ತಡರಾತ್ರಿ ಭಾರೀ ಮಳೆ; ಧರ್ಮಸ್ಥಳ ಯಾತ್ರಾರ್ಥಿಗಳ ಪರದಾಟ
ಮಂಗಳೂರು, ಅಕ್ಟೋಬರ್ 17; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಕ್ಷರಶಃ ಅಬ್ಬರಿಸಿ ಬೊಬ್ಬೆರೆದಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಿದೆ. ಭಾರೀ ಮಳೆಗೆ ಮಂಗಳೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಮಂಗಳೂರು ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಭಾರೀ ಮಳೆಯಾಗಿದೆ. ಮಳೆಯ ಹಿನ್ನಲೆಯಲ್ಲಿ ನದಿಗಳು ಉಕ್ಕೇರಿದ್ದು, ನೀರು ರಸ್ತೆಯಲ್ಲಿ ಹರಿದು ಕೆಲ ಕಾಲ ಸಂಚಾರಕ್ಕೆ ತೊಂದರೆಯಾಗಿದೆ.
ಮುಂದಿನ 2 ದಿನ ರಾಜ್ಯದ 16 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಉಜಿರೆಯಿಂದ ಧರ್ಮಸ್ಥಳವನ್ನು ಸಂಪರ್ಕಿಸುವ ರಸ್ತೆಯ ಶಾಂತಿವನದ ಬಳಿ ಮಣ್ಣಸಂಕ ಎಂಬಲ್ಲಿ ನದಿ ನೀರು ರಸ್ತೆಗೆ ಬಂದು ಅವಾಂತರ ಸೃಷ್ಠಿಯಾಗಿದೆ. ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಹರಿದಿದ್ದು ವಾಹನ ಸಂಚಾರ ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ಸ್ಥಗಿತವಾಗಿತ್ತು.
ಅ.17ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆ, ಆರೆಂಜ್ ಅಲರ್ಟ್ ಘೋಷಣೆ
ವಾರಾಂತ್ಯ ಆಗಿರುವ ಕಾರಣ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ನದಿ ನೀರು ರಸ್ತೆ ಸೇರಿದ ಕಾರಣ ಜನ ತೊಂದರೆಗೊಳಗಾದರು. ಸುಮಾರು ಎರಡು ಕಿ. ಮೀ. ದೂರ ವಾಹನಗಳ ಸಾಲುಗಟ್ಟಿ ನಿಂತಿತ್ತು. ಭಾರೀ ಮಳೆಗೆ ಜನ ಹೈರಾಣಾದರು.
ಮತ್ತೆ ವಾಯುಭಾರ ಕುಸಿತ; ಅಕ್ಟೋಬರ್ 17ರ ತನಕ ಮಳೆ
ನದಿಯ ನೀರು ಸ್ವಲ್ಪ ಕಡಿಮೆಯಾದ ಬಳಿಕ ಸ್ಥಳೀಯರ ಸಹಕಾರದಿಂದ ವಾಹನ ಸಂಚಾರವನ್ನು ಆರಂಭಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು, ಮಿಂಚಿನ ಸಹಿತ ಭಾರೀ ಮಳೆಯಾಗಿದೆ. ಈ ಮಳೆ ಕೃಷಿಕರನ್ನು ಕಂಗೆಡೆಸಿದೆ.
ತಗ್ಗು ಪ್ರದೇಶದ ಹಲವು ಅಡಿಕೆ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಅಡಿಕೆ ಹಣ್ಣಾಗಿ ಮರದಿಂದ ಉದುರುವ ಸಮಯ ಇದಾಗಿತ್ತು, ಮಳೆನೀರು ತೋಟಗಳಿಗೆ ನುಗ್ಗಿ ಅಡಿಕೆಗಳೆಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಇನ್ನು ಭತ್ತದ ಬೆಳೆಗೂ ಮಳೆ ಸಂಚಕಾರ ತಂದಿದೆ. ಭತ್ತದ ಪೈರು ಬೆಳೆದು ಕಟಾವಿಗೆ ಬರುವ ಹೊತ್ತಿನಲ್ಲೇ ಮಳೆ ಧಾರಾಕಾರವಾಗಿ ಸುರಿದು ಪೈರುಗಳೆಲ್ಲಾ ಧರೆಗುರುಳಿದೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಮಳೆ ಬರುವುದು ಸಾಮಾನ್ಯವಾದರೂ, ಈ ಬಾರಿ ಭಾರೀ ಮಳೆಯಾಗಿದ್ದು, ಅಪಾರ ಹಾನಿಯಾಗಿದೆ.
ನಗರದಲ್ಲೂ ಅವಾಂತರ; ಇನ್ನು ಮಂಗಳೂರು ನಗರದಲ್ಲೂ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ನೀರು ರಾಜಕಾಲುವೆಗಳನ್ನು ಸೇರಿ, ಕಾಲುವೆ ತುಂಬಿ ಹರಿದಿದೆ. ಈ ಹಿನ್ನಲೆಯಲ್ಲಿ ಮಂಗಳೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಮಂಗಳೂರಿನ ತಗ್ಗು ಪ್ರದೇಶಗಳಾದ ಕುದ್ರೋಳಿ, ಮಣ್ಣಗುಡ್ಡೆ ಪ್ರದೇಶದ ಕೆಲವು ಭಾಗಗಳಿಗೆ ನೀರು ನುಗ್ಗಿದೆ. ಕುದ್ರೋಳಿಯ ಗುಜರಾತಿ ಸ್ಕೂಲ್ ವಠಾರಕ್ಕೆ ನೀರು ನುಗ್ಗಿ ನಿಲ್ಲಿಸಲಾಗಿದ್ದ ಕಾರು, ಬೈಕ್ ಅರ್ಧದಷ್ಟು ಮುಳುಗಿತ್ತು. ಇನ್ನು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾರ್ಕಿಂಗ್ ಏರಿಯಾದಲ್ಲೂ ಮಳೆ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.
ಎರಡು ಗಂಟೆಗಳ ಕಾಲ ನಿರಂತರ ವಾಗಿ ಮಳೆ ಸುರಿದ ಕಾರಣ ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿದೆ. ಅಕ್ಟೋಬರ್18ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕೇರಳ ಭಾಗದಲ್ಲಿ ಊಂಟಾದ ವಾಯುಭಾರ ಕುಸಿತದ ನೇರ ಪರಿಣಾಮದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ.
ಚಂಡಮಾರುತದ ಪರಿಣಾಮ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಸಹ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.