ಸಹಜ ಸ್ಥಿತಿಗೆ ಮರಳಿದ ದಕ್ಷಿಣ ಕನ್ನಡ ಜಿಲ್ಲೆ, ಎಲ್ಲಾ ನಿರ್ಬಂಧಗಳ ತೆರವು
ಮಂಗಳೂರು, ಆಗಸ್ಟ್, 08: ಕೋಮು, ಗಲಭೆ ವಿಚಾರವಾಗಿ ಕಳೆದ ಎರಡು ವಾರಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ದಕ್ಷಿಣ ಕನ್ನಡ ಜಿಲ್ಲೆ ಸದ್ಯ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜುಲೈ 29ರಿಂದ ಆಗಸ್ಟ್ 7ರವರೆಗೆ ಇದ್ದ ಅಘೋಷಿತ ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿಯಮಗಳನ್ನ ಜಿಲ್ಲಾಡಳಿತ ಹಿಂಪಡೆದಿದೆ. ಜನರ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನೂ ರದ್ದುಗೊಳಿಸಿದೆ.
ಸದ್ಯ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು, ಮದ್ಯದ ಅಂಗಡಿ ಮತ್ತು ರಾತ್ರಿ ವಾಹನ ಸಂಚಾರ ಯಥಾ ಸ್ಥಿತಿಯಲ್ಲಿ ಮುಂದುವರೆಯಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ಜಿ ಅವರು ಸೂಚಿಸಿದರು.
ಆದರೆ, ಜಿಲ್ಲೆಯಲ್ಲಿ 144 ಸೆಕ್ಷನ್ ಆಗಸ್ಟ್ 14ರ ತನಕ ಮುಂದುವರಿಸಿ ಆದೇಶವನ್ನು ನೀಡಿದ್ದಾರೆ. ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾದ ಎರಡು ದಿನಗಳ ಬಳಿಕ ಸುರತ್ಕಲ್ನಲ್ಲಿ ಫಾಸಿಲ್ ಎಂಬ ಯುವಕನ ಹತ್ಯೆಯಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟುಮಾಡುವ ಸೂಚನೆ ರಾಜ್ಯ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಗುಪ್ತಚರ ಇಲಾಖೆಯ ಸೂಚನೆಯ ಪ್ರಕಾರವಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಜಿಲ್ಲೆಯಲ್ಲಿ ಪ್ರಾರಂಭಿಕ ಹಂತದಲ್ಲಿ ನಿರ್ಬಂಧನೆಗಳನ್ನು ಹೊರಡಿಸಿದ್ದರು. ಸಂಪೂರ್ಣ ಮದ್ಯ ಮಾರಾಟ ನಿಷೇಧ ಮತ್ತು ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅಂಗಡಿ ಮುಂಗಟ್ಟುಗಳಿಗೆ ಬೀಗ, ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು.
ಆಗಸ್ಟ್ 5ರ ನಂತರ ಈ ನಿರ್ಬಂಧವನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದರು. ಮದ್ಯದ ಅಂಗಡಿಗಳು ಸಂಜೆ 6 ಗಂಟೆಯ ತನಕ ತೆರೆದಿರಬಹುದು ಎಂಬ ಆದೇಶವನ್ನು ಮಾಡಿದ್ದರು. ಆದರೆ, ಸದ್ಯ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಸಹಜ ಸ್ಥಿತಿಗೆ ಬರುತ್ತಿದ್ದು, ಜಿಲ್ಲೆಯ ಜನರ ಮೇಲೆ ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ರದ್ದುಗೊಳಿಸಿದ್ದಾರೆ.