ಮಂಗಳೂರು: ಎಚ್1ಎನ್1 ತಡೆಗೆ ಮುಂಜಾಗ್ರತಾ ಕ್ರಮ
ಮಂಗಳೂರು, ಫೆ.16: ಮಾರ್ಕ್ ಎಚ್1 ಎನ್ 1 ಚಿಕಿತ್ಸೆಗೆ ಬೇಕಾದ ಔಷಧ ದಾಸ್ತಾನು ಜಿಲ್ಲೆಯಲ್ಲಿದ್ದು ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಚ್1ಎನ್1 ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಜನರು ಅನಗತ್ಯ ಗೊಂದಲಕ್ಕೆ ಸಿಲುಕಬಾರದು. ರೋಗ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಧಾವಿಸಬೇಕು ಎಂದು ಹೇಳಿದರು.[ಎಚ್1ಎನ್1 ಗೆ ರಾಜ್ಯಾದ್ಯಂತ 20 ಮಂದಿ ಬಲಿ]
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ಎರಡು ಸಾವಿರ ಮಾತ್ರೆಗಳನ್ನು ದಾಸ್ತಾನಿರಿಸಲಾಗಿದೆ. ಏಕ ಕಾಲಕ್ಕೆ 200 ಮಂದಿಗೆ ಚಿಕಿತ್ಸೆ ನೀಡಬಹುದಾಗಿದೆ. ಈ ವರೆಗೆ ಒಟ್ಟು 32 ಮಂದಿ ರೋಗ ಶಂಕಿತ ವ್ಯಕ್ತಿಗಳ ಮಾದರಿ ತಪಾಸಣೆ ನಡೆಸಲಾಗಿದ್ದು, ಕೇವಲ 7 ಮಂದಿಯಲ್ಲಿ ಮಾತ್ರ ರೋಗ ಲಕ್ಷಣ ಕಂಡುಬಂದಿದೆ ಎಂದು ಮಾಹಿತಿ ನೀಡಿದರು.
ಏಳು ಮಂದಿ ಪೈಕಿ ಗುಜರಾತ್ ಮತ್ತು ಕೇರಳದ ತಲಾ ಒಬ್ಬರು ಮೃತಪಟ್ಟಿದ್ದು, ಉಡುಪಿಯ ಇಬ್ಬರು, ಮಡಿಕೇರಿಯ ಇಬ್ಬರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.[ಹಂದಿ ಜ್ವರ: ಏನು ಮಾಡಬೇಕು? ಏನು ಮಾಡಬಾರದು?]
ಜನ ಸಾಮಾನ್ಯರಿಗೆ ಎಚ್1 ಎನ್1 ರೋಗ ಲಕ್ಷಣ ಬಗ್ಗೆ ಶಂಕೆ ವ್ಯಕ್ತವಾದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಬಹುದು. ಆರು ಗಂಟೆಯ ಒಳಗೆ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಾಜೇಶ್, ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿ, ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.