ಬಸ್ಸಿನಲ್ಲಿ ಯುವತಿಗೆ ಕಿರುಕುಳ, ತಡೆಯಲೆತ್ನಿಸಿದ ನಿರ್ವಾಹಕನಿಗೆ ಹಲ್ಲೆ
ಮಂಗಳೂರು, ಸೆಪ್ಟೆಂಬರ್ 27: ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ಆಕ್ಷೇಪಿಸಿದ ಬಸ್ ನಿರ್ವಾಹಕನನ್ನೇ ಯುವಕನೋರ್ವ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಹೊರವಲಯದ ಸುರತ್ಕಲ್ ಸಮೀಪದ ಕಾನ ಎಂಬಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಹಿನ್ನಲೆಯಲ್ಲಿ ಆ ಯುವಕನನ್ನು ಬಸ್ ಕಂಡಕ್ಟರ್ ಕಿರಣ್ ಪ್ರಶ್ನಿಸಿದ್ದಾರೆ.
ಇಷ್ಟಕ್ಕೇ ರೊಚ್ಚಿಗೆದ್ದ ಯುವಕ ಕಿರಣ್ ಅವರ ಮೇಲೇ ಬಸ್ಸಿನಲ್ಲೇ ಹಲ್ಲೆ ನಡೆಸಿದ್ದಾನೆ. ಎಳೆದಾಡಿ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ್ದರಿಂದ ಕಿರಣ್ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ, "ಈ ಬಸ್ ನಲ್ಲಿ ಇನ್ನು ಮುಂದೆ ಕರ್ತವ್ಯ ಮುಂದುವರಿಸಿದಲ್ಲಿ ನೋಡಿಕೊಳ್ಳುತ್ತೇನೆ" ಎಂದು ಬೆದರಿಕೆ ಬೇರೆ ಹಾಕಿದ್ದಾನೆ.
ಹಲ್ಲೆಯಲ್ಲಿ ಗಾಯಗೊಂಡ ಬಸ್ ನಿರ್ವಾಹಕ ಕಿರಣ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಬಸ್ ನಿರ್ವಾಹಕ ಕಿರಣ್ ಹಿಂದೂ ಜಾಗರಣಾ ವೇದಿಕೆಯ ಸದಸ್ಯ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರು ಆಸ್ಪತ್ರೆಗೆ ತೆರಳಿ ಕಿರಣ್ ಅವರ ಆರೋಗ್ಯ ವಿಚಾರಿಸಿದ್ದಾರೆ.