ಮಂಗಳೂರಲ್ಲಿ “ಸ್ನೇಹಾಲಯ ಮಾನ್ನಾ” ಕಾರ್ಯಕ್ರಮ ಉದ್ಘಾಟನೆ.
ಮಂಗಳೂರು, ಆಗಸ್ಟ್, 17 : ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಪಾಲನಾ ಸಮಿತಿ ವತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳ ಸಹಾಯಕರಿಗೆ ಮಧ್ಯಾಹ್ನ ಉಚಿತ ಊಟದ 'ಸ್ನೇಹಾಲಯ ಮಾನ್ನಾ' ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಖಾದರ್ ಅವರು ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳ ಸಹಾಯಕರ ಅನುಕೂಲಕ್ಕಾಗಿ ಆಶ್ರಯ ಕೊಠಡಿ ಹಾಗೂ ಗ್ರಂಥಾಲಯ ಒದಗಿಸುವ ನೀತಿಯನ್ನು ಜಾರಿಗೊಳಿಸಿ ತಕ್ಷಣವೇ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.[ಮಂಗಳೂರಲ್ಲಿ ಬೃಹತ್ ರಾಷ್ಟ್ರದ್ವಜ, ತುಂಬಿ ಬಂದ ದೇಶಾಭಿಮಾನ]
ಪ್ರಸ್ತುತ ದೂರ ಊರುಗಳಿಂದ ಬರುವ ರೋಗಿಗಳ ಸಹಾಯಕರು ವೈದ್ಯರ ಭೇಟಿಯ ಸಂದರ್ಭ ಹಾಗೂ ಇತರ ಸಮಯದಲ್ಲಿ ಆಸ್ಪತ್ರೆ ಹೊರಗೆ ಅಲೆದಾಡುವ ಪರಿಸ್ಥಿತಿ ಇದೆ. ಹಾಗಾಗಿ ಅವರಿಗೆ ಆಶ್ರಯ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು 'ಸ್ನೇಹಾಲಯ ಮಾನ್ನಾ' ಕಾರ್ಯಕ್ರಮದ ರೂವಾರಿ, ಸ್ನೇಹಾಲಯ ಟ್ರಸ್ಟ್ನ ನಿರ್ದೇಶಕ ಜೋಸೆಫ್ ಕ್ರಾಸ್ತಾ ಮನವಿ ಮಾಡಿದ್ದರು.
ಜೋಸೆಫ್ ಅವರ ಮನವಿ ಸ್ವೀಕರಿಸಿದ ಖಾದರ್ ಅವರು ರೋಗಿಗಳ ಸಹಾಯಕರಿಗೆ ಮಧ್ಯಾಹ್ನದ ಊಟ ನೀಡುವ ಈ ಕಾರ್ಯ ಕ್ರಮವನ್ನು ರಾಜ್ಯದ ಇತರ ಜಿಲ್ಲೆಗಳಲ್ಲೂ ದಾನಿಗಳ ನೆರವಿನೊಂದಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಮಾತನಾಡಿ, ಕಾರ್ಯಕ್ರಮದಲ್ಲಿ ನೆರೆದ ಎಲ್ಲರೂ ಒಪ್ಪಿದರೆ ವರ್ಷ ಪೂರ್ತಿ ಊಟದ ವ್ಯವಸ್ಥೆ ಮಾಡಬಹುದು ಎಂದು ಆಶಯ ವ್ಯಕ್ತ ಪಡಿಸಿದರು. ಸ್ನೇಹಾಲಯ ಸಂಸ್ಥೆಯಿಂದ ನೀಡಲಾಗುವ 100 ದಿನಗಳ ಊಟದ ವ್ಯವಸ್ಥೆಗೆ ದಾನಿಗಳ ವ್ಯವಸ್ಥೆ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಮಂಜೇಶ್ವರ ಬಚ್ಚಳಿಕೆಯಿಂದ ವೆನ್ಲಾಕ್ ಆಸ್ಪತ್ರೆಗೆ ಊಟವನ್ನು ಸಾಗಿಸಲು ತಲಾ 6 ಲಕ್ಷದ 2 ವಾಹನಗಳನ್ನು ಒದಗಿಸಿರುವ ಶಾಸಕ ಜೆ.ಆರ್.ಲೋಬೊ ಹಾಗೂ ಸುಲ್ತಾನ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಆಡಳಿತ ನಿರ್ದೇಶಕ ಡಾ.ಅಬ್ದುರ್ರವೂಫ್ರ್ ರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಕುಲಶೇಖರ ಚರ್ಚ್ನ ಪ್ರಧಾನ ಗುರು ವಂ.ಫಾ.ವಿಕ್ಟರ್ ಮಚಾದೊ ವಹಿಸಿದ್ದರು.
ವೇದಿಕೆಯಲ್ಲಿ ಫೋರ್ವಿಂಡ್ಸ್ ಮಾಸ್ ಕಮ್ಯುನಿಕೇಶನ್ನ ಎಲಿಯಸ್ ಫರ್ನಾಂಡಿಸ್, ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ, ವೆನ್ಲಾಕ್ ಆಸ್ಪತ್ರೆ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ರಾಜೇಶ್ವರಿದೇವಿ ಉಪಸ್ಥಿತರಿದ್ದರು. ಕಂಕನಾಡಿಯ ಸಂತ ಅಲ್ಪೋನ್ಸ್ ಚರ್ಚ್ನ ಧರ್ಮಗುರು ವಂ. ಫಾ. ಸೆಬೆಸ್ಟಿಯನ್ ಚೆಲಕಪಳ್ಳಿ ಆಶೀರ್ವಚನ ನೀಡಿದರು.