ಬೆಳ್ತಂಗಡಿ: ದಿಢೀರ್ ಏರಿದ ಮೃತ್ಯುಂಜಯ ನದಿ; ವಾಹನ ಸೇರಿದಂತೆ ಇಬ್ಬರ ರಕ್ಷಣೆ
ಮಂಗಳೂರು, ಮೇ 26: ಯಾಸ್ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ಅದೇ ರೀತಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿಯೂ ಮಳೆ ಸುರಿಯುತ್ತಿದೆ.
ಈ ಹಿನ್ನಲೆಯಲ್ಲಿ ಮಂಗಳವಾರ (ಮೇ 25)ದಂದು ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮೃತ್ಯುಂಜಯ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿದ್ದು, ಪಿಕಪ್ ವಾಹನ ನದಿ ನೀರಿನಲ್ಲಿ ಮುಳುಗಡೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಘಟನೆ ನಡೆದಿದ್ದು, ಮಂಗಳವಾರ ಸಂಜೆ ಮೃತ್ಯುಂಜಯ ನದಿಯಲ್ಲಿ ನೀರಿನ ಏರಿಕೆ ಉಂಟಾಗಿ ಪಿಕಪ್ ವಾಹನ ನೀರಲ್ಲಿ ಮುಳುಗಿದೆ.
ಬೆಳ್ತಂಗಡಿಯ ಅಳದಂಗಡಿ ಭಾಗದ ಸದಾನಂದ ಎಂಬುವರಿಗೆ ಸೇರಿದ ಪಿಕಪ್ ವಾಹನ ಇದಾಗಿದ್ದು, ಚಿಬಿದ್ರೆಯ ಎಂ.ಕೆ ದಯಾನಂದ ಎಂಬುವರ ಮನೆಗೆ ನದಿ ಹಾದಿಯ ಮೂಲಕ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿದ್ದರು.
ಸಾಮಾಗ್ರಿಗಳನ್ನು ಲೋಡ್ ಮಾಡಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಪಿಕಪ್ ವಾಹನ ನದಿಗೆ ಇಳಿಯುತ್ತಿದ್ದಂತೆ, ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ಈ ವೇಳೆ ದಿಕ್ಕು ತೋಚದಂತಾದ ಪಿಕಪ್ ಚಾಲಕ ಹಾಗೂ ಪಿಕಪ್ನಲ್ಲಿದ್ದ ಇನ್ನೋರ್ವ ಸೈಡ್ ಗ್ಲಾಸ್ ಹಾಕಿ ವಾಹನದ ಒಳಗೆ ಲಾಕ್ ಆಗಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಧಾವಿಸಿ ಇವರಿಬ್ಬರನ್ನು ಅಪಾಯದಿಂದ ಪಾರುಮಾಡಿ, ವಾಹನವನ್ನು ಹಗ್ಗದಿಂದ ಕಟ್ಟಿ ನೀರು ಪಾಲಾಗದಂತೆ ತಡೆದಿದ್ದಾರೆ. ಮುಳುಗಿರುವ ಪಿಕಪ್ನ್ನು ಸ್ಥಳೀಯ ಯುವಕರು ನೀರಿನಿಂದ ಮೇಲಕ್ಕೆತ್ತಿದ್ದಾರೆ.