ಮಂಗಳೂರು ಬಾಂಬ್ ಪ್ರಕರಣವನ್ನು "ಬಿಜೆಪಿ ಪ್ರಹಸನ" ಎಂದು ನಗೆಯಾಡಿದ ಎಚ್ ಡಿಕೆ
ಮಂಗಳೂರು, ಜನವರಿ 21: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ, ಶೃಂಗೇರಿಯ ಶಾರದಾ ದೇಗುಲದಲ್ಲಿ ಯಾಗ ಮುಗಿಸಿಕೊಂಡು ನೇರ ಮಂಗಳೂರಿಗೆ ಬಂದಿಳಿದಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಗಳೂರಿನ ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬಾಂಬ್ ಪತ್ತೆಯಾದ ಪ್ರಕರಣದ ಕುರಿತು ವಿವರವನ್ನು ಪಡೆದಿದ್ದಾರೆ. ಈ ಕುರಿತು ಮಾತನಾಡಿದ ಅವರು, "ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ್ದೇನೆ. ಕಮಿಷನರ್ ಕೆಲ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಅದನ್ನು ಇಲ್ಲಿ ಬಹಿರಂಗಪಡಿಸುವಂತಿಲ್ಲ" ಎಂದಷ್ಟೇ ಹೇಳಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ಸರ್ಕಾರದ ಕುರಿತು, ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಯ ಕುರಿತು ಟೀಕೆ ಮಾಡಿದ್ದಾರೆ.
"ಬಿಜೆಪಿ 130 ಕೋಟಿ ಜನರ ಮಂಪರು ಪರೀಕ್ಷೆ ಮಾಡಲು ಹೊರಟಿದೆ"
"ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಜನಜಾಗೃತಿ ಮಾಡುತ್ತೇವೆ. ಮನೆ ಮನೆಗೆ ಹೋಗಿ ಈ ಬಗ್ಗೆ ತಿಳಿವಳಿಕೆ ನೀಡುತ್ತೇವೆ. ಬಿಜೆಪಿ 130 ಕೋಟಿ ಜನರ ಮಂಪರು ಪರೀಕ್ಷೆ ಮಾಡಲು ಹೊರಟಿದೆ" ಎಂದು ಟೀಕಿಸಿದ್ದಾರೆ. ಜೊತೆಗೆ ಮಂಗಳೂರಿಗೆ ಬೆಂಕಿ ಇಡಬೇಡಿ ಎಂದು ಶೋಭಾ ಕರಂದ್ಲಾಜೆಗೆ ಹೇಳಿದ್ದಾರೆ. "ಸಂಘರ್ಷ ಹುಟ್ಟಿಸುವ ಕೆಲಸ ಮಾಡಬೇಡಿ. ಮಂಗಳೂರು ನಗರವನ್ನು ಹಾಳುಮಾಡಬೇಡಿ" ಎಂದಿದ್ದಾರೆ.
ಕುಮಾರಸ್ವಾಮಿ ಭೇಟಿ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಟ್ವೀಟ್
"ಬಾಂಬ್ ಪ್ರಹಸನದ ಸತ್ಯ ಹೊರಹಾಕಿ"
