ಮಂಗಳೂರಿನಲ್ಲಿ ಭಾರೀ ಮಳೆ: ಬಸ್, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ
ಮಂಗಳೂರು, ಜೂನ್ 30: ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಭಾರೀ ಅವಾಂತರ ಸೃಷ್ಠಿಸಿದೆ. ಹೆದ್ದಾರಿ ಮಳೆ ನೀರಿನಿಂದ ಆವೃತ್ತವಾದರೆ, ರೈಲ್ವೇ ಹಳಿಯ ಮೇಲೆ ಗುಡ್ಡ ಕುಸಿತವಾಗಿದೆ. ಇನ್ನು ವಿಮಾನಯಾನ ಸಂಚಾರದಲ್ಲೂ ಸಮಯ ಬದಲಾವಣೆಯಾಗಿದೆ.
ಬುಧವಾರ ರಾತ್ರಿಯಿಂದ ಮಳೆ ಸುರಿಯುತ್ತಿದ್ದು ನಗರದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಜನರು ಪರದಾಡಿದ್ದಾರೆ. ರೈಲು ಹಳಿಯ ಮೇಲೆ ಅಲ್ಪ ಪ್ರಮಾಣದ ಮಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ತಕ್ಷಣದಿಂದಲೇ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ದುರಸ್ತಿ ಕಾಮಗಾರಿ ಮುಗಿದ ತಕ್ಷಣ ಮತ್ತೆ ರೈಲು ಸಂಚಾರ ಸೇವೆ ಎಂದಿನಂತೆ ನಡೆಯಲಿದೆ.
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲಾ-ಕಾಲೇಜುಗಳ ರಜೆ ಘೋಷಿಸಿದ ಡಿಸಿ
ಪಡೀಲು ಮತ್ತು ಮಂಗಳೂರು ಜಂಕ್ಷನ್ ವಿಭಾಗದ ನಡುವೆ (181/ 200 ಕಿ.ಮೀ.) ಬೆಳಗ್ಗೆ 9 ಗಂಟೆ ಸುಮಾರಿಗೆ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮ ಇಂದು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ರೈಲು ನಂ.06488 ಸುಬ್ರಹ್ಮಣ್ಯ ರಸ್ತೆ - ಮಂಗಳೂರು ಸೆಂಟ್ರಲ್ ಅನ್ ರಿಸರ್ವ್ಡ್ ಎಕ್ಸ್ಪ್ರೆಸ್ ವಿಶೇಷ ಸಂಚಾರ ಇಂದು ರದ್ದುಗೊಂಡಿದೆ. ಅದೇ ರೀತಿ ರೈಲು ಸಂಖ್ಯೆ.06489 ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಕಾಯ್ದಿರಿಸದ ಎಕ್ಸ್ಪ್ರೆಸ್ ವಿಶೇಷ ಸೇವೆಯನ್ನು ಇಂದು ರದ್ದುಗೊಳಿಸಲಾಗಿದೆ.
ಕರ್ನಾಟಕದಲ್ಲಿ ಜುಲೈ 1ರವರೆಗೆ ಭಾರೀ ಮಳೆ ಮುನ್ಸೂಚನೆ
ನೀರಿನ ಮಧ್ಯೆ ವಾಹನ ಸವಾರರ ಪರದಾಟ
ನಗರದ ಕೊಟ್ಟಾರ - ಚೌಕಿ ಪ್ರದೇಶದ ರಸ್ತೆಯಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದ್ದು, ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗದೆ ಜನತೆ ತೊಂದರೆ ಅನುಭವಿಸುವಂತಾಯಿತು. ಎಲ್ಲೆಡೆ ಜಲಮಯವಾಗಿದ್ದು ಅಂಗಡಿಗಳೊಳಗೆ ನೀರು ನುಗ್ಗಿದೆ. ಅಲ್ಲದೆ ಯಾವುದೇ ಅಂಗಡಿಗಳನ್ನು ತೆರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಪಡೀಲು ಪ್ರದೇಶವೂ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ನೀರಿನ ಮಧ್ಯೆಯೇ ಪರದಾಡುತ್ತಾ ಸವಾರಿ ಮಾಡುವ ದೃಶ್ಯ ಕಂಡು ಬಂದಿದೆ. ನಂತೂರುವಿನಿಂದ ಪಡೀಲು ಮಧ್ಯೆ ಮರೋಳಿಯ ಹೆದ್ದಾರಿಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿ
