ಉಗ್ರರ ಪ್ರತಿದಾಳಿ ಸಾಧ್ಯತೆ, ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್
ಮಂಗಳೂರು, ಫೆಬ್ರವರಿ 27:ಪಾಕಿಸ್ತಾನದ ಮೇಲೆ ಭಾರತ ಏರ್ಸ್ಟ್ರೈಕ್ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕೂಡ ಪ್ರತಿದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರಾವಳಿಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 300 ಕಿ.ಮೀ.ವ್ಯಾಪ್ತಿಯ ಕರಾವಳಿಯಲ್ಲಿ ಹೈ ಅಲರ್ಟ್ ಸೂಚಿಸಲಾಗಿದೆ.
ದಕ್ಷಿಣ ಕನ್ನಡ , ಉಡುಪಿ , ಉತ್ತರ ಕನ್ನಡ ಜಿಲ್ಲೆಯ ಕಡಲ ತಡಿಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಅದರಲ್ಲೂ ಕಾರವಾರದ ನೌಕಾನೆಲೆ ವ್ಯಾಪ್ತಿಯಲ್ಲಿ ಸ್ಟೇಟ್ 1 ಅಲರ್ಟ್ ಘೋಷಿಸಲಾಗಿದೆ. ಉಗ್ರರು ಭಾರತದ ಮೇಲೆ ಪ್ರತಿದಾಳಿ ನಡೆಸಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿಯುದ್ದಕ್ಕೂ ಹದ್ದಿನ ಕಣ್ಣು ಇಡಲಾಗಿದೆ.
ಉಗ್ರನೆಲೆ ಧ್ವಂಸ LIVE: ಪಾಕಿಸ್ತಾನದ F-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ
ಉಗ್ರರು ಕರಾವಳಿಯ ಸ್ಲೀಪರ್ ಸೆಲ್ಸ್ ಗಳನ್ನು ಬಳಸಿ ದಾಳಿ ನಡೆಸುವ ಆತಂಕ ಇರುವ ಹಿನ್ನೆಲೆಯಲ್ಲಿ ಕರಾವಳಿಯುದ್ದಕ್ಕೂ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಭಾರತೀಯ ನೌಕಾಪಡೆಯ ಹಡಗುಗಳು, ಕೋಸ್ಟ್ಗಾರ್ಡ್ಸ್ ಆಳ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾರೆ. ಕೋಸ್ಟಲ್ ಪೊಲೀಸ್ ಸೇರಿದಂತೆ ಪೊಲೀಸರು ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಬುದ್ಗಾಮ್ನಲ್ಲಿ ಮಿಗ್-21 ಯುದ್ಧ ವಿಮಾನ ಪತನ, ಇಬ್ಬರು ಪೈಲಟ್ ಸಾವು
ಕರಾವಳಿಯಲ್ಲಿ ಹಿರಿಯ ಅಧಿಕಾರಿಗಳನ್ನು ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ಕಳೆದ ರಾತ್ರಿಯಿಂದಲೇ ಚೆಕ್ಪೋಸ್ಟ್ಗಳಲ್ಲಿ ವಾಹನ ತಪಾಸಣೆ ಆರಂಭಿಸಿದ್ದಾರೆ. ರೈಲು ನಿಲ್ದಾಣ, ಏರ್ಪೋರ್ಟ್, ಮಾಲ್, ಮಾರುಕಟ್ಟೆ ಹಾಗೂ ಇತರ ಸಾರ್ವಜನಿಕ ಪ್ರದೇಶದ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಜನನಿಬಿಡ ಪ್ರದೇಶಗಳಲ್ಲೂ ಪೊಲೀಸರು ನಿಗಾ ಇಟ್ಟಿದ್ದಾರೆ.