"ಬಿಜೆಪಿ ಸಿಎಎ ಮೂಲಕ ಕಂದಕ ಸೃಷ್ಟಿ ಮಾಡುತ್ತಿದೆ. ಜನ ಬಿಜೆಪಿ ವಿರುದ್ಧ ಒಗ್ಗೂಡಬೇಕು ಎಂದಿದ್ದಲ್ಲದೆ, ಮಂಗಳೂರಿನ ಬಾಂಬ್ ಪ್ರಕರಣವನ್ನು ಪ್ರಹಸನ ಎಂದಿದ್ದಾರೆ. "ಈ ಬಾಂಬ್ ಪ್ರಹಸನದ ಸತ್ಯಾಸತ್ಯತೆ ಹೊರಹಾಕಿ ಎಂದು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ. ಎರಡು ಧರ್ಮದ ನಡುವೆ ಕಂದಕ ಉಂಟು ಮಾಡಲು ಬಾಂಬ್ ಇಡುವ ಪ್ರಹಸನ ನಡೆದಿದೆ. ರಾಜ್ಯದಲ್ಲಿ ವಿಹಿಂಪ, ಆರ್ ಎಸ್ ಎಸ್ ಸರ್ಕಾರ ಇಲ್ಲ" ಎಂದು ಆರೋಪಿಸಿದ್ದಾರೆ. "ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ. ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬೇಡಿ. ನನ್ನ ಬಗ್ಗೆ ಯಾವುದೇ ಟೀಕೆ ಬಂದರೂ ಹೆದರಲ್ಲ" ಎಂದು ಪ್ರಹ್ಲಾದ ಜೋಷಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪಟಾಕಿಗೆ ಬಳಸುವ ಪೌಡರ್ ತುಂಬಿದ್ದರು ಎಂದು ವ್ಯಂಗ್ಯ
"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಸಿಟಿವಿ ಇಲ್ವಾ? ಸಿಸಿಟಿವಿ ನಿಷ್ಕ್ರಿಯ ವಿಚಾರ ಸತ್ಯಾಸತ್ಯತೆ ಹೊರಬರಲಿ. ಸಿಸಿಟಿವಿ ಆಫ್ ಮಾಡಿದ್ಯಾರು? ನೆನ್ನೆ ಪ್ರಹಸನಕ್ಕಾಗಿ ಸಿಸಿಟಿವಿ ಆಫ್ ಮಾಡಿದ್ರಾ? ಕೇಂದ್ರ ವಿಮಾನಯಾನ ಸಚಿವರು ಉತ್ತರಿಸಲಿ. ಬಿಜೆಪಿ ಆರ್ ಎಸ್ ಎಸ್ ನಿರ್ದೇಶನದಲ್ಲಿ ಕೆಲಸ ಮಾಡಬಾರದು. ರಾಜ್ಯದ ಜನತೆಗೆ ಆತಂಕ ಸೃಷ್ಟಿಸುವ ಪ್ರಕರಣ ಇದು. ಜನತಯ ಮುಂದೆ ವಾಸ್ತವದ ಸತ್ಯ ಬಿಚ್ಚಿಡಿ" ಎಂದಿದ್ದಾರೆ. ಬಾಂಬ್ ನಿಷ್ಕ್ರಿಯ ಮಾಡಲು ಪೊಲೀಸರು ಪರಿಶ್ರಮಪಟ್ಟಿದ್ದಾರೆ. ನಿಷ್ಕ್ರಿಯ ಮಾಡಲು ಇಡೀ ದಿನ ಬೇಕಾಯ್ತು" ಎಂದು ವ್ಯಂಗ್ಯವಾಡಿದ್ದಾರೆ.
"14 ತಿಂಗಳ ಅಧಿಕಾರಾವಧಿಯಲ್ಲಿ ಈ ರೀತಿ ಆಗಲು ಬಿಟ್ಟಿರಲಿಲ್ಲ ನಾನು"; ಎಚ್ ಡಿಕೆ
ಮೈತ್ರಿ ಸರ್ಕಾರದ ಬಗ್ಗೆ ಬೆನ್ನು ತಟ್ಟಿಕೊಂಡ ಎಚ್ ಡಿಕೆ
ಮಂಗಳೂರು ನಗರದಲ್ಲಿ ಒಂದಲ್ಲಾ ಒಂದು ಬೆಳವಣಿಗೆ ನಡೆಯುತ್ತಿದೆ. ಮೈತ್ರಿ ಸರಕಾರ ಇದ್ದಾಗ ಕರಾವಳಿ ಶಾಂತವಾಗಿತ್ತು. ಕೇಂದ್ರದ ಸಿಎಎ ನಿರ್ಧಾರದಿಂದ ಮಂಗಳೂರಿನಲ್ಲಿ ಗಲಭೆ ವಾತಾವರಣ ಉಂಟಾಯಿತು. ನಿನ್ನೆ ಬಾಂಬ್ ನಿಷ್ಕ್ರಿಯೆ ಪ್ರಕ್ರಿಯೆ ಗಮನಿಸಿದಾಗ, ಪಟಾಕಿಗೆ ಬಳಸುವ ಮಿಣಿ ಮಿಣಿ ಪೌಡರ್ ತುಂಬಿದ್ದರು ಎನಿಸಿತು. ತುಂಡಾದ ವಯರ್ ಇತ್ತು. ಬಾಂಬ್ ಸಾಗಾಟಕ್ಕೆ ಕಂಟೈನರ್ ಬಳಸಲಾಗಿತ್ತು. ಮುಖಕ್ಕೆ ಹಾಕುವ ಪೌಡರ್ ತುಂಬಿದ್ರೋ ಏನೊ?. ಇದೆಲ್ಲಾ ಗಣರಾಜ್ಯೋತ್ಸವದ ಅಣಕು ಪ್ರದರ್ಶನದ ರೀತಿ ಇತ್ತು" ಎಂದು ವ್ಯಂಗ್ಯ ಮಾಡಿದರು.