ಮಸೂದ್ ಸಾವಿನ ಕಾರಣ ನನ್ನ ಗಮನಕ್ಕೆ ಬಂದಿದೆ: ಎಚ್ಡಿಕೆ
ಮಂಗಳೂರು, ಆಗಸ್ಟ್ 1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆಗೊಳಗಾದ ಮೂವರು ಯುವಕರ ಮನೆಗೆ ತೆರಳಿದ ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಕುಮಾರಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಇತ್ತೀಚೆಗೆ ಹತ್ಯೆಯಾದ ಪ್ರವೀಣ್ ನೆಟ್ಟಾರು, ಮಸೂದ್ ಹಾಗೂ ಫಾಜಿಲ್ ಮನೆಗಳಿಗೆ ಭೇಟಿ ನೀಡಿದ್ದಾರೆ. ಮೂರೂ ಮನೆಗಳಿಗೆ ಪಕ್ಷದ ಪರವಾಗಿ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ ಕುಮಾರಸ್ವಾಮಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಮೊದಲು ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಿದ ಎಚ್ ಡಿ ಕುಮಾರಸ್ವಾಮಿ, ಪ್ರವೀಣ್ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದರು. ಪ್ರವೀಣ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು ಪ್ರವೀಣ್ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ತಾನೂ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಭರವಸೆ ನೀಡಿದರು.
ಮಂಗಳೂರಿಗೆ ಎಚ್ಡಿಕೆ ಭೇಟಿ: ಮೂರು ಕುಟುಂಬಕ್ಕೂ ಪರಿಹಾರ ವಿತರಣೆ
ನಂತರ ಮಾಧ್ಯಮವರ ಜೊತೆಗೆ ಮಾತನಾಡಿ, "ಪ್ರವೀಣ್ ಸಾವಿಗೆ ಕಾರಣಕರ್ತರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಕುಟುಂಬದ ಅಭಿಪ್ರಾಯ ಕೂಡಾ ಅದೇ ಆಗಿದೆ. ಅವರು ನೋವನ್ನು ನಮ್ಮ ಮುಂದೆ ಹೇಳಿಕೊಡಿದ್ದಾರೆ. ಈ ಪ್ರಕರಣದಲ್ಲಿ ಕಾಟಾಚಾರದ ತನಿಖೆ ಆಗಬಾರದು. ವಿಧವೆ ತಂಗಿಯನ್ನು ಸಾಕುವ ಜವಾಬ್ದಾರಿ ಇದೆ. ಸರಕಾರ ತನ್ನ ಜವಾಬ್ದಾರಿ ನಿರ್ವಹಿಸಲು ಆಗದೆ ತನಿಖೆಯನ್ನು ಎನ್ಐಎಗೆ ಹಸ್ತಾಂತರ ಮಾಡಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ತೀರ್ಮಾನವಾಗಿದೆ. ನಮ್ಮ ಅಧಿಕಾರಿಗಳು ಬಹಳ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಎನ್ಐಎ ಗೆ ವಹಿಸಿದ ಪ್ರಕರಣಗಳ ರಿಸಲ್ಟ್ ಏನಾಗಿವೆ?," ಎಂದು ಬೆಳ್ಳಾರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸರಕಾರದ ನಿರ್ಧಾರವನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಂತರ ಬೆಳ್ಳಾರೆಯ ಪ್ರವೀಣ್ ಹತ್ಯೆಗೆ ವಾರ ಮುನ್ನ ಕೊಲೆಯಾಗಿದ್ದ ಕಳೆಂಜದಲ್ಲಿರುವ ಮಸೂದ್ ಮನೆಗೆ ಭೇಟಿ ನೀಡಿದ ಎಚ್ಡಿ ಕುಮಾರಸ್ವಾಮಿ, ಮಸೂದ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು. ನಂತರ ಕುಟುಂಬಸ್ಥರಿಗೆ ಐದು ಲಕ್ಷ ರೂಗಳ ಪರಿಹಾರದ ಚೆಕ್ ನೀಡಿದರು.
ಮಸೂದ್ ಮನೆಯಲ್ಲಿ ಮಾತನಾಡುವ ವೇಳೆ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. " ಸಿಎಂ ಬಸವರಾಜ ಬೊಮ್ಮಾಯಿ, ಮಸೂದ್ ಮನೆಗೆ ಬಾರದೆ ಬೇಜಾವಬ್ದಾರಿತನ ತೋರಿಸಿದ್ದಾರೆ. ಮಸೂದ್ ಮನೆಗೆ ಭೇಟಿ ನೀಡುವ ಕನಿಷ್ಠ ಸೌಜನ್ಯವನ್ನು ಸಿಎಂ ತೋರಿಸಿಲ್ಲ. ಮಸೂದ್ ಸಾವಿನ ಕಾರಣ ನನ್ನ ಗಮನಕ್ಕೆ ಬಂದಿದೆ. ಕೊಲೆಗೆ ಕಾರಣ ತಿಳಿದು ಪೊಲೀಸರ ಗಮನಕ್ಕೆ ತರುತ್ತೇನೆ. ಹತ್ಯೆಯ ಸತ್ಯಾಸತ್ಯತೆ ಹೊರಬರಬೇಕಾಗಿದೆ. ಮಸೂದ್ ಯಾವುದೇ ಸಂಘಟನೆ, ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಕೊರೊನಾ ಸಂದರ್ಭ ಅವರಿಗೆ ಹಿಂದೂಗಳೇ ಪೈಂಟಿಂಗ್ ಕೆಲಸ ಕೊಟ್ಟಿದ್ದರು. ಹಿಂದುಗಳೇ ಒಂದು ಕರುವನ್ನು ಸಾಕಲು ಕೊಟ್ಟಿದ್ದಾರೆ. ಅಲ್ಲಿಂದಲೇ ಕೊಲೆಗೆ ಸ್ಕೆಚ್ ನಡೆಸಿದ್ದಾರೆ," ಎಂದು ಕಳೆಂಜದಲ್ಲಿ ಮಾಜಿ ಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.