ಕರಾವಳಿಯಲ್ಲಿ ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್
ಮಂಗಳೂರು, ಆಗಸ್ಟ್ 09: ಕೊಂಚ ವಿರಾಮ ಪಡೆದಿದ್ದ ವರುಣ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಹವಾಮಾನ ಬದಲಾಗಿ ಮತ್ತೆ ಮಳೆ ಬಿರುಸುಗೊಂಡಿದೆ.
ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯಾ, ಶಿರಾಡಿ, ಸುಬ್ರಹ್ಮಣ್ಯ ಸೇರಿದಂತೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಮಲೆನಾಡಿನಲ್ಲಿ ಆಶ್ಲೇಷ ಮಳೆಯ ಅಬ್ಬರ: ಮುಳುಗಿದ ಹೆಬ್ಬಾಳೆ ಸೇತುವೆ
ಗುಂಡ್ಯ ಸಮೀಪದ ಉದನೆ ಎಂಬಲ್ಲಿ ಹೊಳೆ ತುಂಬಿ ಹರಿದಿದ್ದು, ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿನಿಂದ ಹರಿದಿದೆ. ಹೀಗಾಗಿ ಹೆದ್ದಾರಿ ಸಂಪರ್ಕ ಬಂದ್ ಮಾಡಲಾಗಿದ್ದು, ಇಕ್ಕೆಲಗಳಲ್ಲಿ ವಾಹನಗಳು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಿವೆ.
ಇನ್ನು ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ನೆರೆಯಿಂದ ಮುಳುಗಡೆಯಾಗಿದೆ.
ಬೆಳ್ತಂಗಡಿ , ಸುಳ್ಯ ಭಾಗದಲ್ಲಿ ಹಲವೆಡೆ ಕೃಷಿ ಜಮೀನಿಗೆ ಮಳೆ ನೀರು ನುಗ್ಗಿದ್ದು, ಗ್ರಾಮೀಣ ಭಾಗದ ಮನೆಗಳನ್ನು ಕೂಡ ನೆರೆ ನೀರು ಆವರಿಸಿದೆ. ಇನ್ನು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆ ಕಳೆದ 24 ಗಂಟೆಯಿಂದ ಮುಳುಗಡೆಯಾಗಿದೆ.
ಗುಂಡ್ಯಾ ಸಮೀಪದ ಪರಿಶಿಷ್ಟರ ಕಾಲನಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟ ಪಡುವಂತಾಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.
ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಶ್ರೀ ಕ್ಷೇತ್ರದ ಸ್ನಾನ ಘಟ್ಟ ಮುಳುಗಡೆಯಾಗಿ ಯಾತ್ರಿಕರು ಸಂಕಷ್ಟ ಪಡುವಂತಾಗಿದೆ. ಅದಲ್ಲದೇ ಮಂಗಳೂರು , ಸುರತ್ಕಲ್, ಕಾಪು, ಮುಲ್ಕಿ , ವೇಣೂರು, ನಾರಾವಿ ಭಾಗದಲ್ಲೂ ಕಳೆದ ರಾತ್ರಿಯಿಂದ ಮಳೆಸುರಿಯುತ್ತಿದೆ.
ಮುಂಬರುವ 2 ದಿನ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿಯಲ್ಲಿ 35 ರಿಂದ 35 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದ್ದು , ಸಮುದ್ರದಲ್ಲಿ ಭಾರೀ ಅಲೆಗಳ ಅಬ್ಬರ ಹೆಚ್ಚಾಗಲಿದ್ದು ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.