ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ; ತಡೆಗೋಡೆ ಒಡೆದು ಅಪಾರ ಹಾನಿ
ಮಂಗಳೂರು, ಮೇ 04; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಳೆರಾಯ ಅಬ್ಬರಿಸಿದ್ದಾನೆ. ಜಿಲ್ಲೆಯ ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ ತಾಲೂಕು ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.
ಮಳೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಮತ್ತೆ ಭಾರೀ ಹಾನಿಯಾಗಿದೆ. ನಿರಂತರವಾಗಿ ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಹಳ್ಳ-ಕೊಳ್ಳಗಳೆಲ್ಲಾ ತುಂಬಿದ್ದು, ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿತ್ತು. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಸಂಬೋಳ್ಯ ಎಂಬಲ್ಲಿ ತೋಡಿನ ತಡೆಗೋಡೆ ಒಡೆದು ಮಳೆ ನೀರು ಕೃಷಿ ಭೂಮಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಕರ್ನಾಟಕ ಹವಾಮಾನ ವರದಿ: ಮೇ 6ರವರೆಗೂ ಹಲವು ಜಿಲ್ಲೆಗಳಲ್ಲಿ ಮಳೆ
ರಭಸವಾಗಿ ಸುರಿದ ಮಳೆಗೆ ನೀರು ತುಂಬಿ ತಡೆಗೋಡೆ ಒಡೆದಿದ್ದು, ಅಡಿಕೆ ತೋಟ, ಗದ್ದೆಗಳೆಲ್ಲಾ ಕೆಸರು-ಕಲ್ಲುಗಳಿಂದ ತುಂಬಿ ಹೋಗಿದೆ. ಸಂಬೋಳ್ಯ ನಿವಾಸಿಗಳಾದ ಶಶಿಕಾಂತ್,ದಿನೇಶ್,ಉಮೇಶ್ ಎಂಬುವವರ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ.
ಚಂಡಮಾರುತ ಪ್ರಭಾವ : ಮೇ 6ವರೆಗೂ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮಳೆ
ಇನ್ನುಳಿದಂತೆ ಗಾಳಿ, ಮಳೆಗೆ ಕೇವಲ ಬೆಳ್ತಂಗಡಿ ತಾಲೂಕಿನಲ್ಲಿಯೇ 500 ಕ್ಕೂ ಹೆಚ್ಚು ಅಡಿಕೆ ಮರಗಳು ಧರಾಶಾಹಿಯಾಗಿದೆ. ಕೆಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಧರ್ಮಸ್ಥಳ, ಮುಂಡಾಜೆ, ಚಾರ್ಮಾಡಿ, ಮಲವಂತಿಗೆ, ಗುರುವಾಯನಕೆರೆ, ಪಡಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಭಾರೀ ಮಳೆ ಸುರಿದಿದೆ.
ಸುಳ್ಯ, ಬಂಟ್ವಾಳ ತಾಲೂಕಿನ ಹಲವಡೆಯೂ ಭಾರೀ ಮಳೆಗೆ ಕೃಷಿ ಭೂಮಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಬತ್ತಿ ಹೋಗಿದ್ದ ಹಳ್ಳ, ನದಿಗಳಲ್ಲಿ ಜೀವಕಳೆ ಬಂದಂತಾಗಿದೆ.
Recommended Video