ಏನಿದು ಕೇಶವಾನಂದ ಭಾರತೀ ಸ್ವಾಮೀಜಿ ಹಾಗೂ ಕೇರಳ ಸರ್ಕಾರದ ಪ್ರಕರಣ?
ಮಂಗಳೂರು, ಸೆಪ್ಟೆಂಬರ್ 6: ಕೇರಳದ ಕಾಸರಗೋಡು ಜಿಲ್ಲೆಯ ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿಗಳು ಶನಿವಾರ ನಿಧನ ಹೊಂದಿದ್ದಾರೆ.
76 ವರ್ಷ ವಯಸ್ಸಿನ ಕೇಶವಾನಂದ ಭಾರತೀ ಸ್ವಾಮೀಜಿ ಧಾರ್ಮಿಕವಾಗಿ, ಸಾಮಾಜಿಕವಾಗಿ ಸಕ್ರಿಯರಾಗಿದ್ದರು. ಯಕ್ಷಗಾನ ಕಲೆಯ ಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿದ್ದ ಕೇಶವಾನಂದ ಭಾರತೀ ಸ್ವಾಮೀಜಿ, ಮೇಳವನ್ನು ಮುನ್ನಡೆಸುವುದಲ್ಲದೇ ಸ್ವತಃ ತಾವೇ ಭಾಗವತಿಕೆಯನ್ನು ನಡೆಸುತ್ತಿದ್ದರು. 1970 ರಲ್ಲಿ ಕೇಶವಾನಂದ ಭಾರತಿ ಸ್ವಾಮೀಜಿ ವರ್ಸಸ್ ಕೇರಳ ಸರ್ಕಾರ ಪ್ರಕರಣವು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಸುಪ್ರೀಂ ಕೋರ್ಟ್ ನ ಅತೀ ದೊಡ್ಡ ಪೀಠದಲ್ಲಿ ನಿರಂತರ 68 ದಿನಗಳ ಕಾಲ ನಡೆದ ವಿಚಾರಣೆಯ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕಾಸರಗೋಡಿನ ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ನಿಧನ
1970 ಫೆಬ್ರವರಿ ತಿಂಗಳಿನಲ್ಲಿ ಕೇರಳ ಸರ್ಕಾರ ಭೂ ಸುಧಾರಣೆ ಕಾಯ್ದೆಯ ಹೆಸರಲ್ಲಿ ಕಾಸರಗೋಡಿನ ಬಳಿಯಿರುವ "ಎಡನೀರು ಮಠ'ಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧಾರ ಮಾಡಿ, ಈ ಕುರಿತು ನೋಟೀಸ್ ಜಾರಿ ಮಾಡಿತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು
ಕೇಶವಾನಂದ ಭಾರತೀಗಳ ನೆರವಿಗೆ ಬಂದವರು ಫಾಲ್ಕಿವಾಲಾ
ಆಗ ಅವರ ನೆರವಿಗೆ ಬಂದಿದ್ದೇ ಪ್ರಖ್ಯಾತ ನ್ಯಾಯವಾದಿ, ನ್ಯಾಯಶಾಸ್ತ್ರಜ್ಞ ನಾನಾಬಾಯ್ ಫಾಲ್ಕಿವಾಲಾ. ನ್ಯಾಯವಾದಿ ಫಾಲ್ಕಿವಾಲಾ ಅವರು ಸ್ವಾಮೀಜಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಮನವೊಲಿಸಿದರು. ಅವರೇ ಅರ್ಜಿದಾರರ ಪರವಾಗಿ ವಕಾಲತ್ತು ವಹಿಸಿದ್ದರು. ಫಾಲಿ ನಾರಿಮನ್ ಅವರ ನೇತೃತ್ವದಲ್ಲಿ ಫಾಲ್ಕಿವಾಲ ವಾದಿಸುತ್ತಿದ್ದರು. ಸರ್ಕಾರದ ಹಸ್ತಕ್ಷೇಪವಲ್ಲದೇ ಧಾರ್ಮಿಕ ಸ್ವಾಮ್ಯದ ಆಸ್ತಿಯನ್ನು ನಿರ್ವಹಿಸುವ ಹಕ್ಕಿನ ಬಗ್ಗೆಯೂ ಆ ಅರ್ಜಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಈ ಪ್ರಕರಣ ಕೇವಲ ಮಠದ ಆಸ್ತಿಗೆ ಸಂಬಂಧಿಸಿದ ವಿಚಾರಕ್ಕಷ್ಟೇ ಅಲ್ಲದೇ, ಮೂಲಭೂತ ಹಕ್ಕುಗಳ ಮಾನ್ಯತೆಯ ಬಗ್ಗೆಯೂ ವಿಸ್ತೃತ ಚರ್ಚೆಗೆ ನಾಂದಿ ಹಾಡಿದ್ದು ವಿಶೇಷವಾಗಿತ್ತು. ""ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ'' ಎಂದು ಗುರುತಿಸಿಕೊಳ್ಳುವ ಈ ಪ್ರಕರಣದ ಕುರಿತಾಗಿ ಸುಪ್ರೀಂ ಕೋರ್ಟ್ನಲ್ಲಿ ನಿರಂತರ 68 ದಿನಗಳ ಕಾಲ ವಾದ-ಪ್ರತಿವಾದಗಳು ನಡೆದಿದ್ದವು.
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತೀ ದೊಡ್ಡ ನ್ಯಾಯಪೀಠ
1972 ಅಕ್ಟೋಬರ್ 31 ರಂದು ಆರಂಭವಾದ ವಾದ-ಪ್ರತಿವಾದ 1973 ರ ಮಾರ್ಚ್ 23 ಕ್ಕೆ ಅಂತ್ಯವಾಯಿತು. ಈ ಪ್ರಕರಣದ ಕುರಿತಾಗಿ ಬಂದ ತೀರ್ಪನ್ನು ಭಾರತದ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಹಾಗೂ ಭಾರತದ ಸಂವಿಧಾನದ ಕುರಿತಾದ ವಿಚಾರದಲ್ಲಿ ಮಹತ್ವದ ಮೈಲಿಗಲ್ಲೆಂದು ಪರಿಗಣಿಸಲಾಗುತ್ತದೆ. ಇನ್ನೊಂದು ವಿಶೇಷತೆ ಎಂದರೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತೀ ದೊಡ್ಡ ನ್ಯಾಯಪೀಠ, ಅಂದರೆ 13 ಸದಸ್ಯರ ಸಾಂವಿಧಾನಿಕ ನ್ಯಾಯಪೀಠವು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿತು.
ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರಬಾರದು
" ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆಯೇನೋ ಸರಿ. ಆದರೆ, ಈ ಅಧಿಕಾರ ಬಳಸಿ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಿದ್ದರೂ ತಿದ್ದಬಹುದೇ?' ಎಂಬ ಪ್ರಶ್ನೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಯಿತು. ಆಗ ಸುಪ್ರೀಂ ಕೋರ್ಟ್, ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿಯು ಅದರ ಮೂಲ ಸ್ವರೂಪಕ್ಕೆ, ಅಂದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರಬಾರದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ಪರಿಚ್ಛೇದ 9ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಿಕ ಸಮಿತಿಗಳಿಂದ ಅಧ್ಯಯನಕ್ಕೊಳಪಟ್ಟ ನಂತರವೇ ತಿದ್ದುಪಡಿಗೊಳ್ಳುವಂತೆಯೂ ಹೊಸ ಮಾರ್ಗಸೂಚಿ ಜಾರಿ ಮಾಡಿತು.
