ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲಾ-ಕಾಲೇಜುಗಳ ರಜೆ ಘೋಷಿಸಿದ ಡಿಸಿ
ಮಂಗಳೂರು ಜೂ.30: ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲಾಡಳಿತ ಗುರುವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದೆ.
ಮಂಗಳೂರು, ಬೆಳ್ತಂಗಡಿ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 24ಗಂಟೆಯಿಂದಲೂ ನಿರಂತರವಾಗಿ ಗುಡುಗು, ಮಿಂಚು, ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಲೇ ಇದೆ. ಇದರಿಂದ ಮಕ್ಕಳ ಸಂಚಾರಕ್ಕೆ ತೊಂದರೆ ಆಗುವ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಜೆ ಘೋಷಿಸಿದ್ದಾರೆ.
ದೆಹಲಿಯಲ್ಲಿಂದು ಮುಂಗಾರು ಮಳೆ: ಆರೆಂಜ್ ಅಲರ್ಟ್ ಜಾರಿ
ಶುಕ್ರವಾರದ ಪರಿಸ್ಥಿತಿ ನೋಡಿಕೊಂಡು ಶಾಲೆ, ಕಾಲೇಜುಗಳ ರಜೆ ಮುಂದುವರೆಸುವ ಕುರಿತು ನಿರ್ಧರಿಸಲಾಗುವುದು. ಈಗಾಗಲೇ ಜಿಲ್ಲೆ ಹಲವು ಶಾಲೆಗಳಿಗೆ ಮತ್ತು ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ಮಕ್ಕಳು ತೆರಳಿದ್ದಾರೆ. ಮಳೆ ಕಾರಣಕ್ಕೆ ಅವರ ತರಗತಿ ನಿಲ್ಲಿಸುವುದು ಬೇಡ. ಅಗತ್ಯ ಮುಂಜಾಗ್ರತೆ ವಹಿಸಿ ಶಾಲೆ ನಡೆಸಿ ಎಂದು ಈಗಾಗಲೇ ಆರಂಭವಾದ ಶಾಲೆಗಳ ಶಿಕ್ಷಕರಿಗೆ ಜಿಲ್ಲಾಧಿಕಾರಿಗಳು ಧೈರ್ಯ ತುಂಬಿದ್ದಾರೆ ಎಂದು ತಿಳಿದು ಬಂದಿದೆ.
30ನಿಮಿಷದಲ್ಲಿ 6ಸೆಂ.ಮೀ.ಮಳೆ ದಾಖಲು
ದಕ್ಷಿಣ ಕನ್ನಡ ಜಿಲ್ಲೆಯ ಪಾವೂರಿನಲ್ಲಿ ಗುರುವಾರ ಬೆಳಗ್ಗೆ 8.30ರಿಂದ 9ಗಂಟೆ ಅವಧಿಯಲ್ಲಿ ಕೇವಲ ಅರ್ಧ ಗಂಟೆಯಲ್ಲಿ 6ಸೆಂ.ಮೀ. ಮಳೆ ದಾಖಲಾಗಿದೆ. ಬುಧವಾರದಿಂದ ಗುರುವಾರ ಬೆಳಗ್ಗೆ 8.30ರ ವೇಳೆಗೆ ಉಡುಪಿ ಜಿಲ್ಲೆಯ ನಾಡಾದಲ್ಲಿ 24.8ಸೆಂ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಮಾವಳ್ಳಿಯಲ್ಲಿ 21ಸೆಂ.ಮೀ ಅಧಿಕ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜನ ಜೀವನ ಅಸ್ತವೆಸ್ತ:
ಕಳೆದ ಒಂದು ವಾರದಿಂದ ಕರಾವಳಿ ಭಾಗದಲ್ಲಿ ಮುಂಗಾರು ಮಾರುತಗಳು ಚುರುಕಾಗಿವೆ. ಅದರಲ್ಲೂ ಕಳೆದ ಎರಡು ದಿನದಿಂದ ದಕ್ಷಿಣ ಕನ್ನಡ ಭಾಗದಲ್ಲಿ ಮಳೆ ಕ್ರಮೇಣ ಹೆಚ್ಚಾಗಿದೆ. ಇದರಿಂದ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪರಿಸ್ಥಿತಿ, ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಗಿದೆ.
ನಗರದ ಕೆಲವು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ಒಳಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿದಿದೆ. ಕೊಟ್ಟಾರ ಚೌಕಿ, ಪಡೀಲ್ ರೈಲು ಸೇತುವೆ ಇನ್ನಿತರ ಕಡೆಗಳಲ್ಲಿ ನೀರು ನಿಂತ ಕಾರಣ ಮಂಗಳೂರಿನಿಂದ ಬೆಂಗಳೂರು ರಸ್ತೆ, ವಿಮಾಣ ನಿಲ್ದಾಣ ರಸ್ತೆ, ಉಡುಪಿ ರಸ್ತೆಗಳಲ್ಲಿನ ಸಂಚಾರ ಅಸ್ತವೆಸ್ತವಾಯಿತು. ಕಿಲೋ ಮೀಟರ್ ಗಟ್ಟಲೇ ವಾಹನಗಳು ನಿಂತ ಪರಿಣಾಮ ಸವಾರರು ಪರದಾಡಿದರು.
ಕರ್ನಾಟಕದಲ್ಲಿ ಜುಲೈ 1ರವರೆಗೆ ಭಾರೀ ಮಳೆ ಮುನ್ಸೂಚನೆ
ಕೊಚ್ಚಿಹೋದ ರಸ್ತೆ:
ಮಂಗಳೂರು ನಗರ ಭಾಗದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ಮರವೂರು ಸೇತುವೆಯ ಮೇಲ್ಭಾದ ರಸ್ತೆ ಮಳೆ ಹೊಡೆತಕ್ಕೆ ಕೊಚ್ಚಿಹೋಗಿದೆ. ಸೇತುವೆ ಮೇಲಿನ ರಸ್ತೆ ಅಲ್ಲಲ್ಲಿ ಹಾಳಾಗಿದ್ದರಿಂದ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೇತುವೆಗೆ ಯಾವುದೇ ತೊಂದರೆ ಆಗಿಲ್ಲ. ಸ್ವಲ್ಪ ರಸ್ತೆ ಹಾಳಾಗಿದೆ. ಸಂಚಾರಕ್ಕೆ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕರಾವಳಿಗೆ ಜು.4ರವರೆಗೆ ಭಾರಿ ಮಳೆ ನಿರೀಕ್ಷೆ :
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂದಿನ ನಾಲ್ಕು ದಿನ ಮುಂದುವರಿಯಲಿದೆ. ಕರಾವಳಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಜೋರು ಮಳೆ ಬೀಳಲಿರುವ ಕಾರಣಕ್ಕೆ ಶುಕ್ರವಾರ ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಗುರುವಾರವು ಆರೆಂಜ್ ಅಲರ್ಟ್ ಇದೆ. ಶನಿವಾರದಿಂದ ಮೂರು ದಿನ ಮಳೆ ಆರ್ಭಟ ತುಸು ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮೂರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.