ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ಮೊಮ್ಮಕ್ಕಳ ಅಪ್ಪಿ ಹಿಡಿದು ಅಜ್ಜಿಯ ಅಭಯ
ಮಂಗಳೂರು, ಸೆಪ್ಟೆಂಬರ್ 20: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ದಕ್ಷಿಣ ಕನ್ನಡ- ಉಡುಪಿ ಗಡಿ ಭಾಗದಲ್ಲೇ ಮಳೆ ಅಬ್ಬರ ಜೋರಾಗಿದೆ.
ದಕ್ಷಿಣ ಜಿಲ್ಲೆಯ ಮುಲ್ಕಿ ಹೋಬಳಿಯಲ್ಲಿ ಕೃತಕ ನೆರೆ ಉಂಟಾಗಿದ್ದು, ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಗ್ರಾಮೀಣ ಭಾಗದ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು, ಕಿನ್ನಿಗೋಳಿಯಲ್ಲಿ ಗ್ರಾಮ ಸಂಪರ್ಕಿಸುವ ಸೇತುವೆ ಸಂಪರ್ಕ ಕಡಿತಗೊಂಡಿದೆ.
ಭಾರಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಕೃಷ್ಣನಗರಿ: 4 ದಶಕಗಳ ಬಳಿಕ ಪ್ರವಾಹ
ಶಾಂಭವಿ ನದಿ ಹಾಗೂ ಜಿಲ್ಲೆಯ ತೊರೆಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದ ಜನರು ಮನೆಯಿಂದ ಹೊರಬರುತ್ತಿಲ್ಲ.
ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಪರಿಸರದಲ್ಲಿ ಮಳೆ ಆರ್ಭಟ ಜೋರಾಗಿರುವ ಹಿನ್ನಲೆಯಲ್ಲಿ, ಜಲಾವೃತ ಮನೆಯಿಂದ ನಾಡದೋಣಿ ಬಳಸಿ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ. ಮುಲ್ಕಿ ಮಟ್ಟುವಿನಲ್ಲಿ ಅಗ್ನಿಶಾಮಕ ದಳ, ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಎರಡು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಿದ್ದಾರೆ.
ಇದೇ ವೇಳೆ ನೆರೆ ನೀರಲ್ಲೂ ಅಜ್ಜಿಯ ಮಮತೆ ಕಂಡು ಬಂದಿದ್ದು, ಮಳೆ ನಡುವೆಯೂ ತನ್ನ ಮೊಮ್ಮಕ್ಕಳನ್ನು ತಬ್ಬಿಕೊಂಡು ಮಳೆಯಿಂದ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಅಜ್ಜಿಯ ಮಮತೆಯ ಅಭಯವು ರಕ್ಷಣಾ ಕಾರ್ಯಾಚರಣೆ ವೇಳೆ ಕಂಡುಬಂದಿದೆ.
ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಚದುರಿದಂತೆ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆಯಾಗಲಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆಯಾಗುವ ಸಾಧ್ಯತೆಯಿದೆ.