ಸಂವಿಧಾನದ ಮೂಲಭೂತ ವೈಶಿಷ್ಟ್ಯಗಳನ್ನು ತಿರುಚುವ ಅಧಿಕಾರವಿಲ್ಲ
ಹದಿಮೂರು ನ್ಯಾಯಮೂರ್ತಿಗಳ ನ್ಯಾಯಪೀಠವು 7/6ರಷ್ಟಿದ್ದ ಅತಿಸೂಕ್ಷ್ಮ ಬಹುಮತದಿಂದ ಈ ತೀರ್ಪು ನೀಡಿತು. ಸಂವಿಧಾನದ ಮೂಲಭೂತ ವೈಶಿಷ್ಟ್ಯಗಳನ್ನು ತಿರುಚುವ ಅಥವಾ ಅದನ್ನು ಗಾಯಗೊಳಿಸುವ ಅಧಿಕಾರ ಸಂಸತ್ತಿಗಿಲ್ಲ ಎನ್ನುವ ಮೂಲಕ, ಬೆಳೆಯುತ್ತಲೇ ಇದ್ದ ಶಾಸಕಾಂಗದ ಕೈಗಳನ್ನು ಹಿಡಿದು ನಿಲ್ಲಿಸಿತು. ಈಗಲೂ ಭಾರತದ ಕಾನೂನು ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಬಹು ಮುಖ್ಯವಾದ ಪ್ರಕರಣಗಳಲ್ಲಿ ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರದ ಪ್ರಕರಣ ಮೊದಲನೆಯದ್ದಾಗಿದೆ. ಕೇಶವಾನಂದ ಪ್ರಕರಣದ ಸಿದ್ಧತೆಗೆ ನಡೆಸಿದ ತಯಾರಿ, ಅದಕ್ಕಾಗಿ ಪಟ್ಟ ಪರಿಶ್ರಮ ಅಗಾಧವಾದದ್ದು. ಅಕ್ಷರಶಃ ನೂರಾರು ಪ್ರಕರಣಗಳನ್ನು ಅಂದು ಕೋರ್ಟ್ನ ನಲ್ಲಿ ಉಲ್ಲೇಖೀಸಲಾಗಿತ್ತು, ಅಟಾರ್ನಿ ಜನರಲ್ ಅವರಂತೂ 71 ದೇಶಗಳಿಗೂ ಹೆಚ್ಚು ಸಂವಿಧಾನಿಕ ನಿಬಂಧನೆಗಳನ್ನು ವಿಶ್ಲೇಷಿಸುವ ಪಟ್ಟಿ ಸಿದ್ಧಪಡಿಸಿದ್ದರು.
ಇಂದಿರಾ ಗಾಂಧಿ ಸರ್ಕಾರದ ಮುನಿಸಿಗೆ ಕಾರಣವಾಗಿತ್ತು
ಈ ತೀರ್ಪಿನ ನಂತರ ಆಘಾತಕಾರಿ ಬೆಳವಣಿಗೆಯೊಂದೂ ನಡೆಯಿತು. ಇಂದಿರಾ ಗಾಂಧಿ ಸರ್ಕಾರ, ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಜೆ.ಎನ್.ಶೀಲತ್ ಮತ್ತು ಎ.ಎನ್ ಗ್ರೋವರ್ ಎಂಬ ಮೂವರ ಹಿರಿತನವನ್ನು ಬದಿಗಿರಿಸಿ ನ್ಯಾಯಮೂರ್ತಿ ಎ.ಎನ್ ರೇ ಅವರನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿತು. ಆದರೆ ನ್ಯಾಯಮೂರ್ತಿ ಎ.ಎನ್.ರೇ ಅವರು ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ನ್ಯಾ.ಕೆ.ಎಸ್. ಹೆಗ್ಡೆ, ನ್ಯಾ.ಜೆ.ಎನ್.ಶೀಲತ್ ಮತ್ತು ನ್ಯಾ.ಎ.ಎನ್ ಗ್ರೋವರ್ ಬಹುಮತದ ಪರವಾಗಿ ಇರುವುದು ಪ್ರಧಾನಿ ಇಂದಿರಾ ಗಾಂಧಿ ಸರ್ಕಾರದ ಮುನಿಸಿಗೆ ಕಾರಣವಾಗಿತ್ತು. ಎ.ಎನ್.ರೇ ಅವರನ್ನು ಸಿಜೆಐ ಆಗಿ ನೇಮಿಸಿದ್ದನ್ನು ಭಾರತೀಯ ಕಾನೂನು ಇತಿಹಾಸದಲ್ಲೇ ಕರಾಳ ದಿನ ಎಂದು ಪರಿಗಣಿಸಲಾಗುತ್ತದೆ.