ಬೀದಿಗೆ ಬಿದ್ದ ಹಿರಿಯ ಯಕ್ಷ ಜೀವಕ್ಕೆ ಆಸರೆಯಾದ ಪಟ್ಲ ಸತೀಶ್ ಶೆಟ್ಟಿ
ಮಂಗಳೂರು, ಆಗಸ್ಟ್ 22: ಯಕ್ಷಗಾನ ಮೇಳಗಳಲ್ಲಿ ಗೆಜ್ಜೆ ಕಟ್ಟಿ ಕುಣಿದು ಯಕ್ಷ ರಂಗದಲ್ಲಿ ಮೆರೆದ ಕಲಾವಿದ ಈಗ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಟಾರ್ಪಲ್ ಡೇರೆ ಕೆಳಗೆ ಆಶ್ರಯ ಪಡೆಯುತ್ತಿರುವ ಕರುಣಾಜನಕ ಕಥೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ .
ಕಟೀಲು ಮೇಳ, ಸುಂಕದ ಕಟ್ಟೆ ಮೇಳ ಮತ್ತು ಬೆಳ್ಮಣ್ ಮೇಳೆ ಹೀಗೆ ವಿವಿಧ ಮೇಳಗಳಲ್ಲಿ ಇಪ್ಪತ್ತ್ನಾಲ್ಕು ವರ್ಷ ತಿರುಗಾಟ ನಡೆಸಿದ ಯಕ್ಷಗಾನ ಕಲಾವಿದ ಪುರಂದರ್ ರಸ್ತೆ ಬದಿಯಲ್ಲಿ ದಿನ ದೂಡುತ್ತಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ 58 ವರ್ಷ ಪ್ರಾಯದ ಪುರಂದರ್ ಅವರಿಗೆ ಕಲಾ ಸೇವೆ ಮಾಡುವ ಸಂದರ್ಭದಲ್ಲಿ ಅತೀವ ಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದ ಗೆಜ್ಜೆ ಕಟ್ಟಲಾಗದೆ ಅತ್ತ ಬೇರೆ ಯಾವುದೇ ಉದ್ಯೋಗವೂ ಮಾಡಲಾಗದೆ ಇದೀಗ ಮಂಗಳೂರಿನ ಕುಂಜತ್ತಬೈಲ್ ನಲ್ಲಿ ಪ್ಲಾಸ್ಟಿಕ್ ಟರ್ಪಾಲ್ ಹೊದೆಸಿದ ಡೇರಿಯಲ್ಲಿ ದಿನ ದೂಡುತ್ತಿದ್ದಾರೆ.
ಅವರ ಅಕ್ಕ ಶಶಿಕಲ ಕೂಡ ಇದೇ ಡೇರೆಯಲ್ಲಿ ಪುರಂದರ ಅವರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮೊದಲು ಬಾಡಿಗೆ ಮನೆಯಲ್ಲಿದ್ದ ಇವರು ಬಾಡಿಗೆ ಕಟ್ಟಲು ಸಾಧ್ಯವಾಗದೆ ಬೀದಿಗೆ ತಳ್ಳಲ್ಪಟ್ಟರು. ಇದೀಗ ಅಲ್ಲಿ ಇಲ್ಲಿ ಮನೆಗಳಲ್ಲಿ ಮುಸುರೆ ತಿಕ್ಕಿ ಶಶಿಕಲಾ ಅಣ್ಣನ ತುತ್ತಿಗೂ ಆಸರೆಯಾಗಿದ್ದಾರೆ.
ಈ ಜೋಪಡಿಯಲ್ಲಿ ಯಾವುದೆ ಮೂಲಭೂತ ಸೌಕರ್ಯಗಳಿಲ್ಲದೇ, ಯಕ್ಷರಂಗದ ಮೇರು ಕಲಾವಿದನೊಬ್ಬ ಜೀವನ ಸಾಗಿಸುವುದು ನೋಡಿದಾಗ ಕಟುಕನಿಗೂ ಮನಸ್ಸು ಕರಗುತ್ತದೆ.
ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಈ ಬಗ್ಗೆ ತಮ್ಮ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಪದಾಧಿಕಾರಿಗಳಲ್ಲಿ ಚರ್ಚಿಸಿ ಟ್ರಸ್ಟ್ ವತಿಯಿಂದ ಮನೆ ನಿರ್ಮಿಸಿಕೊಡುವುದೆಂದು ನಿರ್ಧರಿಸಿದ್ದಾರೆ.
ನಂತರ ಮನೆ ಪರಿಶೀಲನೆಗಾಗಿ ಕೋರ್ ಕಮಿಟಿ ಸದಸ್ಯರೊಂದಿಗೆ ಕುಂಜತ್ತಬೈಲಿನಲ್ಲಿರುವ ಪುರಂದರ ಅವರ ಡೇರೆ ಮನೆಗೆ ಭೇಟಿ ನೀಡಿದ್ದರು.
"ಪರಿಸ್ಥಿತಿ ಅವಲೋಕಿಸಿದಾಗ ಪುರಂದರ ಅವರು ಈಗ ಇರುವ ಜಾಗ ಸರ್ಕಾರಿ ಭೂಮಿಯಾಗಿದ್ದು ಖಾಸಗಿಯವರ ಒಡೆತನಕ್ಕೆ ಒಳಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಮನೆ ನಿರ್ಮಾಣ ಮಾಡಿಕೊಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ದಾನಿಗಳು ಸಂಕಷ್ಟದಲ್ಲಿರುವ ಅಶಕ್ತ ಕಲಾವಿದನಿಗೆ ಸೂರು ಒದಗಿಸಲು ಭೂಮಿ ನೀಡಿದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತವಾಗಿ ಮನೆ ನಿರ್ಮಿಸಿ ಕೊಡಲಾಗುವುದು," ಎಂದು ಪಟ್ಲ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.