಂಗವಿಕಲತೆ ಉಳ್ಳವರಿಗೆ ಮಾಸಿಕ 3000 ರೂಪಾಯಿಗಳ ಸಹಾಯಧನ ನೀಡಲು ಸೂಚಿಸಲಾಗಿತ್ತು.
ಅಶಕ್ತರಿಗೆ ಆದಾಯವೂ ಇಲ್ಲ
ಆದರೆ ಸುಮಾರು 2000 ಕ್ಕಿಂತಲೂ ಹೆಚ್ಚಿನ ಸಂತ್ರಸ್ತರಿಗೆ ಕ್ಯಾನ್ಸರ್, ಫಿಟ್ಸ್, ಸ್ಕಿಜೋಫ್ರೇನಿಯಾ, ಖಿನ್ನತೆ ಮುಂತಾದ ರೋಗಗಳಿದ್ದರೂ ಅವರ ಅಂಗವಿಕಲತೆ ಶೇ 25ಕ್ಕಿಂತಲೂ ಕಡಿಮೆ ಇರುವುದರಿಂದ ಅವರೆಲ್ಲರೂ ಮಾಸಾಶನದಿಂದ ವಂಚಿತರಾಗಿದ್ದಾರೆ. ಉದ್ಯೋಗ ಮಾಡಲು ಅಶಕ್ತರಾಗಿರುವುದರಿಂದ ಆದಾಯವೂ ಇಲ್ಲದಂತಾಗಿದೆ. ಈ ಎಲ್ಲಾ ವಿಚಾರಗಳು ಕ್ರಿಯಾ ವರದಿಯ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ.