ಹಸಿರು ಪೀಠಕ್ಕೆ ಕಿಮ್ಮತ್ತು ನೀಡದ ಹಳೆಯಂಗಡಿ ಗ್ರಾ.ಪಂ
ಮಂಗಳೂರು, ಡಿಸೆಂಬರ್ 26 : ಹಳೆಯಂಗಡಿ ಗ್ರಾಮ ಪಂಚಾಯತಿ ಹಸಿರು ಪೀಠದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿನ ಬೆಲೆಯನ್ನು ನೀಡದೆ ತೆರೆದ ಸ್ಥಳದಲ್ಲಿಯೇ ಕಸ ಸುಟ್ಟು ಹಸಿರು ಪೀಠದ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ
ಹಳೆಯಂಗಡಿ ಗ್ರಾಮ ಪಂಚಾಯತಿಯು ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ-ಹಳೆಯಂಗಡಿ ಹೆದ್ದಾರಿ ಪಕ್ಕದಲ್ಲೇ ತ್ಯಾಜ್ಯವನ್ನು ಸುರಿದು ಅದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಸಿರು ನ್ಯಾಯಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿದೆ.
ಹಸಿರು ಪೀಠ ಹೇಳಿರುವುದೇನು? ತೆರೆದ ಸ್ಥಳದಲ್ಲಿ ತ್ಯಾಜ್ಯ, ಕಸವನ್ನು ಸುಡುವಂತಿಲ್ಲ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಯೋಜನೆ ನಿರ್ವಾಹಕರು, ವ್ಯಾಪಾರಿಗಳು ಸಣ್ಣ ಪ್ರಮಾಣದ ಕಸವನ್ನು ಸುಟ್ಟರೆ 5,000ರೂ. ಹಾಗೂ ದೊಡ್ಡ ಪ್ರಮಾಣದಲ್ಲಿ ಸುಟ್ಟರೆ 25,000 ರೂ. ದಂಡ ಪಾವತಿ ಮಾಡಬೇಕೆಂದು ನ್ಯಾ.ಸ್ವತಂತ್ರಕುಮಾರ್ ನೇತೃತ್ವದ ಹಸಿರುಪೀಠ ಗುರುವಾರ ಆದೇಶ ಹೊರಡಿಸಿದೆ.
ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು 2016 ರ ಘನ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸಬೇಕು. ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಹಾಗೂ ಹೂಳುವ ಸ್ಥಳದ ಆಯ್ಕೆ ಮತ್ತು ನಿರ್ಮಾಣವು ಸಮರ್ಪಕವಾಗಿ ಆಗಬೇಕೆಂದು ನ್ಯಯಾಲಯ ಹೇಳಿದೆ.
ಆದರೆ, ಹಳೆಯಂಗಡಿ ಪಂಚಾಯತಿ ಆಡಳಿತ ಇನ್ನೂ ಕಣ್ತೆರೆದಂತೆ ಕಾಣುತ್ತಿಲ್ಲ. ಕಳೆದ ಹಲವು ತಿಂಗಳುಗಳಿಂದ ಹೆದ್ದಾರಿ ಬದಿಯಲ್ಲಿ ತ್ಯಾಜ್ಯವನ್ನು ರಾಶಿ ಹಾಕುತ್ತಿದೆಯಲ್ಲದೆ ಅಲ್ಲಿಯೇ ಸುಡುತ್ತಿದೆ.
ಸಾರ್ವಜನಿಕ ಪ್ರದೇಶದಲ್ಲಿ ಪಂಚಾಯತಿ ತ್ಯಾಜ್ಯ ಸುಡುತ್ತಿದ್ದರೂ ವಿಪಕ್ಷಗಳು ಈ ಬಗ್ಗೆ ಚಕಾರವೆತ್ತದೇ ಇರುವುದು ಸಂಶಯಕ್ಕೆ ಕಾರಣವಾಗಿದೆ.