ದ.ಕ-ಉಡುಪಿಯಲ್ಲಿ ಭಾರೀ ಮಳೆ; ಮುಳುಗಿದ ಕುಕ್ಕೆ ಸ್ನಾನ ಘಟ್ಟ, ಶಾಲಾ ಕಾಲೇಜಿಗೆ ರಜೆ
ಮಂಗಳೂರು, ಜುಲೈ 5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿ ಸಹಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, ಡಿಪ್ಲೋಮಾ,ಐಟಿಐ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಸೇತುವೆಗಳು ಮುಳುಗಡೆ, ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ
ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿಯಿಂದಲೂ ನಿರಂತರ ಮಳೆಯಾಗುತ್ತಿದೆ. ನಗರ ಹೊರವಲಯದ ಕುಲಶೇಖರದಲ್ಲಿ ಬಜ್ಜೋಡಿ ಎಂಬಲ್ಲಿ ವರ್ಕ್ ಶಾಪ್ವೊಂದಕ್ಕೆ ನೀರು ನುಗ್ಗಿದೆ. ರಾತ್ರಿ ಏಕಾಏಕಿ ಮನೆಗೆ ನೀರು ನುಗ್ಗಿದ್ದು ಸಾಮಾಗ್ರಿಗಳನ್ನು ನೀರಿನಿಂದ ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದಾರೆ.
ಮುಳುಗಿದ ಹಡಗಿನಿಂದ ತೈಲ ಸೋರಿಕೆ ಭೀತಿ; ಭಾರೀ ಪ್ರಮಾಣದಲ್ಲಿ ಪರಿಸರ ಹಾನಿ ಆತಂಕ
ನದಿ ಪಾತ್ರದ ಜನರಿಗೆ ಎಚ್ಚರಿಕೆ
ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ, ಮೂಡಬಿದಿರೆ ತಾಲೂಕುಗಳಲ್ಲೂ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಿದೆ.
ಕುಕ್ಕೆ, ಧರ್ಮಸ್ಥಳದಲ್ಲಿ ತೀರ್ಥ ಸ್ನಾನ ನಿಷೇಧ
ಇನ್ನು ಕುಮಾರಾಧಾರಾ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸತತ ಎರಡನೇ ದಿನವೂ ಮುಳುಗಡೆಯಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಭಕ್ತರಿಗೆ ನದಿಗಿಳಿದು ತೀರ್ಥ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಕೇವಲ ನೀರು ಸಂಪ್ರೋಕ್ಷಣೆಗೆ ಅವಕಾಶ ನೀಡಲಾಗಿದೆ. ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆ ಭಕ್ತರಿಗೆ ನದಿಗಿಳಿಯಲು ಅವಕಾಶ ನಿರಾಕರಿಸಲಾಗಿದೆ.
ಮಳೆ ಹೊಡೆತಕ್ಕೆ ಮನೆ ಕುಸಿತ
ಭಾರೀ ಮಳೆಗೆ ವಿವಿಧ ತಾಲೂಕಿನ ತಗ್ಗುಪ್ರದೇಶದ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ, ಸವಣಾಲು, ಗುರಿಕಂಡ, ಶಿರ್ಲಾಲು, ಕರಂಬಾರು ಸೇರಿದಂತೆ ಹಲವು ಭಾಗಗಳ ಅಡಿಕೆ ತೋಟಗಳು ಜಲಾವೃತವಾಗಿದೆ. ಬೆಳ್ತಂಗಡಿಯ ಮಚ್ಚಿನ ಗ್ರಾಮದ ಶಕ್ತಿನಗರ ಎಂಬಲ್ಲಿ ಮಳೆ ಹೊಡೆತಕ್ಕೆ ಮನೆ ಕುಸಿದಿರುವ ಘಟನೆ ನಡೆದಿದೆ.
ಸಂಚಾರ ಬಂದ್, ವಿದ್ಯುತ್ ವ್ಯತ್ಯಯ
ಬೃಹತ್ ಮರ ರಸ್ತೆಗುರುಳಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ಮಂಗಳೂರು ಹೊರವಲಯದ ಮಾಡೂರು ಬಳಿ ನಡೆದಿದೆ. ಇದರಿಂದ ಬೀರಿಯಿಂದ ದೇರಳಕಟ್ಟೆ ಸಂಪರ್ಕಿಸುವ ರಸ್ತೆ ಸಂಚಾರ ಬಂದ್ ಆಗಿದೆ. ವಿದ್ಯುತ್ ಕೇಬಲ್ ಲೈನ್ ಮೇಲೆ ಮರ ಉರುಳಿ ಬಿದ್ದ ಹಿನ್ನಲೆಯಲ್ಲಿ ವಿದ್ಯುತ್ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಸೋಮವಾರ ರಾತ್ರಿಯಿಂದ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು,ಜನ ಮುಂಜಾಗ್ರತೆಯನ್ನು ವಹಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ..
ಇನ್ನು ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
Recommended Video