ಕಲ್ಲಡ್ಕ ಶಾಲೆಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ 'ಭಿಕ್ಷಾಂದೇಹಿ' ಆಂದೋಲನ
ಮಂಗಳೂರು, ಆಗಸ್ಟ್ 14: ಕಲ್ಲಡ್ಕದ ಎರಡು ಶಾಲೆಗಳಿಗೆ ಬಿಸಿಯೂಟದ ಅನುದಾನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ .
ಮಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ
ಶ್ರೀಕ್ಷೇತ್ರ ಕೊಲ್ಲೂರು ದೇವಾಲಯದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚ ಶ್ರೀದೇವಿ ವಿದ್ಯಾ ಸಂಸ್ಥೆಗೆ ನೀಡಲಾಗುತ್ತಿದ್ದ ಬಿಸಿಯೂಟದ ಅನುದಾನವನ್ನು ರಾಜ್ಯ ಸರ್ಕಾರ ನಿಲ್ಲಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ 'ಭಿಕ್ಷಾಂದೇಹಿ' ಆಂದೋಲನ ಆರಂಭಿಸಿದ್ದಾರೆ .
"ಶಾಲೆಯ ಬಿಸಿಯೂಟ ಅನುದಾನ ನಿಲ್ಲಿಸಿದ್ದಕ್ಕೆ, ಜೋಳಿಗೆ ಹಾಕಿ ಭಿಕ್ಷೆ ಬೇಡಿಯಾದರು ಹಣ ಒಟ್ಟು ಮಾಡಿ ಮಕ್ಕಳ ಊಟಕ್ಕೆ ವ್ಯವಸ್ಥೆ ಮಾಡುತ್ತೇನೆ," ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದರು .ಈ ಹಿನ್ನೆಲೆಯಲ್ಲಿ ಉತ್ತೇಜಿತರಾದ ಕೆಲವು ನೆಟ್ಟಿಗರು ಟ್ವಿಟ್ಟರ್ ನಲ್ಲಿ ಭಿಕ್ಷಾಂದೇಹಿ ಹಾಗೂ ಫೇಸ್ ಬುಕ್ ನಲ್ಲಿ 'ಜಸ್ಟೀಸ್ ಫಾರ್ ಕಲ್ಲಡ್ಕ ಸ್ಟೂಡೆಂಟ್ಸ್' ಹ್ಯಾಷ್ ಟ್ಯಾಗ್ ನೊಂದಿಗೆ ಆಂದೋಲನ ಆರಂಭಿಸಿದ್ದಾರೆ .
ಸಂಸ್ಥೆಯ ಬ್ಯಾಂಕ್ ಅಕೌಂಟ್ ನಂಬರ್ ಸಹಿತ ಪೋಸ್ಟರ್ ಗಳು ಟ್ವಿಟರ್ , ಫೇಸ್ ಬುಕ್ ಹಾಗೂ ವಾಟ್ಸಪ್ ಮೂಲಕ ಶೇರ್ ಮಾಡಲಾಗುತ್ತಿದೆ. ಇದಕ್ಕೆ ಭಾರೀ ಬೆಂಬಲ ಕೂಡ ವ್ಯಕ್ತವಾಗುತ್ತಿದೆ .
ಮಾಜಿ ಸಚಿವ ಸಿ.ಟಿ ರವಿ ವೈಯಕ್ತಿಕ ನೆಲೆಯಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ಒಂದು ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಒಂದು ಸಾವಿರ ಕೆಜಿ ಅಕ್ಕಿ ನೀಡುವ ಘೋಷಣೆ ಮಾಡಿದ್ದಾರೆ .ಅದಲ್ಲದೆ ಈ ಆಂದೋಲನಕ್ಕೆ ಕೆಲವು ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಸ್ಪಂದನೆ ಮಾಡಿರುವ ಮಾಹಿತಿ ಜಾಲತಾಣದಲ್ಲಿ ಹರಿದಾಡುತ್ತಿದೆ.