ಮಂಗಳೂರು ತೀರದಲ್ಲಿ ಹೆಚ್ಚಿದ ಕಡಲ ಕೊರೆತ; ಮನೆಗಳಿಗೆ ಹಾನಿ
ಮಂಗಳೂರು ಜೂನ್ 12: ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ಕಡಲ ಕೊರೆತ ಉಂಟಾಗುತ್ತಿದ್ದು, ಕಡಲ ತಡಿಯಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆಯಾಗುತ್ತಿದೆ.
ಮಂಗಳೂರು ನಗರದಲ್ಲಿ ಇಂದು ಮುಂಜಾನೆಯಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಪುತ್ತೂರು, ಕಾರ್ಕಳ, ಬೆಳ್ತಂಗಡಿ, ಪುಂಜಾಲಕಟ್ಟೆ, ಮೂಲ್ಕಿ, ವಿಟ್ಲ, ಅನಂತಾಡಿ, ಸುರತ್ಕಲ್, ಕಡಬ, ಉಪ್ಪಿನಂಗಡಿ, ವೇಣೂರು, ನಾರಾವಿ, ಗುರುವಾಯನಕೆರೆ, ಧರ್ಮಸ್ಥಳ, ಕನ್ಯಾನ, ಬಿ.ಸಿ.ರೋಡು, ಮಾಣಿ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಕರಾವಳಿ; ಚಂಡಮಾರುತದ ಎಚ್ಚರಿಕೆ, ಸಮುದ್ರಕ್ಕಿಳಿಯದಂತೆ ಸೂಚನೆ
ಮಂಗಳೂರು ಹೊರವಲಯದ ಪಣಂಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ ಕಡತ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು ಪ್ರವಾಸಿಗರನ್ನು ಕಡಲಿನಿಂದ ದೂರ ಇರಲು ಸೂಚಿಸಲಾಗಿದೆ. ಗಾಳಿ-ಮಳೆಗೆ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ.
ಉಳ್ಳಾಲದ ಇತರ ಭಾಗಗಳಲ್ಲಿಯೂ ಕಡಲ್ಕೊರೆತದ ಭೀತಿ ಎದುರಾಗಿದೆ. ಉಳ್ಳಾಲದ ಕೈಕೋ ಪ್ರದೇಶದ ಎಂಟು ಮನೆಗಳು ಕಡಲ ಪಾಲಾಗುವ ಭೀತಿ ಎದುರಿಸುತ್ತಿವೆ. ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ದಡಕ್ಕೆ ಭಾರೀ ಗಾತ್ರದ ರಕ್ಕಸ ಅಲೆಗಳು ಅಪ್ಪಳಿಸುತ್ತಿವೆ. ಆಳೆತ್ತರದ ಅಲೆಗಳ ರಭಸಕ್ಕೆ ತಡೆ ಗೋಡೆಗೆಂದು ಹಾಕಲಾಗಿದ್ದ ಕಲ್ಲುಗಳು ಸಮುದ್ರಪಾಲಾಗಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧ, ಕಡಲ ತಡಿಯಲ್ಲಿ ಆತಂಕ
ರೋಡ್ನ ಫೆರಿಬೈಲು ಮತ್ತು ಬಟ್ಟಪ್ಪಾಡಿ ಬಳಿ ಹೆಚ್ಚು ಹಾನಿಗೀಡಾಗಿದ್ದು, ವಿಶ್ವನಾಥ್, ನಾಗೇಶ್ ಅವರ ಮನೆಗಳಿಗೆ ಹೆಚ್ಚು ಹಾನಿಯಾಗಿದೆ, 6ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಮುದ್ರ ಉಕ್ಕೇರುತ್ತಿರುವುದರಿಂದ ಉಪ್ಪುನೀರು ಚಿತ್ರಾಪುರ ರಾಜಕಾಲುವೆಯ ಮೂಲಕ ನಗರದತ್ತ ಬರಲಾರಂಭಿಸಿದೆ. ಈ ಬಾರಿಯೂ ತಗ್ಗು ಪ್ರದೇಶದಲ್ಲಿ ನೆರೆ ಭೀತಿ ಉಂಟಾಗಿದೆ. ಪಕ್ಕದ ಕೇರಳದ ಗಡಿಭಾಗ ಕಾಸರಗೋಡಿಗೂ ಮುಂಗಾರು ಪ್ರವೇಶಿಸಿರುವಂತೆ ಭಾರೀ ಮಳೆ ಸಹಿತ ಚಂಡಮಾರುತ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆ ಸಹಿತ ಕೇರಳ ರಾಜ್ಯದ ಆರು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.