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ವ್ಯಾಪ್ತಿಯಲ್ಲಿ ಈಗಾಗಲೆ ಶಾಲೆಗಳಿಗೆ ಬಂದಿರುವ ಮಕ್ಕಳನ್ನು ಎಲ್ಲಾ ಮುಂಜಾಗೃತೆವಹಿಸಿ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಇನ್ನು ಶಾಲೆಗೆ ಬರಲು ಅನಾನುಕುಲವಾದ ಪ್ರದೇಶದ ಮಕ್ಕಳಿಗೆ ಈ ದಿನ ರಜೆ ಘೋಷಿಸಲಾಗಿದೆ. ಶಾಲೆಗಳಿಗಲ್ಲದೆ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತ
ಭಾರೀ ಮಳೆಗೆ ಮಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಮರವೂರು ಸೇತುವೆ ಬಳಿಯ ರಸ್ತೆಯು ಕುಸಿತಗೊಂಡಿದೆ. ಸೇತುವೆಯ ಪಕ್ಕದಲ್ಲಿ ರಸ್ತೆಯ ಬದಿಯು ಕುಸಿತಗೊಂಡು ಹೊಂಡಮಯವಾಗಿದೆ. ಮರವೂರು ಸೇತುವೆಯ ರಸ್ತೆಯು ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇತ್ತೀಚೆಗೆ ಸೇತುವೆ ಅಲ್ಪಪ್ರಮಾಣದಲ್ಲಿ ಕುಸಿತ ಕಂಡು ಜನತೆ ಭೀತಿಗೊಳಗಾಗಿದ್ದರು. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ವಾಹನ ಸಂಚಾರ, ಜನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ದುರಸ್ತಿ ಬಳಿಕ ಮತ್ತೆ ಸೇತುವೆಯ ಮೇಲಿನಿಂದ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಇದೀಗ ಮಳೆಗೆ ಸೇತುವೆಯ ಪಕ್ಕದಲ್ಲಿರುವ ರಸ್ತೆಯ ಬದಿ ಸಂಪೂರ್ಣ ಬಾಯಿತೆರೆದು ನಿಂತಿದೆ. ತಕ್ಷಣ ಸ್ಥಳಕ್ಕೆ ಪಿಡಬ್ಲ್ಯುಡಿ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಧಿಕಾರಿಗಳು ದುರಸ್ತಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ.
ಮುಲ್ಕಿ ಪಟ್ಟಣ ವ್ಯಾಪ್ತಿಯಲ್ಲಿ ವ್ಯಕ್ತಿ ಸಾವು
ಆಯತಪ್ಪಿ ಚರಂಡಿಗೆ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯ ಕೊಲ್ನಾಡು ಎಂಬಲ್ಲಿ ನಡೆದಿದೆ. ಕೊಲ್ನಾಡು ನಿವಾಸಿ ಸುನೀಲ್(46) ಮೃತಪಟ್ಟ ವ್ಯಕ್ತಿ. ಬುಧವಾರ ರಾತ್ರಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರಿ ವೇಳೆ ಆಯತಪ್ಪಿ ಚರಂಡಿಗೆ ಬಿದ್ದಿರುವ ಸಾಧ್ಯತೆಗಳಿವೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಮಾನಯಾನದಲ್ಲಿ ವಿಳಂಬ
ಬೆಂಗಳೂರು, ಹೈದರಾಬಾದ್ ನಿಂದ ಆಗಮಿಸುವ ವಿಮಾನಗಳು ತಡವಾಗಿ ಬಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಬೆಂಗಳೂರಿನಿಂದ ಟೇಕ್ ಆಫ್ ಆಗಿರುವ ಈ ವಿಮಾನವು 16 ನಿಮಿಷ ತಡವಾಗಿ ಲ್ಯಾಂಡ್ ಆಗಿದೆ. ಹೈದರಾಬಾದ್ ನಿಂದ ಆಗಮಿಸಿರುವ ವಿಮಾನವು 7 ನಿಮಿಷ ವಿಳಂಬವಾಗಿ ಲ್ಯಾಂಡ್ ಆಗಿದೆ. ಮಂಗಳೂರಿನಿಂದ ಕೋಲ್ಕತ್ತಾಗೆ ತೆರಳುವ ವಿಮಾನ 50 ನಿಮಿಷ ತಡವಾಗಿ ಟೇಕ್ ಆಫ್ ಆಗಿದೆ.
Recommended Video